ಫಿಲ್ಮ್ ಫೆಸ್ಟಿವಲ್ ನಲ್ಲಿ 'ಸೀತಾರಾಮ ಕಲ್ಯಾಣ' ? ನಾಗತಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯೆ
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರವರಿ 21 ರಿಂದ ಶುರು ಆಗುತ್ತಿದೆ. ಈ ವರ್ಷದ ಚಿತ್ರೋತ್ಸವ ಶುರು ಆಗುವ ಮೊದಲ ಬಹಳ ಚರ್ಚೆಗೆ ಕಾರಣವಾಗಿದೆ.
2018 ಸಾಲಿನ ಸಿನಿಮಾಗಳ ಚಿತ್ರೋತ್ಸವ ನಡೆಯುತ್ತಿದ್ದು, ಇದರಲ್ಲಿ 2019ರಲ್ಲಿ ಬಿಡುಗಡೆಯಾದ 'ಸೀತಾರಾಮ ಕಲ್ಯಾಣ' ಚಿತ್ರಕ್ಕೆ ಅವಕಾಶ ನೀಡಲಿದೆ ಎಂಬ ಸುದ್ದಿ ಇತ್ತು. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ನಟಿಸಿರುವ ಸಿನಿಮಾ ಎನ್ನುವ ಕಾರಣಕ್ಕೆ 'ಸೀತಾರಾಮ ಕಲ್ಯಾಣ' ಚಿತ್ರವನ್ನು ಆಯ್ಕೆ ಮಾಡಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಈ ಬಗ್ಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
''ಮನರಂಜನೆ ವಿಭಾಗದ ಸಿನಿಮಾಗಳ ಆಯ್ಕೆ ಮಾಡುವುದು ಫಿಲ್ಮ್ ಚೆಂಬರ್. 'ಸೀತಾರಾಮ ಕಲ್ಯಾಣ' ಸಿನಿಮಾ ಆಯ್ಕೆ ಮಾಡಿ ಎಂದು ಸರ್ಕಾರದ ವತಿಯಿಂದ ಯಾವುದೇ ಒತ್ತಡ ಬಂದಿಲ್ಲ. ಚಿತ್ರೋತ್ಸವ ಮುಂದಕ್ಕೆ ಹೋದ ಕಾರಣ ಈ ವರ್ಷ ಜನವರಿಯಲ್ಲಿ ಬಿಡುಗಡೆಯಾದ ಸಿನಿಮಾಗಳಿಗೂ ಅವಕಾಶ ನೀಡಿದ್ದೇವೆ.'' ಎಂದಿದ್ದಾರೆ.

''ಸೀತಾರಾಮ ಕಲ್ಯಾಣ' ಮಾತ್ರವಲ್ಲದೆ ಜನವರಿಯಲ್ಲಿ ಬಿಡುಗಡೆಯಾದ ಎಲ್ಲ ಚಿತ್ರಗಳಿಗೆ ಅವಕಾಶ ನೀಡಿದ್ದೇವೆ. ಆ ಪಟ್ಟಿಯಲ್ಲಿ ಕೆಲ ಕಲಾತ್ಮಕ ಸಿನಿಮಾಗಳು ಬಂದಿವೆ. 'ಸೀತಾರಾಮ ಕಲ್ಯಾಣ' ಸಿನಿಮಾ ಇನ್ನು ಆಯ್ಕೆ ಆಗಿದೆ ಅಂತೇನು ಇಲ್ಲ.'' ಎಂದು ವಿವರಿಸಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಮಾತಿನ ಪ್ರಕಾರ 'ಸೀತಾರಾಮ ಕಲ್ಯಾಣ' ಸಿನಿಮಾ ಈ ಬಾರಿಯ ಚಿತ್ರೋತ್ಸವಕ್ಕೆ ಆಯ್ಕೆ ಆಗಬಹುದು ಅಥವಾ ಆಗದೆಯೂ ಇರಬಹುದು. ಆದರೆ, ಅಂತಿಮ ಪಟ್ಟಿಯಲ್ಲಿಯೇ ಅದು ತಿಳಿಯಲಿದೆ.
'ಕೆಜಿಎಫ್', 'ಟಗರು', 'ಅಯೋಗ್ಯ', 'ದಿ ವಿಲನ್', 'ರಾಂಬೋ 2', 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು', 'ಗುಳ್ಟು', 'ರಾಜು ಕನ್ನಡ ಮೀಡಿಯಂ' ಈ ಚಿತ್ರಗಳು ಈ ಬಾರಿಯ ಚಿತ್ರೋತ್ಸವದಲ್ಲಿ ಮನರಂಜನೆ ಸಿನಿಮಾಗಳ ವಿಭಾಗದಲ್ಲಿ ಪ್ರದರ್ಶನ ಆಗುತ್ತಿವೆ.


Click it and Unblock the Notifications











