ಬಿಗ್ಬಾಸ್ ಮಾಜಿ ಸ್ಪರ್ಧಿಯ ಸಹಾಯ ನೆನೆದ ಹಿರಿಯ ನಟ ಅಮರ್ನಾಥ್
ಕೊರೊನಾ ಸಂಕಷ್ಟದ ಸಮಯದಲ್ಲಿ ಇಡೀಯ ಚಿತ್ರರಂಗ ಸಂಕಷ್ಟದಲ್ಲಿದೆ. ದೊಡ್ಡ-ದೊಡ್ಡ ನಟ, ನಿರ್ದೇಶಕ, ನಿರ್ಮಾಪಕರು ಆರಾಮವಾಗಿದ್ದಾರಾದರೂ ಸಂಕಷ್ಟಕ್ಕೆ ಸಿಲುಕಿರುವುದು ಸಣ್ಣ ಪುಟ್ಟ ಕಲಾವಿದರು. ಹಿರಿಯ ಕಲಾವಿದರು ಮತ್ತು ಸಿನಿಮಾ ದಿನಗೂಲಿ ಕಾರ್ಮಿಕರು.
Recommended Video
ಕನ್ನಡ ಚಿತ್ರರಂಗದಲ್ಲಿ 48 ವರ್ಷ ಕಾಲ ಸೇವೆ ಸಲ್ಲಿಸಿರುವ ಹಿರಿಯ ನಟ ಅಮರ್ನಾಥ್ ಆರಾಧ್ಯ ಅವರು ಇಂದು ವಿಡಿಯೋ ಒಂದನ್ನು ಮಾಡಿದ್ದು, 'ಈ ಕೋವಿಡ್ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟರು ತೀವ್ರ ಸಂಕಷ್ಟದಲ್ಲಿ ಇದ್ದಾರೆ ಅವರಿಗೆ ನೆರವಿನ ಅವಶ್ಯಕತೆ ಇದೆ. ಆದರೆ ನೆರವು ನೀಡುವವರ ಸಂಖ್ಯೆ ಬಹಳ ಕಡಿಮೆ ಇದೆ' ಎಂದಿದ್ದಾರೆ.
'ಚಿತ್ರರಂಗದ ಕೊಡುಗೈ ದಾನಿ ಅಂಬರೀಶ್ ಅವರನ್ನು ನಾನು ನೋಡಿದ್ದೆ. ಅದಾದ ನಂತರ ಈಗ ಬಿಗ್ಬಾಸ್ ಭುವನ್ ಅವರು ಕೊಡುಗೈ ದಾನಿ ಆಗಿದ್ದಾರೆ' ಎಂದಿದ್ದಾರೆ ಅಮರ್ನಾಥ್.

'ಕಷ್ಟವಿದೆ ಎಂದು ಒಂದು ಫೋನ್ ಮಾಡಿದ ಕೂಡಲೇ ಭುವನ್ ಸ್ಪಂದಿಸಿದರು. 'ನಿಮಗೆ ಏನು ಬೇಕು ಹೇಳಿ?' ಎಂದು ನನ್ನನ್ನೇ ಕೇಳಿದರು. ಅವರ ಪ್ರೀತಿ ಪೂರ್ವಕ ಪ್ರತಿಕ್ರಿಯೆ ನೋಡಿ ನನಗೆ ಕಣ್ಣೀರು ಬಂತು. ಅವರು ಮಾತು ಕೊಟ್ಟಂತೆ ದಿನಸಿ ಕಿಟ್ಟು ಮತ್ತು ಔಷಧಗಳು ಇಂದು ನನ್ನನ್ನು ಸೇರಿದವು' ಎಂದಿದ್ದಾರೆ ಅಮರ್ನಾಥ್.
'ಭುವನ್ ಅವರಂತೆ ಈ ಕೊರೊನಾ ಸಮಯದಲ್ಲಿ ಎಲ್ಲರೂ ಕೆಲಸ ಮಾಡಬೇಕು. ನಮ್ಮಂಥಹಾ ಸಂಕಷ್ಟದಲ್ಲಿರುವ ಹಿರಿಯ ಕಲಾವಿದರ ಜೀವನಕ್ಕೆ ನೆರವಾಗಬೇಕು' ಎಂದ ಅಮರ್ನಾಥ್ ಭುವನ್ ಅವರಿಗೆ ಹೆಚ್ಚಿಗೆ ದೇವರು ಆರೋಗ್ಯ, ಆಯಸ್ಸು, ಅವಕಾಶಗಳು ಸಿಗಲಿ' ಎಂದು ಹಾರೈಸಿದರು.
ಬಿಗ್ಬಾಸ್ ಭುವನ್ ಅವರು ಕೊರೊನಾ ಸಂಕಷ್ಟದ ಸಮಯದಲ್ಲಿ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಭುವನ್ ಮಾತ್ರವೇ ಅಲ್ಲದೆ ನಟ ಉಪೇಂದ್ರ, ಚಿತ್ರಸಾಹಿತಿ ಕವಿರಾಜ್, ನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ ಅವರುಗಳು ಕೊರೊನಾ ಸಂಕಷ್ಟದ ಸಮಯದಲ್ಲಿ ಜನರ ಸಹಾಯಕ್ಕೆ ಬಂದಿದ್ದಾರೆ. ಸಾಧು ಕೋಕಿಲ, ನೀತು ಶೆಟ್ಟಿ, ದಿನಕರ್ ತೂಗುದೀಪ ಹಾಗೂ ಇನ್ನೂ ಕೆಲವರು ಆರ್ಥಿಕ ನೆರವು ನೀಡಿದ್ದಾರೆ.


Click it and Unblock the Notifications











