ಹಿರಿಯ ನಟ ಮತ್ತು ಬರಹಗಾರ ಕೃಷ್ಣ ನಾಡಿಗ್ ನಿಧನ
ಸ್ಯಾಂಡಲ್ ವುಡ್ ನ ಹಿರಿಯ ನಟ ಮತ್ತು ಬರಹಗಾರ ಕೃಷ್ಣ ನಾಡಿಗ್ ಶನಿವಾರ (ಅ.17) ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದ ಅವರು ಸಾಕಷ್ಟು ಸಿನಿಮಾಗಳಿಗೆ ಬರಹಗಾರನಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಕಲಾವಿದರಾಗಿಯೂ ಹೆಚ್ಚು ಜನಪ್ರಿಯರಾಗಿದ್ದಾರೆ.
ಕಳೆದು ಮೂರು ದಿನಗಳಿಂದ ಕೃಷ್ಣ ನಾಡಿಗ್ ಅವರಿಗೆ ಎದೆ ನೋವು ಕಾಣಿಸಿಕೊಳ್ಳುತ್ತಿತ್ತಂತೆ. ಆದರೆ ಶೂಟಿಂಗ್ ಇದ್ದ ಕಾರಣ ವೈದ್ಯರ ಬಳಿ ಹೋಗಲು ನಿರ್ಲಕ್ಷ್ಯ ಮಾಡಿದ್ದಾರೆ. ನಿನ್ನೆ(ಅ.17) ರಾತ್ರಿ ಎದೆ ನೋವು ಜಾಸ್ತಿಯಾಗಿದೆ. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಕೃಷ್ಣ ನಾಡಿಗ್ ನಿಧನಕ್ಕೆ ಕಿರುತೆರೆ ಮತ್ತು ಸ್ಯಾಂಡಲ್ ವುಡ್ ಗಣ್ಯರು ಕಂಬನಿ ಮಿಡಿದಿದ್ದಾರೆ.
ಕೃಷ್ಣ ನಾಡಿಗ್ ಮೂಲತಃ ಚಿಕ್ಕಮಗಳೂರಿನ ಕಡೂರಿನವರು. ತಂದೆ-ತಾಯಿಯಿಂದ ಸಾಂಸ್ಕೃತಿಕ ಲೋಕದ ಕಡೆ ಒಲವು ಬೆಳೆಸಿಕೊಂಡಿದ್ದರು. ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರ ಚಿತ್ರಗಳನ್ನು ನೋಡಿ ತಾವು ನಿರ್ದೇಶಕರಾಗಬೇಕೆಂದು ಕನಸುಕಂಡಿದ್ದರು. ಆದರೆ ಅವರ ಕನಸು ಕೊನೆಗೂ ನನಸಾಗಲಿಲ್ಲ. ಓದು ಮುಗಿಸಿ ಬೆಂಗಳೂರಿಗೆ ಬಂದು ಕಿರ್ಲೋಸ್ಕರ್ ಫ್ಯಾಕ್ಟರಿಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ್ದರು.

ಕೆಲಸ ಮಾಡುತ್ತಲೇ ಸಿನಿಮಾ ಪತ್ರಿಕೆಗಳಿಗಳಿಗೆ ಬರೆಯಲು ಪ್ರಾರಂಭಿಸಿದರು. ಬಳಿಕ ತಾಯಿನಾಡು ಪತ್ರಿಕೆಗೆ ವರದಿಗಾರನಾದರು. ಅಲ್ಲಿಂದ ಸಿನಿಮಾ ಕ್ಷೇತ್ರದ ನಂಟು ಬೆಳೆಸಿಕೊಂಡರು. ಪಿ ಶೇಷಾದ್ರಿಯವರ ಧಾರಾವಾಹಿಯಲ್ಲಿ ಚಿತ್ರಕತೆಗಳಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಅವರಿಂದ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಪಡೆದರು. ಚಕ್ರತೀರ್ಥ ಧಾರಾವಾಹಿ ಮೂಲಕ ನಟರಾಗಿ ಗುರುತಿಸಿಕೊಂಡರು.
Recommended Video
ಪಲ್ಲವಿ ಅನು ಪಲ್ಲವಿ, ಮಹಾದೇವಿ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪೈಲ್ವಾನ್, ಆದಿ ಲಕ್ಷ್ಮಿ ಪುರಾಣ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಕೃಷ್ಣ ನಾಡಿಗ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಗ್ನ ಪತ್ರಿಕೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು.


Click it and Unblock the Notifications











