ಸುದೀಪ್ ಮಾನವೀಯ ಕೆಲಸಕ್ಕೆ ಧನ್ಯವಾದ ತಿಳಿಸಿ ಮನವಿ ಮಾಡಿದ ಹಿರಿಯ ನಟ ಡಿಂಗ್ರಿ ನಾಗರಾಜ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತನ್ನ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೊರೊನಾ ಎರಡನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಯಲ್ಲಿ ಕಿಚ್ಚನ ಟ್ರಸ್ಟ್ ಸಾಕಷ್ಟು ಮಾನವೀಯ ಕೆಲಸ ಮಾಡುತ್ತಿದೆ. ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಸಿನಿಮಾ ಕಾರ್ಮಿಕರಿಗೂ ನೆರವಾಗಿರುವ ಸುದೀಪ್, ಇದೀಗ ಹಿರಿಯ ಕಲಾವಿದರ ಸಹಾಯಕ್ಕೆ ಧಾವಿಸಿದ್ದಾರೆ.
ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸಲು ಸುದೀಪ್ ಒಂದು ತಂಡ ರಚಿಸಿದ್ದು, ಆ ತಂಡದ ಮೂಲಕ ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಆರೋಗ್ಯ ವಿಚಾರಿಸಿ ಅವರಿಗೆ ಗಿಫ್ಟ್ ಬಾಕ್ಸ್ ನೀಡಿ ಜೊತೆಗೆ ಒಂದು ಪ್ರೀತಿಯ ಪತ್ರ ಕಳುಹಿಸುತ್ತಿದ್ದಾರೆ. ಕಿಚ್ಚನ ಈ ಮಾನವೀಯ ಕೆಲಕ್ಕೆ ಹಿರಿಯ ಕಲಾವಿದರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿನಯ ಚಕ್ರವರ್ತಿಗೆ ಧನ್ಯವಾದ ತಿಳಿಸಿ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ.
ಕಿಚ್ಚನ ಮಾನವೀಯ ಕೆಲಸ ಮೆಚ್ಚಿ ಹಿರಿಯ ನಟ, ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಧನ್ಯವಾದ ತಿಳಿಸಿದ್ದಾರೆ. 90 ವರ್ಷಗಳ ಇತಿಹಾಸದಲ್ಲಿ ಯಾರು ಮಾಡಿರದ ಕೆಲಸ ಸುದೀಪ್ ಮಾಡಿದ್ದಾರೆ, ಇಂಥ ಸಂಕಷ್ಟದ ಕಾಲದಲ್ಲಿ ನಮ್ಮ ಸಹಾಯಕ್ಕೆ ಬಂದಿದ್ದು ಶ್ಲಾಘನೀಯ ಎಂದಿದ್ದಾರೆ. ಜೊತೆಗೆ ಕಿಚ್ಚನ ಬಳಿ ಒಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಮುಂದೆ ಓದಿ..

ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ
'ಕರ್ನಾಟಕ ಚಲನಚಿತ್ರರಂಗ ಹುಟ್ಟಿ 90 ವರ್ಷವಾಗುತ್ತಿದೆ. ಈ 90 ವರ್ಷಗಳಲ್ಲಿ ಕರ್ನಾಟಕ ಚಲನಚಿತ್ರರಂಗವನ್ನು 60-70 ವರ್ಷಗಳಿಂದ ಆಳಿ ಇನ್ನು ಉಳಿದ ಹಿರಿಯ ಕಲಾವಿದರಿಗೆ ನಮ್ಮ ಕಿಚ್ಚ ಸುದೀಪ್ ಅವರು, ಮಾನವನಾಗು ಎನ್ನುವ ಸಂಸ್ಥೆಯಿಂದ ಹಿರಿಯ ಕಲಾವಿದರ ಹೆಸರು ಪಡೆದು ಅವರ ಮನೆಗೆ ಹೋಗಿ ಸಾಂತ್ವನ ಹೇಳಿ, ಆರೋಗ್ಯ ವಿಚಾರಿಸಿ, ಗಿಫ್ಟ್ ಬಾಕ್ಸ್ ಕೊಟ್ಟುಬರ್ತಿದ್ದಾರೆ. ನಾವೆಲ್ಲರೂ ಶ್ಲಾಘನೆ ಮಾಡುವ ಕೆಲಸ ಮಾಡುತ್ತಿದ್ದಾರೆ.'

90 ವರ್ಷದ ಇತಿಹಾಸದಲ್ಲಿ ಯಾರು ಮಾಡಿರಲಿಲ್ಲ
'90ವರ್ಷದ ಇತಿಹಾಸದಲ್ಲಿ ಎಲ್ಲ ಹಿರಿಯ ಕಲಾವಿದನ್ನು ನೆನಪಿಸಿಕೊಂಡು ಅವರ ಮನೆಗೆ ಹೊಗುತ್ತಿರುವುದು ತುಂಬಾ ಸಂತೋಷ. ಹಿರಿಯ ಕಲಾವಿದರ ಹೆಸರನ್ನು ಪಟ್ಟಿ ಮಾಡಿ ಕಳುಹಿಸಿದ್ದೆ. ಆ ಪಟ್ಟಿ ಮಾಡಿದ ಮೇಲೆ ಅವರ ಮನೆಗೆ ಹೋಗಿ, ಆರೋಗ್ಯ ವಿಚಾರಿಸಿ ಗಿಫ್ಟ್ ಬಾಕ್ಸ್ ಕೊಡುತ್ತಿದ್ದಾರೆ. ಎಲ್ಲರೂ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.'

ಈ ಪ್ರೀತಿ, ವಿಶ್ವಾಸವನ್ನು ಸದಾಕಾಲ ಉಳಿಸಿಕೊಳ್ಳುತ್ತೇವೆ
'ನಾನು ಕೂಡ ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ ನಮ್ಮಂತ ಈ ಪೋಷಕ ಕಲಾವಿದರ ಮೇಲೆ ತೋರಿಸಿದ ಪ್ರೀತಿ ವಿಶ್ವಾಸವನ್ನು ಸದಾಕಾಲ ಉಳಿಸಿಕೊಳ್ಳುತ್ತೇವೆ ಎಂದು. ದೇವರು ನಿಮಗೆ ಆಯುರಾರೋಗ್ಯ, ಐಶ್ವರ್ಯ ಭಾಗ್ಯ, ಸುಖ, ಸಂತೋಷ, ನೆಮ್ಮದಿ ಕೊಟ್ಟು ಕಾಪಾಡಲಿ' ಎಂದಿದ್ದಾರೆ.
Recommended Video

ನಿಮ್ಮ ಸಿನಿಮಾಗಳಲ್ಲಿ ನಮಗೂ ಕೆಲಸ ಕೊಡಿ
'ಈ ಸಂದರ್ಭದಲ್ಲಿ ನಿಮ್ಮನ್ನು ಕೇಳಿಕೊಳ್ಳುವುದು ಇಷ್ಟೆ, ನಮ್ಮಂತ ಹಿರಿಯ ಕಲಾವಿದರಿಗೆ ನಿಮ್ಮ ಮುಂಬರುವ ಚಿತ್ರಗಳಲ್ಲಿ ಒಂದು ಅಥವಾ ಎರಡು ದಿನಗಳ ಕಾಲ ಕೆಲಸ ಕೊಟ್ಟು ನಮ್ಮನ್ನು ಸಾಕಿದ್ರೆ ನಾವು ನಿಮ್ಮ ಹೆಸರು ಹೇಳಿಕೊಂಡು ತುಂಬಾ ಸಂತೋಷ ಪಡುತ್ತೇವೆ.' ಎಂದು ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











