ಕಟ್ಟಡದಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ: ಮಕ್ಕಳಿಗೆ ಆಸ್ತಿ ಮಾಡದೆ, ಮಕ್ಕಳನ್ನೇ ಆಸ್ತಿ ಮಾಡಿ- ಜಗ್ಗೇಶ್
ಕಾಲೇಜು ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವಿವಿ ಪುರಂನಲ್ಲಿ ನಡೆದಿದೆ. ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್ ಪದವಿ ಓದುತ್ತಿದ್ದ ಜಯಂತ್ ರೆಡ್ಡಿ ಸಾವಿಗೆ ಶರಣಾಗಿದ್ದಾನೆ.
ವಿದ್ಯಾರ್ಥಿ ಆತ್ಮಹತ್ಯೆಯನ್ನು ಹಿರಿಯ ನಟ ಹಾಗೂ ರಾಜಕಾರಣಿ ಜಗ್ಗೇಶ್ ಖಂಡಿಸಿದ್ದಾರೆ. ಟ್ವಿಟ್ಟರ್ನಲ್ಲಿ ಬೇಸರ ವ್ಯಕ್ತಪಡಿಸಿರುವ ನಟ ''ಮಕ್ಕಳಿಗೆ ಆಸ್ತಿ ಮಾಡದೆ, ಮಕ್ಕಳನ್ನೆ ಆಸ್ತಿ ಮಾಡಿ'' ಎಂದು ಪೋಷಕರಿಗೆ ಸಂದೇಶ ರವಾನಿಸಿದ್ದಾರೆ.
ಬಿಐಟಿ ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ
''ಬಹಳ ದುಃಖವಾಯಿತು ಈ ವಿದ್ಯಾರ್ಥಿಯ ಆತ್ಮಹತ್ಯ ನಿಲುವು ಕಂಡು. ನೀ ಒಬ್ಬನೆ ಸಾಯಲಿಲ್ಲಾ ಕಂದ, ತಂದೆ ತಾಯಿ ಬಂಧು-ಮಿತ್ರರ ಕೊಂದು ಬಿಟ್ಟೆ. ಈಸ ಬೇಕು ಇದ್ದು ಜಯಿಸಬೇಕು. ಮಕ್ಕಳಿಗೆ ಬಾಹ್ಯ ವಿದ್ಯೆಗಿಂತ ಸ್ಥಿತಪ್ರಙ್ನತೆ ಹಾಗು ಆಂತರ್ಯ ಗಟ್ಟಿಯಾಗುವ ವಿದ್ಯೆ ಕಲಿಸಬೇಕು ಇಂದಿನ ತಂದೆ-ತಾಯಿ. ಮಕ್ಕಳಿಗೆ ಆಸ್ತಿ ಮಾಡದೆ, ಮಕ್ಕಳನ್ನೆ ಆಸ್ತಿ ಮಾಡಿ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಕಟ್ಟಡದ ಮೇಲಿನಿಂದ ಜಿಗಿದು ಬಿದ್ದ ಕಾರಣ ಜಯಂತ್ ರೆಡ್ಡಿ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳಕ್ಕೆ ವಿವಿ ಪುರಂ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿ ಜಯಂತ್ ರೆಡ್ಡಿ ಸಾಯುವುದಕ್ಕೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಜಯಂತ್ ರೆಡ್ಡಿ ಉತ್ತಮ ವಿದ್ಯಾರ್ಥಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಜಯಂತ್ ರೆಡ್ಡಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ಆದರೆ, ಯಾವ ವಿಚಾರಕ್ಕೆ ಎಂಬ ವಿಷಯ ಹೊರಬಿದ್ದಿಲ್ಲ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777


Click it and Unblock the Notifications











