"ನಡೆದಿದ್ದು ಏನು? ಆಗಿದ್ದು ಏನು? ಯಾರಿಗೂ ಅರ್ಥ ಆಗಿಲ್ಲ": ಹಿರಿಯ ನಟಿ ಲೀಲಾವತಿ ನಿಧನದ ವದಂತಿಗೆ ವಿನೋದ್ ರಾಜ್ ಕಿಡಿ
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯವರಿಗೆ ಈಗ 86-87. ಇಳಿವಯಸ್ಸಿನಲ್ಲಿ ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೇ ಅರ್ಜುನ್ ಸರ್ಜಾ ಮನೆಗೆ ಭೇಟಿ ಕೊಟ್ಟು ಹಿರಿಯ ನಟಿ ಲೀಲಾವತಿಯವರ ಆರೋಗ್ಯವನ್ನು ವಿಚಾರಿಸಿದ್ದರು.
ವಯೋಸಹಜ ಸಮಸ್ಯೆಗಳಿಂದ ಹಾಸಿಗೆ ಹಿಡಿದಿದ್ದರೂ ಹಿರಿಯ ನಟಿ ಮನೆಗೆ ಬಂದವರನ್ನು ಗುರುತು ಹಿಡಿಯುತ್ತಾರೆ. ಅವರಿಗೆ ಪ್ರತಿಕ್ರಿಯೆ ನೀಡುತ್ತಾರೆ. ಹೀಗಿರುವಾಗ ಕೆಲವು ದಿನಗಳ ಹಿಂದೆ ಯಾರೋ ಕಿಡಿಗೇಡಿಗಳು ಹಿರಿಯ ನಟಿ ಲೀಲಾವತಿ ನಿಧನರಾಗಿದ್ದಾರೆಂಬ ಸುದ್ದಿಯನ್ನು ಹಬ್ಬಿಸಿದ್ದರು. ಈ ಬಗ್ಗೆ ವಿನೋದ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ಸಿನಿವುಡ್ ಯೂಟ್ಯೂಬ್ ಚಾನೆಲ್ಗೆ ಪ್ರತಿಕ್ರಿಯೆ ನೀಡಿದ್ದು, ತಾಯಿ ಆರೋಗ್ಯವಾಗಿದ್ದಾರೆಂದು ಹೇಳಿದ್ದಾರೆ. ಅಲ್ಲದೆ, ಸುಳ್ಳು ಸುದ್ದಿ ಹಬ್ಬಿಸಿದವರನ್ನು ತರಾಟೆಗೆ ತೆಗೆದುಕೊಂಡಿದ್ದು "ನಡೆದಿದ್ದು ಏನು? ಆಗಿದ್ದು ಏನು? ಯಾರಿಗೂ ಅರ್ಥ ಆಗಿಲ್ಲ" ಎಂದು ಮಾರ್ಮಿಕವಾಗಿ ಹೇಳಿಕೆ ಕೊಟ್ಟಿದ್ದಾರೆ.
"ಅಮ್ಮ ಆರೋಗ್ಯವಾಗಿದ್ದಾರೆ"
ಕೆಲವು ದಿನಗಳ ಹಿಂದೆ ಹಿರಿಯ ನಟಿ ಲೀಲಾವತಿ ನಿಧನರಾಗಿದ್ದಾರೆಂಬ ಸುದ್ದಿಯನ್ನು ಹಬ್ಬಿಸಲಾಗಿತ್ತು. ಇದು ವಿನೋದ್ ರಾಜ್ ಮನಸ್ಸಿಗೆ ತುಂಬಾನೇ ಬೇಸರ ತರಿಸಿತ್ತು. ಈ ಕಾರಣಕ್ಕೆ ಸಿನಿವುಡ್ ಜೊತೆಗಿನ ಸಂದರ್ಶನದಲ್ಲಿ ಅಮ್ಮನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ."ಆರೋಗ್ಯವಾಗಿದ್ದಾರೆ ಅಮ್ಮ. ಅವರ ವಯಸ್ಸಿಗೆ ತಕ್ಕಂಗೆ ಹೇಗೆ ಇರಬೇಕೋ ಹಾಕಿದ್ದಾರೆ. 86-87 ವಯಸ್ಸು ಮುಟ್ಟಿದ್ದಾರೆ. ಅವರ ಕಾಲಕ್ಕೆ ಒಂದು ದಿನಕ್ಕೆ ನಾಲ್ಕು ಸಿನಿಮಾಗೆ ಪಾತ್ರ ಮಾಡಿದವರು. ಒಟ್ಟು 650 ಸಿನಿಮಾಗೆ ಪಾತ್ರ ಮಾಡಿದ್ದಾರೆ. ಒಂದು ವರ್ಷ ಆಯ್ತು ಅಡುಗೆ ಬಿಟ್ಟು. ತಮ್ಮ ಅಡುಗೆಯನ್ನು ತಾವೇ ಮಾಡಿಕೊಂಡು ಊಟ ಮಾಡುತ್ತಿದ್ದರು." ಎಂದು ಹೇಳಿದ್ದಾರೆ.
"ಮಂಜುನಾಥನ ಹತ್ತಿರ ಬಿಟ್ಟಿದ್ದೀವಿ"
ಆಗಾಗ ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಅವರ ವಿರುದ್ಧ ಕಿಡಿಗೇಡಿಗಳು ಏನಾದರೂ ಒಂದು ಸುದ್ದಿಯನ್ನು ಹಬ್ಬಿಸುತ್ತಲೇ ಇರುತ್ತಾರೆ. "ಅದ್ಯಾಕೆ ಈ ಸುದ್ದಿ ಹಬ್ಬಿಸಿದ್ರು ಅನ್ನೋದನ್ನು ಮಂಜುನಾಥನ ಹತ್ತಿರ ಬಿಟ್ಟಿದ್ದೀವಿ. ಅವನು ನೋಡಿಕೊಳ್ಳಬೇಕು ಅಷ್ಟೇನೆ." ಎಂದು ವಿನೋದ್ ರಾಜ್ ಅಸಹಾಯಕತೆ ಹೊರಹಾಕಿದ್ದಾರೆ.
"ನಿಮ್ಮ ತಾಯಿಗೆ ಹೀಗೆ ಹೇಳಿದ್ರೆ?"
"ಲೀಲಾವತಿ ಅಮ್ಮನವರನ್ನು ನಿಂದನೆ ಮಾಡಬೇಕು ಅಂದುಕೊಂಡರೆ, ನಮ್ಮನ್ನೇ ನಾವು ಅವಹೇಳನೆ ಮಾಡಿಕೊಂಡಂತೆ. ನಿಮ್ಮ ತಾಯಿಗೆ ಆತರ ಹೇಳಿದ್ದಿದ್ದರೆ, ಸಹಿಸಿಕೊಳ್ಳುತ್ತಿದ್ರಾ ನೀವು? ಖಂಡಿತಾ ಸಹಿಸಿಕೊಳ್ಳೋದಿಲ್ಲ. ನೀವು ಏನು ತಿಳಿದುಕೊಂಡು ಯೋಚನೆ ಮಾಡಿಕೊಂಡು ಮಾತಾಡುತ್ತಿದ್ದಿರೋ ಅದೆಲ್ಲವೂ ಸುಳ್ಳು. ನಡೆದಿದ್ದು ಏನು? ಆಗಿದ್ದು ಏನು? ಯಾರಿಗೂ ಅರ್ಥ ಆಗಿಲ್ಲ. ಅನುಭವಿಸಿದರು ಅನುಭವಿಸಿದವರಿಗೆ. ಒದ್ದಾಡಿದವರು ಒದ್ದಾಡಿದವರಿಗೆ." ಎಂದು ವಿನೋದ್ ರಾಜ್ ತಮ್ಮ ತಾಯಿ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಸಂದೇಶ ರವಾನೆ ಮಾಡಿದ್ದಾರೆ.
ಮನಸ್ಸಿಗೆ ತುಂಬಾನೇ ನೋವಾಗುತ್ತೆ.
ಲೀಲಾವತಿಯವರ ನಿಧನದ ಸುದ್ದಿಯನ್ನು ಯಾವಾಗ ಹಬ್ಬಿಸಿದ್ರು? ವಿನೋದ್ ರಾಜ್ ಪ್ರತಿಕ್ರಿಯೆ ನೀಡಿದ್ದು ಯಾವಾಗ? ಅನ್ನೋ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಸಿನಿವುಡ್ ಯೂಟ್ಯೂಬ್ ಚಾನೆಲ್ ಇಂದು (ನವೆಂಬರ್ 21) ವಿಡಿಯೋವನ್ನು ಪೋಸ್ಟ್ ಮಾಡಿದೆ. ಇದರಲ್ಲಿ ವಿನೋದ್ ರಾಜ್ "ಮನಸ್ಸಿಗೆ ನೋವಾಗುತ್ತೆ.. ನಮ್ಮ ಅಮ್ಮ ಹೇಳಿರೋದು, ನಾನು ಇರಬಹುದು. ನಾನು ಇಲ್ಲದೆ ಇರಬಹುದು. ನನ್ನ ಆತ್ಮ ಸದಾ ನಿಮ್ಮ ಜೊತೆ ಇರುತ್ತೆ ಕಂದಾ. ನಾನು ಹೇಳಿರೋ ದಾರಿನಲ್ಲಿ ನೀನು ನಡಿ. ಯಾರೇ ಬೈಯ್ಯಲಿ. ಯಾರೇ ಹೊಗಳಲಿ. ಯಾರೇ ಹೊಡಿಲಿ. ಯಾರೇ ತೆಗಳಲಿ. ಬೈದಿದ್ದನ್ನೆಲ್ಲ ಮನಸ್ಸಿಲ್ಲಿ ಇಟ್ಟುಕೋ. ಅದರಿಂದ ಮಾತ್ರ ಒಳ್ಳೆಯವನಾಗುವುದಕ್ಕೆ ಸಾಧ್ಯ." ಎಂದು ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











