ಬೈಲಹೊಂಗಲದಲ್ಲಿ ಪ್ರತ್ಯಕ್ಷವಾದ ಹಿರಿಯ ನಟ ಸದಾಶಿವ ಬ್ರಹ್ಮಾವರ್
ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅವರು ಬೆಳಗಾವಿಯ ಬೈಲಹೊಂಗಲದಲ್ಲಿ ಆರಾಮಗಿದ್ದಾರೆ ಎಂದು ಸ್ವತಃ ಸದಾಶಿವ ಅವರೇ ಮಾಧ್ಯಮಕ್ಕೆ ತಿಳಿಸಿದ್ದಾರೆ. ಸದಾಶಿವ ಬ್ರಹ್ಮಾವರ್ ಅವರು ಕಾಣಿಸುತ್ತಿಲ್ಲ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
ಇದರಿಂದ ಅಭಿಮಾನಿಗಳು ಮತ್ತು ಚಿತ್ರರಂಗದವರು ಆತಂಕಕ್ಕೆ ಒಳಗಾಗಿದ್ದರು. ಆದ್ರೆ, ಸದಾಶಿವ ಬ್ರಹ್ಮಾವರ್ ಅವರು ಬೈಲಹೊಂಗಲದಲ್ಲಿರುವ ಮಗನ ಮನೆಯಲ್ಲಿ ಇದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕಳೆದ ವಾರದಲ್ಲಿ ಬಿಜಾಪುರದ ದಾನಮ್ಮ ದೇವಾಸ್ಥಾನಕ್ಕೆ ಹೋಗಿದ್ದರು. ಮನೆಗೆ ವಾಪಸ್ ಆಗುವುದು ಒಂದೆರಡು ದಿನ ತಡವಾಗಿದ್ದರಿಂದ ಈ ರೀತಿಯ ಗೊಂದಲವಾಗಿದೆ ಎಂದು ಸದಾಶಿವ ಬ್ರಹ್ಮಾವರ್ ಅವರು ಸ್ಪಷ್ಟಪಡಿಸಿದ್ದಾರೆ.

''ಬಿಜಾಪುರದಲ್ಲಿರುವ ದಾನಮ್ಮ ದೇವಸ್ಥಾನಕ್ಕೆ ಹೋಗಿದ್ದೆ. ಪ್ರತಿವರ್ಷವೂ ಹೋಗುತ್ತೇನೆ. ಈ ಬಾರಿಯೂ ಹೋಗಿದ್ದೆ. ನಿಗದಿತ ದಿನಕ್ಕಿಂತ ಸ್ವಲ್ಪ ತಡವಾಗಿ ಮನೆಗೆ ಹೋಗಿದ್ದು ಈ ಸಮಸ್ಯೆಯಾಗಿತ್ತು. ಅಷ್ಟೇ, ನನಗೆ ಏನೂ ಆಗಿಲ್ಲ. ನಾನು ಸುಖವಾಗಿದ್ದೀನಿ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡ ಧಾರವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿರುವ ಸದಾಶಿವ ಬ್ರಹ್ಮಾವರ್ ಅವರು ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಾ. ರಾಜ್, ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ಜಗ್ಗೇಶ್, ಪುನೀತ್ ರಾಜ್ಕುಮಾರ್, ಸುದೀಪ್, ದರ್ಶನ್.. ಹೀಗೆ ಕನ್ನಡ ಚಿತ್ರರಂಗದ ನಾಲ್ಕು ಜನರೇಷನ್ ಸ್ಟಾರ್ಗಳೊಂದಿಗೆ ಈ ಹಿರಿಯ ಕಲಾವಿದ ಅಭಿನಯಿಸಿದ್ದಾರೆ. ಕೊನೆಯದಾಗಿ ಶಿವರಾಜ್ ಕುಮಾರ್ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದಲ್ಲಿ ನಟಿಸಿದ್ದರು.


Click it and Unblock the Notifications











