ಹಿರಿಯ ನಟ ಶ್ರೀನಿವಾಸ ಮೂರ್ತಿ ತಮಿಳು ಸಿನಿಮಾವೊಂದಕ್ಕೆ ಹೀರೊ ಆಗಿದ್ರು.. ಈ ವಿಷಯ ನಿಮಗೆ ಗೊತ್ತಾ?
ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಿವಾಸ್ ಮೂರ್ತಿ. ಹಿರಿಯರಿಂದ ಕಿರಿಯರವರೆಗೂ ಇವರ ಪಾತ್ರ ಅಂದರೆ ಎಲ್ಲರಿಗೂ ಬಲು ಇಷ್ಟ. ಅದೆಂತಹದ್ದೇ ಪಾತ್ರಗಳನ್ನು ಕೊಟ್ಟರೂ ಶ್ರೀನಿವಾಸ್ ಮೂರ್ತಿ ಲೀಲಾಜಾಲಾವಾಗಿ ನಟಿಸಿಬಿಡುತ್ತಾರೆ. ಅದಕ್ಕೆ ಅವರು ಅಷ್ಟು ಹತ್ತಿರ ಎನಿಸೋದು.
ತಮ್ಮ ಅಮೋಘ ಅಭಿನಯದಿಂದ ಕನ್ನಡಿಗರ ಮನಸ್ಸು ಗೆದ್ದಿರೋ ನಟ ಶ್ರೀನಿವಾಸಮೂರ್ತಿ 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿಶೇಷ ಅಂದರೆ, ಇದೇ ವೇಳೆ ಅವರು ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ.
ಶ್ರೀನಿವಾಸ್ ಮೂರ್ತಿ ಈ ಎರಡೂ ಸಂಭ್ರಮಗಳನ್ನು ಒಟ್ಟಿಗೆ ಸಂಭ್ರಮಿಸಲು ವಿಶೇಷ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಇದೇ ಮೇ 15 ಹಾಗೂ 16ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ.

ಶ್ರೀನಿವಾಸ್ ಮೂರ್ತಿಯವರು ಜನಪ್ರಿಯ ನಾಟಕ 'ತರಕಾರಿ ಚೆನ್ನಿ' ಹಾಗೂ 'ಸದಾರಮೆ ಕಳ್ಳ' ಎಂಬ ಎರಡು ನಾಟಕಗಳನ್ನು ಈ ಎರಡು ದಿನಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇತ್ತೀಚೆಗೆ ಈ ಕುರಿತು ಸ್ವತ: ಶ್ರೀನಿವಾಸ್ ಮೂರ್ತಿಯವರೇ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಅಂದ್ಹಾಗೆ, ಹಿರಿಯ ನಟ ಶ್ರೀನಿವಾಸ್ ಮೂರ್ತಿ, ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬಂದು ಸರ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ನಾಟಕಗಳಲ್ಲಿ ನಟಿಸಲು ಶುರುವಿಟ್ಟು ಕೊಂಡಿದ್ದರು. ಇಲ್ಲಿಂದ ಸಿನಿಮಾ ಹಾಗೂ ನಾಟಕ ಗೀಳು ಹೆಚ್ಚಾಯಿತು.
ಒಮ್ಮೆ ಇವರ ನಾಟಕವನ್ನು ನೋಡಲು ಎಸ್. ಬಂಗಾರಪ್ಪ ಬಂದಿದ್ದರು. ಇವರ 'ಸದಾರಮೆ ಕಳ್ಳ' ನಾಟಕವನ್ನು ನೋಡಿ ಅಭಿನಂದಿಸಿದ ಘಳಿಗೆಯನ್ನು ನೆನಪಿಸಿಕೊಂಡಿದ್ದಾರೆ. ಅಲ್ಲಿಂದ ಇವರಿಗೆ ನಟನೆ ಮೇಲಿನ ಆಸಕ್ತಿ ಮತ್ತಷ್ಟು ಹೆಚ್ಚಾಯಿತು.
ಶ್ರೀನಿವಾಸ್ ಮೂರ್ತಿ ತಮಿಳಿನ ಒಂದು ಸಿನಿಮಾದಲ್ಲೂ ನಾಯಕನಾಗಿ ನಟಿಸಿದ್ದರು. ಆದರೆ, ಆ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕರಿಗೆ ಕಷ್ಟ ಪಟ್ಟಿದ್ದನ್ನು ನೆನಪಿಸಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ನಟಿಸಿದ 'ಅಪ್ಪು' ಸಿನಿಮಾದ ಬಳಿಕ ನಿರ್ದೇಶಕ ಪುರಿ ಜಗನ್ನಾಥ್ ತೆಲುಗು ಸಿನಿಮಾದಲ್ಲಿ ನಟಿಸುವಂತೆ ಆಫರ್ ನೀಡಿದ್ದರು. ಆದರೆ, ಇವರು ಹೋಗಲಿಲ್ಲ.
ಇಷ್ಟೇ ಅಲ್ಲ ರಜನಿಕಾಂತ್ ಅವರು ಸಹ "ನೀವು ಯಾಕೆ ತಮಿಳಿನಲ್ಲಿ ನಟಿಸಬಾರದು?" ಎಂದು ಕೇಳುತ್ತಿರುತ್ತಾರೆ ಎಂದು ಶ್ರೀನಿವಾಸಮೂರ್ತಿ ನೆನಪಿಸಿಕೊಂಡಿದ್ದಾರೆ.


Click it and Unblock the Notifications











