'ಅಣ್ಣ ಆರಾಮಾಗಿ ಇದ್ದಾನೆ': ಶರಣ್ ಭೇಟಿ ಬಳಿಕ ಸಹೋದರಿ ಶ್ರುತಿ ಸ್ಪಷ್ಟನೆ
ಚಿತ್ರೀಕರಣ ಸಮಯದಲ್ಲಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆ ನಟ ಶರಣ್ ಅವರನ್ನು ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶರಣ್ ಅವರಿಗೆ ಏನಾಯಿತು, ಇದ್ದಕ್ಕಿದ್ದಂತೆ ಶೂಟಿಂಗ್ ಸೆಟ್ನಲ್ಲಿ ಏನಾಯಿತು ಎಂಬ ಆತಂಕ ಕಾಡುತ್ತಿತ್ತು.
ಮಲ್ಲಿಗೆ ಆಸ್ಪತ್ರೆಗೆ ಭೇಟಿ ನೀಡಿ ಅಣ್ಣನ ಆರೋಗ್ಯ ವಿಚಾರಿಸಿದ ನಟಿ ಶ್ರುತಿ ಶರಣ್ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ''ಅಣ್ಣನಿಗೆ ಏನೂ ಆಗಿಲ್ಲ, ಆರಾಮಾಗಿ ಇದ್ದಾನೆ, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

ಎರಡು ದಿನದಿಂದ ಹೊಟ್ಟೆನೋವು ಇತ್ತು
''ಎರಡು ದಿನದಿಂದ ಅಣ್ಣನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ನಿಜಾ. ಆದರೆ, ಶೂಟಿಂಗ್ ಇದ್ದ ಕಾರಣ ಅದನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಇಂದು ಶೂಟಿಂಗ್ ಸಮಯದಲ್ಲಿ ನೋವು ಜಾಸ್ತಿ ಆಗಿದೆ. ವೈದ್ಯರು ಚಿಕಿತ್ಸೆ ಕೊಡ್ತಿದ್ದಾರೆ'' ಎಂದು ತಿಳಿಸಿದ್ದಾರೆ.

ಕಿಡ್ನಿ ಸ್ಟೋನ್ ಇದೆ
''ಹೊಟ್ಟೆ ನೋವು ಹಿನ್ನೆಲೆ ವೈದ್ಯರು ಎಲ್ಲ ರೀತಿ ಸ್ಕ್ಯಾನಿಂಗ್ ಮಾಡಿದ್ದಾರೆ. ಕಿಡ್ನಿ ಸ್ಟೋನ್ ಇದೆ ಹೇಳಿದ್ದಾರೆ. ಹಾಗಾಗಿ, ಇಂದು ಆಸ್ಪತ್ರೆಯಲ್ಲೇ ಇರಲಿದ್ದಾರೆ, ನಾಳೆ ಡಿಸ್ಚಾರ್ಜ್ ಆಗಬಹುದು ಅಥವಾ ಮುಂದಿನ ಚಿಕಿತ್ಸೆ ಏನು ಅಂತ ಹೇಳಬಹುದು'' ಎಂದು ನಟಿ ಶ್ರುತಿ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನಿಂದ ಸಮಸ್ಯೆಯಾಗಬಾರದು ಎನ್ನುತ್ತಿದ್ದಾರೆ
''ಇಷ್ಟು ದಿನ ಕೊರೊನಾ ಲಾಕ್ಡೌನ್ನಿಂದ ಶೂಟಿಂಗ್ ನಿಂತಿದೆ. ಈಗ ನನ್ನಿಂದ ಸಮಸ್ಯೆಯಾಗಬಾರದು ಎಂದು ಹೊಟ್ಟೆ ನೋವಿನ ಸಮಸ್ಯೆಯನ್ನು ಯಾರಿಗೂ ಹೇಳಿಲ್ಲ ಅಷ್ಟೇ. ಈಗಲೂ ಅದೇ ವಿಚಾರ ಹೇಳ್ತಿದ್ರು'' ಎಂದು ಶ್ರುತಿ ಮಾಹಿತಿ ನೀಡಿದ್ದಾರೆ.

ಚಿತ್ರತಂಡಕ್ಕೆ ಧನ್ಯವಾದ
''ಶರಣ್ ಅವರ ಅನಾರೋಗ್ಯದಲ್ಲಿ ಹಿನ್ನೆಲೆ ಚಿತ್ರತಂಡಕ್ಕೆ ಸಮಸ್ಯೆಯಾಗಿರಬಹುದು. ನಿರ್ದೇಶಕ ಸುನಿ ಮತ್ತು ನಿರ್ಮಾಪಕ ಪುಷ್ಕರ್ ಅವರು ಅಣ್ಣನ ಆರೋಗ್ಯ ಮೊದಲು, ಚಿಕಿತ್ಸೆ ಪಡೆಯಲಿ ಎಂದು ಹೇಳಿದ್ದಾರೆ. ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ'' ಎಂದು ಶ್ರುತಿ ತಿಳಿಸಿದರು.
Recommended Video

ಬೆಳಗ್ಗೆ ಏನಾಯಿತು?
ಬೆಂಗಳೂರಿನ ಎಚ್ಎಂಟಿ ಮೈದಾನದಲ್ಲಿ ಅವತಾರ ಪುರುಷ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಶರಣ್ ಅವರಿಗೆ ಹೊಟ್ಟೆ ನೋವು ಬಂದಿದೆ. ತೀವ್ರವಾಗಿ ನೋವು ಹೆಚ್ಚಾದ ಕಾರಣ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಅವತಾರ್ ಪುರುಷ ಸಿನಿಮಾವನ್ನು ಸುನಿ ನಿರ್ದೇಶಿಸುತ್ತಿದ್ದಾರೆ. ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











