ಹಿರಿಯ ನಟಿ ಶ್ರುತಿ ಸಹೋದರಿ ಪುತ್ರಿ ಕೀರ್ತಿ ಕೃಷ್ಣ ಕೈಯಲ್ಲಿರುವ ಸಿನಿಮಾಗಳೆಷ್ಟು?
ಸ್ಯಾಂಡಲ್ವುಡ್ನ ಜನಪ್ರಿಯ ನಟಿ ಶ್ರುತಿ ಕೃಷ್ಣ ಹಾಗೂ ನಟ ಶರಣ್ ಅವರ ಸಹೋದರಿಯ ಉಷಾ ಪುತ್ರಿ ಕೀರ್ತಿ ಕೃಷ್ಣ. ಸಿಂಪಲ್ ಸುನಿ ನಿರ್ದೇಶನದ 'ದೇವರು ರುಜು ಮಾಡಿದನು' ಸಿನಿಮಾ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಬೆಡಗಿ ಈಕೆ. ಇದರ ಬೆನ್ನಲ್ಲೇ ಶ್ರೇಯಸ್ ಮಂಜು ನಟನೆಯ 'ದಿಲ್ ದಾರ್' ಸಿನಿಮಾದಲ್ಲಿನ ನಾಯಕಿಯಾಗಿ ನಟಿಸುವ ಸುವರ್ಣಾವಕಾಶವನ್ನು ಈಕೆ ಪಡೆದುಕೊಂಡಿದ್ದಾರೆ.
ಸಣ್ಣ ವಯಸ್ಸಿನಿಂದಲೇ ಬಣ್ಣದ ಜಗತ್ತನ್ನು ನೋಡಿಕೊಂಡೆ ಬೆಳೆದಂತಹ ಬೆಡಗಿ ಕೀರ್ತಿ ಕೃಷ್ಣ. ಇತ್ತೀಚೆಗಷ್ಟೇ ನಟನೆಯ ನಂಟು ಬೆಳೆಸಿಕೊಂಡಿರುವ ಕೀರ್ತಿ ಕೃಷ್ಣ ಅವರಿಗೆ ಕಲೆ ಎಂಬದು ರಕ್ತಗತವಾಗಿ ಒಲಿದು ಬಂದುದು ಎಂದರೆ ತಪ್ಪಾಗಲಾರದು. ಹೌದು, ಕೀರ್ತಿ ಕೃಷ್ಣ ಅವರ ತಾತ, ಅಜ್ಜಿಯಂದಿರು, ದೊಡ್ಡಮ್ಮ, ಮಾವ ಎಲ್ಲರೂ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡವರು. ಇದೀಗ ಅವರ ಹಾದಿಯಲ್ಲೇ ನಟನೆಗೆ ಕಾಲಿಟ್ಟಿರುವ ಈಕೆ ದಶಕಗಳ ಹಿಂದೆ 'ಶ್ರೀನಾಗಶಕ್ತಿ' ಎಂಬ ಸಿನಿಮಾದಲ್ಲಿ ಶ್ರುತಿ ಜೊತೆಗೆ ಅಭಿನಯಿಸಿದ್ದರು.

ಆ ಸಮಯದಲ್ಲಿಯೇ ತಮ್ಮ ಸಹಜ ನಟನೆಯ ಮೂಲಕ ಸಿನಿ ಪ್ರಿಯರ ಮನ ಸೆಳೆದಿರುವ ಕೀರ್ತಿ ಕೃಷ್ಣಗೆ ಸಹಜವಾಗಿ ಅವಕಾಶಗಳು ಕೂಡಾ ಬರುತ್ತಿದ್ದವು. ಆದರೆ ಓದಿನ ಸಲುವಾಗಿ ನಟನೆಯಿಂದ ದೂರವಿದ್ದ ಇವರು ಈಗ ನಟನೆಗೆ ಕಾಲಿಟ್ಟಿದ್ದು ಸದ್ಯ ಎರಡೆರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
'ದೇವರು ರುಜು ಮಾಡಿದನು', 'ದಿಲ್ ದಾರ್' ಸಿನಿಮಾಗಳಲ್ಲಿ ನಟಿಸುತ್ತಿರುವ ಕೀರ್ತಿ ಕೃಷ್ಣ ಅವರಿಗೆ ನಟನಾ ಲೋಕ ಹೊಸತಾದರೂ ಆಕೆ ನಟನೆಯ ಕುರಿತು ಯಾವೊಂದು ತರಬೇತಿ ಪಡೆದಿಲ್ಲ. ಮೊದಲೇ ಹೇಳಿದಂತೆ ಆಕೆಗೆ ಅದು ರಕ್ತಗತವಾಗಿ ಬಂದತಹುದು. ದೊಡ್ಡಮ್ಮ, ಮಾವ ಅವರು ಕೀರ್ತಿ ಅವರಿಗೆ ಆಗಾಗ ಸಲಹೆಗಳನ್ನು ನೀಡುತ್ತಿದ್ದರು.
ನಟನಾ ಕ್ಷೇತ್ರವನ್ನು ಆಯ್ಕೆ ಮಾಡಬೇಕಾದರೆ ಮೊದಲು ಶಿಸ್ತನ್ನು ರೂಢಿಸಿಕೊಳ್ಳಬೇಕಾದುದು ಮುಖ್ಯ ಎಂಬ ಮಾತನ್ನು ಅಚ್ಚುಕಟ್ಟಾಗಿ ಪಾಲಿಸುವ ಈಕೆ ನಟನೆಯ ಕುರಿತಾಗಿ ಯಾವೊಂದು ತರಬೇತಿ ಪಡೆಯದಿದ್ದರೂ, ನಾಟಕಕ್ಕೆ ಸಂಬಂಧಿಸಿ ನಾಲ್ಕು ತಿಂಗಳ ಕೋರ್ಸ್ ಮಾಡಿದ್ದಾರೆ. 'ದೇವರು ರುಜು ಮಾಡಿದನು' ಸಿನಿಮಾದಲ್ಲಿ ಕೀರ್ತಿ ಅವರು ವೀಣಾವಾದಕಿಯಾಗಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಈಕೆ ಕುವೆಂಪು ಅವರ ಅಭಿಮಾನಿಯಾಗಿಯೂ ಕಾಣಿಸಿಕೊಂಡಿದ್ದು ಸಾಂಪ್ರದಾಯಿಕ ಹುಡುಗಿಯಾಗಿ ಮಿಂಚಿದ್ದಾರೆ. ಇನ್ನು 'ದಿಲ್ ದಾರ್' ಸಿನಿಮಾದಲ್ಲಿ ಪಕ್ಕಾ ಮಾಡರ್ನ್, ಬೋಲ್ಡ್ ಹುಡುಗಿಯಾಗಿ ಈಕೆ ನಟಿಸಿದ್ದಾರೆ. ಇದೊಂದು ಕಾಲೇಜು ಲವ್ ಸ್ಟೋರಿಯಾಗಿದೆ.
ಅಂದ ಹಾಗೇ ಎರಡು ಸಿನಿಮಾಗಳಲ್ಲೂ ಭಿನ್ನ ರೀತಿಯ ಪಾತ್ರಗಳನ್ನು ನಿಭಾಯಿಸುತ್ತಿರುವ ಈಕೆ ಪಾತ್ರಗಳ ಆಯ್ಕೆಯಲ್ಲಿ ತುಂಬಾ ಫ್ಲೆಕ್ಸಿಬಲ್. ಪ್ರಾಮುಖ್ಯತೆ ಇರುವಂತಹ ಪಾತ್ರಗಳಲ್ಲಿ ನಟಿಸಲು ಈಕೆಗಿಷ್ಟ. ಒಟ್ಟಿನಲ್ಲಿ ಅರ್ಥಪೂರ್ಣವಾದಂತಹ ಪಾತ್ರಗಳನ್ನೇ ಆಯ್ಕೆ ಮಾಡುವ ಈಕೆ ನಟನೆಯ ಮೂಲಕ ಮೋಡಿ ಮಾಡುತ್ತಿದ್ದಾರೆ.


Click it and Unblock the Notifications











