Don't Miss!
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿರಿಯ ನಿರೂಪಕ, ನಟ ಸಂಜೀವ ಕುಲಕರ್ಣಿ ಇನ್ನಿಲ್ಲ
ಬೆಂಗಳೂರು, ಜನವರಿ 26: ಹಿರಿಯ ನಿರೂಪಕ, ರಂಗಕರ್ಮಿ, ಕಿರುತೆರೆ ನಟ ಸಂಜೀವ ಕುಲಕರ್ಣಿ (49) ಅನಾರೋಗ್ಯದಿಂದ ಶನಿವಾರ ನಿಧನರಾದರು.
ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಳೆದ 15 ವರ್ಷಗಳಿಂದ ಅವರು ಕಾರ್ಡಿಯೋಮಪತಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ನಗರದ ನಾರಾಯಣ ಹೃದಯ ವಿಜ್ಞಾನ ಸಂಸ್ಥೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ರಾತ್ರಿ 11.40ರ ಸುಮಾರಿಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಕೊನೆಯುಸಿರೆಳೆದರು.
ಸಂಜೀವ ಕುಲಕರ್ಣಿ ಅವರು ನಾಗಿಣಿ, ನಿಗೂಢ ರಾತ್ರಿ, ರಾಜರಾಣಿ, ಏಟು ಎದಿರೇಟು ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಮೃತರ ಅಂತ್ಯಕ್ರಿಯೆ ಚಾಮರಾಜಪೇಟೆಯ ಟಿಆರ್ ಮಿಲ್ ಬಳಿಯ ಸ್ಮಶಾನದಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಿರರ್ಗಳ ಭಾಷೆಯಿಂದ ಜನಮನ್ನಣೆ
ಸಂಜೀವ ಕುಲಕರ್ಣಿ ಅವರು ಕಿರುತೆರೆ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ವೇದಿಕೆ ನಿರೂಪಣೆಯಲ್ಲಿ ಖ್ಯಾತಿ ಗಳಿಸಿದ್ದರು. ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಡಿಮ್ಯಾಂಡಪ್ಪೋ ಡಿಮ್ಯಾಂಡು' ಕಾರ್ಯಕ್ರಮದ ಒಂದು ಸಾವಿರ ಸಂಚಿಕೆಗಳನ್ನು ನಿರೂಪಣೆ ಮಾಡಿದ ದಾಖಲೆ ಅವರದು. ಸಾವಿರಾರು ಕಾರ್ಯಕ್ರಮಗಳಲ್ಲಿ ಅವರ ನಿರೂಪಣೆ ಮಾಡಿದ್ದರು. ಅವರ ಭಾಷೆಯ ನಿರರ್ಗಳತೆ ಮತ್ತು ಸ್ಪಷ್ಟನೆ ಜನರ ಗಮನ ಸೆಳೆದಿತ್ತು.
ಚಿಕಿತ್ಸೆಗೆ 45 ಲಕ್ಷ ರೂ. ಅಗತ್ಯವಿತ್ತು
ಕೆಲವು ತಿಂಗಳಿನಿಂದ ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿತ್ತು. ಅವರ ಹೃದಯ ಕಸಿಗೆ ವೈದ್ಯರು ಸೂಚಿಸಿದ್ದರು. ಈ ಚಿಕಿತ್ಸೆಗೆ ಕನಿಷ್ಠ 45 ಲಕ್ಷ ರೂ. ಹಣದ ಅಗತ್ಯವಿತ್ತು. ಅದಕ್ಕಾಗಿ ಹಣ ಸಂಗ್ರಹಿಸಲಾಗುತ್ತಿತ್ತು. ನಟ ಸುದೀಪ್ ಕೂಡ ಅವರಿಗೆ ಹಣ ಸಹಾಯ ಮಾಡಲು ಟ್ವಿಟ್ಟರ್ನಲ್ಲಿ ಮನವಿ ಮಾಡಿದ್ದರು. ಆದರೆ ಅವರು ಶನಿವಾರ ಹಠಾತ್ತನೆ ಬ್ರೈನ್ ಹ್ಯಾಮರೇಜ್ಗೆ ತುತ್ತಾಗಿದ್ದಾರೆ.
ತೀವ್ರಗೊಂಡಿದ್ದ ಅನಾರೋಗ್ಯ
ಸಂಜೀವ ಕುಲಕರ್ಣಿ ಅವರು ಪತ್ನಿ ಭಾಗ್ಯ ಕುಲಕರ್ಣಿ ಮತ್ತು ಕಿರುತೆರೆ ನಟ ಸೌರಭ್ ಕುಲಕರ್ಣಿ ಅವರನ್ನು ಅಗಲಿದ್ದಾರೆ. ಸೌರಭ್ ಕುಲಕರ್ಣಿ ಅವರು ಪ್ರಸ್ತುತ 'ಪಾಪ ಪಾಂಡು' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಸಂಜೀವ್ ಅವರ ಅನಾರೋಗ್ಯ ಉಲ್ಬಣಗೊಂಡಿತ್ತು.
ಗುರುವಾರ ಉಲ್ಬಣಗೊಂಡಿದ್ದ ಸಮಸ್ಯೆ
ಹೃದಯ ಕಸಿಗೆ ದಾನಿಗಳು ಸಿಗುವವರೆಗೂ ಅವರ ಜೀವ ಉಳಿಸಲು ಕಳೆದ ಗುರುವಾರ ವಿಎಡಿ ಸಾಧನವನ್ನು ಅಳವಡಿಸಲಾಗಿತ್ತು. ಇದಕ್ಕಾಗಿ ಅವರನ್ನು ಐಸಿಯುದಲ್ಲಿ ಇರಿಸಿ ಚಿಕಿತ್ಸೆ ನೀಡಬೇಕಿತ್ತು. ದಿನಕ್ಕೆ 80,000ದಿಂದ 1 ಲಕ್ಷ ರೂ.ವರೆಗೂ ವೆಚ್ಚ ತಗುಲುತ್ತಿತ್ತು. ಹೃದಯ ಕಸಿಗೆ ತಗಲುವ 40 ಲಕ್ಷ ರೂ ಜತೆಗೆ ಹೆಚ್ಚುವರಿ 12 ಲಕ್ಷ ರೂ ಹೊರೆ ಭರಿಸಬೇಕಿತ್ತು. ಇದಕ್ಕಾಗಿ ಹಣಕಾಸಿನ ಸಹಾಯ ಮಾಡುವಂತೆ ಸೌರಭ್ ಕುಲಕರ್ಣಿ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದರು. ಅದಕ್ಕಾಗಿ ಫಂಡ್ ರೈಸರ್ ಸಂಸ್ಥೆಯೊಂದರ ಮೂಲಕ ಹಣ ಸಂಗ್ರಹಿಸುವ ಪ್ರಯತ್ನ ನಡೆಸಿದ್ದರು. ಸಂಜೀವ್ ಅವರ ನಿಧನಕ್ಕೆ ಕಿರುತೆರೆ, ರಂಗಭೂಮಿ, ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.