'ಪಠಾಣ್' ಚಿತ್ರಮಂದಿರದ ಮುಂದೆ ಪುನೀತ್ ಕಟ್ಔಟ್, ಶಾರುಖ್ ಫ್ಯಾನ್ಗಳಿಂದ ಅಪ್ಪು ಹೆಸರಲ್ಲಿ ಅನ್ನದಾನ!

ಬಾಲಿವುಡ್ ಬಾದ್ ಷಾ ಎಂದೇ ಖ್ಯಾತಿಯನ್ನು ಪಡೆದಿರುವ ಶಾರುಖ್ ಖಾನ್ ನಟನೆಯ ಬಹು ನಿರೀಕ್ಷಿತ ಚಿತ್ರ ಪಠಾಣ್ ನಿನ್ನೆಯಷ್ಟೇ ( ಜನವರಿ 25 ) ವಿಶ್ವದಾದ್ಯಂತ ಬಿಡುಗಡೆಯಾಗಿದೆ. 2018ರಲ್ಲಿ ತೆರೆಕಂಡಿದ್ದ ಜೀರೋ ಚಿತ್ರದ ಬಳಿಕ ನಟ ಶಾರುಖ್ ಖಾನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಯಾವ ಚಿತ್ರಗಳೂ ಸಹ ಬಿಡುಗಡೆಯಾಗಿರಲಿಲ್ಲ. ಹೀಗೆ ಬರೋಬ್ಬರಿ 4 ವರ್ಷಗಳ ಅಂತರದ ಬಳಿಕ ತೆರೆಕಂಡ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದ ಮೇಲೆ ಅಭಿಮಾನಿಗಳಲ್ಲಿ ಹಾಗೂ ಸಿನಿ ರಸಿಕರಲ್ಲಿ ನಿರೀಕ್ಷೆ ಸಾಮಾನ್ಯವಾಗಿಯೇ ದೊಡ್ಡ ಮಟ್ಟದಲ್ಲಿ ಇತ್ತು.
ಇನ್ನು ಬಿಡುಗಡೆಗೂ ಮುನ್ನ ಕೇಸರಿ ಬಿಕಿನಿ ವಿವಾದ ಸೇರಿದಂತೆ ಹಲವಾರು ಕಾರಣಕ್ಕೆ ಬ್ಯಾನ್ ಆಗಬೇಕು ಎಂಬ ವಿರೋಧವನ್ನು ಎದುರಿಸಿದ ಪಠಾಣ್ ಚಿತ್ರ ಎಲ್ಲವನ್ನೂ ಮೀರಿ ದೊಡ್ಡ ಓಪನಿಂಗ್ ಪಡೆದುಕೊಂಡಿತು. ಮೊದಲ ದಿನ ಪಠಾಣ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 55 ಕೋಟಿ ಗಳಿಕೆ ಮಾಡಿ ಎಲ್ಲಾ ಚಿತ್ರಗಳನ್ನು ಹಿಂದಿಕ್ಕಿ ಬಿಡುಗಡೆ ದಿನ ಅತಿಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಚಿತ್ರ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತು.
ಇನ್ನು ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವ ಪ್ರೇಕ್ಷಕರಿರುವ ಕರ್ನಾಟಕದಲ್ಲಿಯೂ ಸಹ ಪಠಾಣ್ ಅಬ್ಬರ ಜೋರಾಗಿದ್ದು, ಒಳ್ಳೆಯ ಓಪನಿಂಗ್ ಅನ್ನೇ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಮೊದಲ ದಿನ ದಾಖಲೆಯ 821 ಪ್ರದರ್ಶನಗಳನ್ನು ಪಡೆದುಕೊಂಡು ನಗರದಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಕಂಡ ಹಿಂದಿ ಚಿತ್ರ ಎನಿಸಿಕೊಂಡಿತು. ಹೀಗೆ ರಾಜ್ಯದಲ್ಲಿ ಪಠಾಣ್ ಚಿತ್ರ ಸದ್ದು ಮಾಡಿದರೆ, ಶಾರುಖ್ ಖಾನ್ ಅಭಿಮಾನಿಗಳು ಬೆಂಗಳೂರಿನ ಚಿತ್ರಮಂದಿರವೊಂದರ ಮುಂದೆ ಪುನೀತ್ ಹೆಸರಿನ ಅಡಿಯಲ್ಲಿ ಮಾಡಿದ ಕೆಲಸಕ್ಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಥಿಯೇಟರ್ ಮುಂದೆ ಕಟ್ಔಟ್, ವಿ ಮಿಸ್ ಯು ಅಪ್ಪು ಬ್ಯಾಡ್ಜ್
ಹೌದು, ಪಠಾಣ್ ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಬೆಂಗಳೂರಿನ ಚಿತ್ರಮಂದಿರವೊಂದರ ಮುಂದೆ ಶಾರುಖ್ ಖಾನ್ ಅಭಿಮಾನಿಗಳು ಪುನೀತ್ ನಟನೆಯ ರಾಜಕುಮಾರ ಚಿತ್ರದ ಕಟ್ಔಟ್ ಒಂದನ್ನು ನಿಲ್ಲಿಸಿ ಗೌರವ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ ಶಾರುಖ್ ಅಭಿಮಾನಿಗಳು ತಾವು ಧರಿಸಿದ್ದ ತಮ್ಮ ತಂಡದ ಬಟ್ಟೆಗಳ ಮೇಲೆ ಮಿಸ್ ಯೂ ಅಪ್ಪು ಎಂಬ ಬ್ಯಾಡ್ಜ್ ಧರಿಸಿದ್ದರು. ಈ ಮೂಲಕ ಕರ್ನಾಟಕ ಶಾರುಖ್ ಖಾನ್ ಅಭಿಮಾನಿಗಳು ಪುನೀತ್ ರಾಜ್ಕುಮಾರ್ಗೆ ಗೌರವ ಸೂಚಿಸಿದ್ದಾರೆ.

ಅಪ್ಪು ಹೆಸರಲ್ಲಿ ಅನ್ನದಾನ
ಕರ್ನಾಟಕದಲ್ಲಿ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾದಾಗ ಚಿತ್ರಮಂದಿರಗಳ ಮುಂದೆ ಅನ್ನದಾನ ಮಾಡುವುದು ಕಾಮನ್. ಅದರಲ್ಲಿಯೂ ಈ ಟ್ರೆಂಡ್ ಅನ್ನು ದೊಡ್ಡಮಟ್ಟಕ್ಕೆ ತಲುಪಿಸಿದ್ದು ಪುನೀತ್ ರಾಜ್ಕುಮಾರ್ ನಟನೆಯ 25ನೇ ಚಿತ್ರ ದೊಡ್ಮನೆ ಹುಡ್ಗ ಎಂದರೆ ತಪ್ಪಾಗಲಾರದು. ಈಗ ಅದೇ ಮಾದರಿಯಲ್ಲಿ ಪಠಾಣ್ ಪ್ರದರ್ಶನವಾಗ್ತಿದ್ದ ಚಿತ್ರಮಂದಿರದ ಮುಂದೆ ಪುನೀತ್ ಹೆಸರಿನಲ್ಲಿ ಅನ್ನದಾನ ಮಾಡಿರುವ ಶಾರುಖ್ ಖಾನ್ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಪುನೀತ್ ಫ್ಯಾನ್ಸ್ ಫಿದಾ
ಹೀಗೆ ಶಾರುಖ್ ಖಾನ್ ಅಭಿಮಾನಿಗಳು ಪುನೀತ್ ರಾಜ್ಕುಮಾರ್ ಅವರ ಹೆಸರಿನಲ್ಲಿ ಮಾಡಿರುವ ಅನ್ನದಾನದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಹಾಗೂ ಕನ್ನಡ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನಗತ್ಯವಾಗಿ ಕಟ್ ಔಟ್ ಮೇಲೆ ಹಾಲು ಸುರಿದು ಅಭಿಷೇಕ ಮಾಡುವ ಬದಲು ಹಸಿದವರಿಗೆ ಅನ್ನ ನೀಡುವ ಇಂತಹ ಕೆಲಸಕ್ಕೆ ಕೈಹಾಕಿದ್ದು ಒಳ್ಳೆಯ ನಿರ್ಧಾರ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.


Click it and Unblock the Notifications











