'ಜವಾನ್' ಆಡಿಯೋ ಲಾಂಚ್ ಮುನ್ನ ವೈಷ್ಣೋದೇವಿ ಆಶೀರ್ವಾದ ಪಡೆದ ಶಾರುಖ್ ಖಾನ್
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ತಮ್ಮ ಬಹು ನಿರೀಕ್ಷಿತ ಚಿತ್ರ 'ಜವಾನ್' ಬಿಡುಗಡೆಗೆ ಮುನ್ನ ಜಮ್ಮು ಮತ್ತು ಕಾಶ್ಮೀರದ ಮಾತಾ ವೈಷ್ಣೋ ದೇವಿಯ ಆಶೀರ್ವಾದ ಪಡೆದಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ಜವಾನ್ ಸಿನಿಮಾ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋ ದೇವಿಯ ಪೂಜ್ಯ ದೇವಾಲಯಕ್ಕೆ ಭೇಟಿ ನೀಡಿರುವ ನಟ ಶಾರುಖ್ ಖಾನ್ ದೇವಿಯ ಮುಂದೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಚೆನ್ನೈನಲ್ಲಿ ಬುಧವಾರ ಜವಾನ್ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಲಿದೆ.

ಚೆನ್ನೈನಲ್ಲಿ ಜವಾನ್ ಆಡಿಯೋ ಲಾಂಚ್
ಅಟ್ಲಿ ನಿರ್ದೇಶನದ ಜವಾನ್, ಸೆಪ್ಟೆಂಬರ್ 7 ರಂದು ಥಿಯೇಟರ್ಗಳಿಗೆ ಲಗ್ಗೆಯಿಡಲಿದೆ. ಚಿತ್ರದ ಬಿಡುಗಡೆಗೆ ಒಂದು ವಾರ ಇರುವಾಗ ಆಡಿಯೊ ಬಿಡುಗಡೆ ಕಾರ್ಯಕ್ರಮ ಬುಧವಾರ ಚೆನ್ನೈನಲ್ಲಿ ನಡೆಯಲಿದೆ. ಶ್ರೀ ಸಾಯಿ ರಾಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ ನಡೆಯುವ ಅದ್ದೂರಿ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಭಾಗವಹಿಸಲಿದ್ದಾರೆ.
ಶಾರುಖ್ ಖಾನ್ ಟ್ವಿಟರ್ನಲ್ಲಿ ಈ ಬಗ್ಗೆ ಪೋಸ್ಟರ್ ಹಂಚಿಕೊಂಡಿದ್ದಾರೆ. "ಪ್ರಿ-ರಿಲೀಸ್ ಈವೆಂಟ್ ರೆಡಿ ಆಹ್? ಜವಾನ್ ಬರುತ್ತಿದ್ದಾನೆ. ಶ್ರೀ ಸಾಯಿ ರಾಮ್ ಇಂಜಿನಿಯರಿಂಗ್ ಕಾಲೇಜು, ಚೆನ್ನೈ. ನಾಳೆ, ಮಧ್ಯಾಹ್ನ 3-7 ಗಂಟೆಗೆ" ಎಂದು ಪೋಸ್ಟರ್ನಲ್ಲಿ ಹೇಳಲಾಗಿದೆ.
ಪೋಸ್ಟರ್ ಹಂಚಿಕೊಂಡ ಕಿಂಗ್ ಖಾನ್, "ವಣಕ್ಕಂ (ನಮಸ್ಕಾರ) ಚೆನ್ನೈ, ನಾನು ಬರುತ್ತಿದ್ದೇನೆ. ಸಾಯಿ ರಾಮ್ ಇಂಜಿನಿಯರಿಂಗ್ ಕಾಲೇಜಿನ ಎಲ್ಲಾ ಹುಡುಗ- ಹುಡುಗಿಯರು ಸಿದ್ಧರಾಗಿರಿ... ನಿಮ್ಮೆಲ್ಲರನ್ನು ಭೇಟಿಯಾಗಲು ನಾನು ಉತ್ಸುಕನಾಗಿದ್ದೇನೆ. ಕೇಳಿದರೆ ಸ್ವಲ್ಪ ಥಾ ಥೈಯಾ ಕೂಡ ಮಾಡಬಹುದು. ನಾಳೆ ಮಧ್ಯಾಹ್ನ 3 ಗಂಟೆಗೆ ಭೇಟಿಯಾಗೋಣ" ಎಂದು ಹೇಳಿದ್ದಾರೆ.
ಮಾತಾ ವೈಷ್ಣೋ ದೇವಿಯ ಆಶೀರ್ವಾದ ಪಡೆದ ಶಾರುಖ್
ನಟ ಶಾರುಖ್ ಖಾನ್, ತಮ್ಮ ಸಿನಿಮಾದ ಆಡಿಯೋ ಲಾಂಚ್ಗೂ ಮುನ್ನ ಸೇವಸ್ಥಾನಕ್ಕೆ ತೆರಳಿರುವುದನ್ನು ಅಲ್ಲಿನ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಅವರ ಪ್ರಕಾರ ನಟ ಶಾರುಖ್ ಖಾನ್ ಮಂಗಳವಾರ ತಡರಾತ್ರಿ ದೇಗುಲಕ್ಕೆ ಬಂದು ನಮನ ಸಲ್ಲಿಸಿದ್ದಾರೆ. "ಸೂಪರ್ ಸ್ಟಾರ್ ಮಂಗಳವಾರ ಸಂಜೆ ಬೇಸ್ ಕ್ಯಾಂಪ್ ಕತ್ರಾ ತಲುಪಿದ್ದರು. ರಾತ್ರಿ 11.40 ಕ್ಕೆ ಹೊಸ ತಾರಾಕೋಟೆ ಮಾರ್ಗದ ಮೂಲಕ ದೇಗುಲಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ತಕ್ಷಣವೇ ವಾಪಸ್ ತೆರಳಿದರು" ಎಂದಿದ್ದಾರೆ.

ದೇಗುಲದಲ್ಲಿರುವ ಶಾರುಖ್ ಖಾನ್ ಅವರ ವಿಡಿಯೋದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ನಟನ ಜೊತೆಗೆ ವೈಷ್ಣೋದೇವಿ ದೇಗುಲ ಮಂಡಳಿಯ ಅಧಿಕಾರಿಗಳು, ಕೆಲವು ಪೊಲೀಸರು ಮತ್ತು ಸೂಪರ್ಸ್ಟಾರ್ ಅವರ ವೈಯಕ್ತಿಕ ಸಿಬ್ಬಂದಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಕಳೆದ ಒಂಬತ್ತು ತಿಂಗಳಲ್ಲಿ ವೈಷ್ಣೋದೇವಿ ದೇಗುಲಕ್ಕೆ ಗೆ ಶಾರುಖ್ ಖಾನೆ ಎರಡನೇ ಬಾರಿ ಭೇಟಿ ನೀಡಿದ್ದಾರೆ. ನಟ ಈ ಹಿಂದೆ ಡಿಸೆಂಬರ್ 2022 ರಲ್ಲಿ ಅವರ ಬ್ಲಾಕ್ಬಸ್ಟರ್ ಹಿಟ್ ಪಠಾಣ್ ಬಿಡುಗಡೆಗೆ ಒಂದು ತಿಂಗಳ ಮೊದಲು ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು.
ಜವಾನ್
ಜವಾನ್, ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು. ತಮಿಳು ಚಲನಚಿತ್ರ ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ. ಸೆಪ್ಟೆಂಬರ್ 7 ರಂದು ಚಿತ್ರಮಂದಿರಗಳಿಗೆ ಬರಲಿದೆ. ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಮತ್ತು ಸನ್ಯಾ ಮಲ್ಹೋತ್ರಾ ಕೂಡ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











