ಕನ್ನಡದವರಿಗೆ ನಾಚಿಕೆ ಆಗ್ಬೇಕು, ನಂದೇ ಅಂತಾರೆ, ತಮಿಳಿಗರನ್ನು ನೋಡಿ ಕಲಿಬೇಕು: ಜಗ್ಗೇಶ್ ಕಿಡಿ ಯಾರ ವಿರುದ್ಧ?
ಈ ಬಾರಿಯ ದಸರಾ ಹಬ್ಬದ ಪ್ರಯುಕ್ತವಾಗಿ ಇದ್ದ ಸಾಲು ಸಾಲು ರಜೆಯನ್ನು ಗುರಿಯನ್ನಾಗಿಸಿಕೊಂಡು ದಕ್ಷಿಣ ಭಾರತ ಚಿತ್ರರಂಗದ ಹಲವಾರು ಸಿನಿಮಾಗಳು ಚಿತ್ರಮಂದಿರದ ಅಂಗಳಕ್ಕೆ ಬಂದಿದ್ದವು. ಈ ಸಾಲು ಸಾಲು ರಜೆಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡಬಹುದು ಎಂಬ ಉದ್ದೇಶದಿಂದ ತೆರೆಕಂಡ ಚಿತ್ರಗಳಲ್ಲಿ ಕೆಲ ಚಿತ್ರಗಳು ಅಬ್ಬರಿಸಿದರೆ ಕೆಲ ಚಿತ್ರಗಳು ನಿರೀಕ್ಷಿಸಿದ ಕಲೆಕ್ಷನ್ ಮಾಡುವಲ್ಲಿ ವಿಫಲವಾದವು.
ತಮಿಳಿನ ಪೊನ್ನಿಯನ್ ಸೆಲ್ವನ್ ಹಾಗೂ ನಾನೆ ವರುವೆನ್, ಕನ್ನಡದ ಕಾಂತಾರ ಹಾಗೂ ತೋತಾಪುರಿ ಚಿತ್ರಗಳು ವಿಜಯದಶಮಿಯ ಹಿಂದಿನ ಶುಕ್ರವಾರ ತೆರೆಗೆ ಅಪ್ಪಳಿಸಿದ್ದವು. ಈ ಪೈಕಿ ಕಾಂತಾರ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದೆ ಎಂಬುದನ್ನು ಚಿತ್ರತಂಡವೇ ಘೋಷಿಸಿತು ಹಾಗೂ ಅತ್ತ ಪೊನ್ನಿಯನ್ ಸೆಲ್ವನ್ ಚಿತ್ರತಂಡ ಕೂಡ ಚಿತ್ರ ಒಳ್ಳೆ ಕಲೆಕ್ಷನ್ ಮಾಡ್ತಿದೆ ಎಂಬುದನ್ನು ಬಿಚ್ಚಿಟ್ಟಿತು. ಇನ್ನು ಈ ಎರಡು ದೊಡ್ಡ ಸಿನಿಮಾಗಳ ಅಬ್ಬರದ ನಡುವೆ ಜಗ್ಗೇಶ್ ಅಭಿನಯದ ತೋತಾಪುರಿ ಕಥೆ ಏನಾಯ್ತು ಎಂಬ ಕುತೂಹಲ ಸಹಜವಾಗಿಯೇ ಕನ್ನಡ ಸಿನಿಪ್ರೇಮಿಗಳಲ್ಲಿತ್ತು.
ಈ ಕುತೂಹಲಕ್ಕೆ ತೋತಾಪುರಿ ಚಿತ್ರತಂಡ ವಿಜಯದಶಮಿ ಮುಗಿದ ಮಾರನೇ ದಿನವೇ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿ ಚಿತ್ರ ಯಶಸ್ಸು ಕಂಡಿದೆ ಎಂದು ಘೋಷಿಸುವುದರ ಮೂಲಕ ಉತ್ತರವನ್ನು ನೀಡಿದೆ. ಇನ್ನು ಈ ಪತ್ರಿಕಾಗೋಷ್ಠಿಯಲ್ಲಿ ನಾಯಕ ನಟ ಜಗ್ಗೇಶ್ ಕೋಪದಿಂದಲೇ ಮಾತನಾಡಿದರು. ತಮ್ಮ ಚಿತ್ರ ದಸರಾದ ಜಂಬೂಸವಾರಿಯ ಆನೆಯಂತೆ ಗಾಂಭೀರ್ಯದಿಂದ ಮುನ್ನುಗ್ಗುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಹಾಗೂ ಇದೇ ವೇಳೆ ಕನ್ನಡ ಕಲಾವಿದರಲ್ಲಿ ಒಗ್ಗಟ್ಟಿಲ್ಲ ಎಂದೂ ಸಹ ಜಗ್ಗೇಶ್ ಕಿಡಿಕಾರಿದರು

ತಮಿಳು ಚಿತ್ರ ನಮಗಿಂತ ಚೆನ್ನಾಗಿ ಕಲೆಕ್ಷನ್ ಮಾಡಿದೆ
ಕೋಪದಿಂದಲೇ ಮಾತನ್ನು ಆರಂಭಿಸಿದ ನಟ ಜಗ್ಗೇಶ್ ಯಾವುದೋ ಒಂದು ತಮಿಳು ಚಿತ್ರ ನಮಗಿಂತ ಒಳ್ಳೆಯ ಕಲೆಕ್ಷನ್ ಮಾಡ್ತಿದೆ, ಅಲ್ಲಿನ ದೊಡ್ಡ ನಟ ರಜನಿಕಾಂತ್ ಆ ಚಿತ್ರಕ್ಕೋಸ್ಕರ ಪ್ರಚಾರ ಮಾಡಿದ್ದಾರೆ, ರಜನೀಕಾಂತ್ ಅವರ ಅಭಿಮಾನಿಗಳು ವಿಶ್ವದ ಮೂಲೆಮೂಲೆಗಳಲ್ಲಿ ಇರುವುದರಿಂದ ಚಿತ್ರ ಒಳ್ಳೆಯ ಪ್ರಚಾರವನ್ನು ಪಡೆದುಕೊಂಡು ಚೆನ್ನಾಗಿ ಕಲೆಕ್ಷನ್ ಮಾಡ್ತಿದೆ ಎಂದು ಜಗ್ಗೇಶ್ ತಿಳಿಸಿದರು. ರಜನಿಕಾಂತ್ ಅವರು ತಮ್ಮ ವೃತ್ತಿ ಜೀವನದ ಬಗ್ಗೆ ಎಳೆ ಎಳೆಯಾಗಿ ಮಾತನಾಡುತ್ತಾ ಚಿತ್ರದ ಜತೆ ಹೋಲಿಕೆ ಮಾಡಿ ಪ್ರಚಾರ ಮಾಡಿದ್ರು, ಹೀಗಾಗಿಯೇ ಅದು ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಯಿತು ಎಂಬರ್ಥದಲ್ಲಿ ಜಗ್ಗೇಶ್ ತಿಳಿಸಿದರು.

ನಮ್ಮವರಿಗೆ ನಾಚಿಕೆಯಾಗ್ಬೇಕು, ನಾನೇ ನಂದೇ ಬೆಸ್ಟ್ ಅಂತಾರೆ!
ಹೀಗೆ ತಮಿಳು ಚಿತ್ರ ಒಳ್ಳೆಯ ಕಲೆಕ್ಷನ್ ಮಾಡ್ತಿದೆ ಎಂದ ನವರಸ ನಾಯಕ ಜಗ್ಗೇಶ್ ನಮ್ಮವರಿಗೆ ನಾಚಿಕೆಯಾಗ್ಬೇಕು ಎಂದಿದ್ದಾರೆ. ರಜನೀಕಾಂತ್ ರೀತಿಯ ಮೇರುನಟ ಬೇರೆ ಚಿತ್ರದ ಬಗ್ಗೆ ಪ್ರಮೋಷನ್ ಮಾಡ್ತಿರುವಾಗ ನಮ್ಮವರು ಮಾತ್ರ ನಾನು ನಂದೇ ಬೆಸ್ಟ್ ಎನ್ನುತ್ತಾರೆ, ನನ್ನ ವ್ಯಾಪ್ತಿ ಇಷ್ಟೇ ಎಂದು ಬೇಲಿ ಹಾಕಿಕೊಂಡು ಬಿಟ್ಟಿದ್ದಾರೆ, ನಾವು ಬೇರೆಯವರ ಬಗ್ಗೆ ಮಾತನಾಡುವುದಿಲ್ಲ ಎಂದು ನಿಶ್ಚಯಿಸಿಕೊಂಡು ಬಿಟ್ಟಿದ್ದಾರೆ, ಈ ರೀತಿಯ ನಡವಳಿಕೆ ಇದ್ದರೆ ಮುಂದೊಂದು ದಿನ ಅನಾಥ ಭಾವ ಕಾಡದೆ ಇರುವುದಿಲ್ಲ ಎಂದು ಜಗ್ಗೇಶ್ ಕಿಡಿಕಾರಿದ್ದಾರೆ.

ನಾನು ಇದನ್ನೆಲ್ಲಾ ದಾಟಿ ಬಂದಿದ್ದೇನೆ, ಚಿತ್ರರಂಗ ಬೆಳೆಯಬೇಕು
ಇನ್ನೂ ಮುಂದುವರಿದು ಮಾತನಾಡಿದ ಜಗ್ಗೇಶ್ ನಾನು ಇಂಥದ್ದನ್ನೆಲ್ಲ ದಾಟಿ ಬಂದಿದ್ದೇನೆ, 150 ಚಿತ್ರ ಮಾಡಿದ್ದೇನೆ ಅದೇ ರೀತಿ ಬೇರೆಯವರು ಕೂಡ ಮಾಡ್ಬೇಕು, ಚಿತ್ರರಂಗ ಬೆಳೀಬೇಕು ಅಂದ್ರೆ ಪರಸ್ಪರ ಪ್ರಚಾರಗಳನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಹೀಗೆ ನಮ್ಮಲ್ಲಿ ಒಗ್ಗಟ್ಟಿಲ್ಲ ಯಾರೂ ಸಹ ಇನ್ನೊಬ್ಬರ ಚಿತ್ರಕ್ಕೆ ಪ್ರಚಾರ ಮಾಡುವುದಿಲ್ಲ ಎಂದು ಕಿಡಿ ಕಾರಿರುವ ನಟ ಜಗ್ಗೇಶ್ ಪರೋಕ್ಷವಾಗಿ ಸ್ಟಾರ್ ನಟರು ಬೇರೆ ಚಿತ್ರಗಳ ಬಗ್ಗೆ ಮಾತನಾಡುವುದಿಲ್ಲ ಎಂಬುದರ ಬಗ್ಗೆ ಮಾತನಾಡಿದ್ರಾ ಎಂಬ ಅನುಮಾನ ಮೂಡದೇ ಇರದು.


Click it and Unblock the Notifications











