'ಅನಂತವಾಗಿರು...' ಪುಸ್ತಕ ರೂಪದಲ್ಲಿ ಸಂಚಾರಿ ವಿಜಯ್ ಜೀವನ
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಗಲಿ ತಿಂಗಳು ಕಳೆದಿದೆ. ಅದ್ಭುತ ಕಲಾವಿದನನ್ನು ಕಳೆದುಕೊಂಡ ನೋವು ಇನ್ನು ಕಡಿಮೆಯಾಗಿಲ್ಲ. ಅಷ್ಟರಲ್ಲೇ ಸಂಚಾರಿಯ ಜನುಮದಿನ ಸಮೀಪಿಸಿದೆ. ಜುಲೈ 17 ರಂದು ದಿವಂಗತ ನಟ ಸಂಚಾರಿ ವಿಜಯ್ ಹುಟ್ಟುಹಬ್ಬ.
ವಿಜಯ್ ಇಲ್ಲದ ಈ ಜನುಮದಿನವನ್ನು ವಿಶೇಷವಾಗಿಸಲು ಅವರ ಆಪ್ತರು ಸಿದ್ಧತೆ ನಡೆಸಿದ್ದಾರೆ. ಈ ವಿಶೇಷ ದಿನಕ್ಕೆ ಉಡುಗೊರೆಯಾಗಿ ಸಂಚಾರಿ ವಿಜಯ್ ಕುರಿತಾದ ಪುಸ್ತಕ ಬಿಡುಗಡೆಯಾಗುತ್ತಿದೆ ಎಂಬ ಮಾಹಿತಿ ಫಿಲ್ಮಿಬೀಟ್ಗೆ ಲಭ್ಯವಾಗಿದೆ.
ಈ ಹಿಂದೆ ಅಂಬರೀಶ್, ಕಿಚ್ಚ ಸುದೀಪ್ ಅವರ ಕುರಿತಾದ ಪುಸ್ತಕ ಬರೆದಿದ್ದ ಪತ್ರಕರ್ತ, ರಾಜ್ಯ ಪ್ರಶಸ್ತಿ ವಿಜೇತ ಲೇಖಕ ಶರಣು ಹುಲ್ಲೂರು ಸಂಪಾದಕತ್ವದಲ್ಲಿ 'ಅನಂತವಾಗಿರು' ಎಂಬ ಪುಸ್ತಕ ಹೊರಬರುತ್ತಿದೆ. ಇದರಲ್ಲಿ ಸಂಚಾರಿ ವಿಜಯ್ ಅವರ ಜೀವನದ ಅನೇಕ ಕಥೆಗಳು ಒಳಗೊಂಡಿದೆ.

ಈ ಕುರಿತು ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ ಶರಣು ಹುಲ್ಲೂರು, ''ಇದು ಬಯೋಗ್ರಫಿ ಮಾದರಿಯಲ್ಲಿ ರೂಪುಗೊಂಡಿರುವ ಪುಸ್ತಕ. ಇದರಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದನ ಬಾಲ್ಯ, ಜೀವನದ ಬಗ್ಗೆ ಸಹೋದರರು, ಕುಟುಂಬದವರು ಹೇಳಿರುವ ವಿಷಯಗಳಿವೆ. ಕಾಲೇಜು ದಿನಗಳ ಬಗ್ಗೆ ಸಂಚಾರಿ ಸ್ನೇಹಿತರು, ಆಪ್ತರು ಹಂಚಿಕೊಂಡಿರುವ ವಿಚಾರಗಳಿವೆ. ರಂಗಭೂಮಿ, ಸಿನಿಮಾ, ಕಿರುತೆರೆ, ಸಂಗೀತ ಸೇರಿದಂತೆ ವಿಜಯ್ ಅವರು ನಡೆದು ಬಂದ ಜರ್ನಿ ಬಗ್ಗೆ ಗೆಳೆಯರು, ಸಿನಿಮಾ ನಿರ್ದೇಶಕರು, ರಂಗಕರ್ಮಿಗಳು, ಸಹಪಾಠಿಗಳು ಮಾತನಾಡಿದ್ದಾರೆ'' ಎಂದು ತಿಳಿಸಿದರು.
ಖ್ಯಾತ ಲೇಖಕರಾದ ವಸುಧೇಂದ್ರ, ಜೋಗಿ, ಸಂಧ್ಯಾರಾಣಿ, ನಿರ್ದೇಶಕ ಲಿಂಗದೇವರು, ಮಂಸೋರೆ, ಅರವಿಂದ್ ಕುಪ್ಳಿಕರ್, ಕವಿರಾಜ್, ಎಂಎಸ್ ರಮೇಶ್, ರಂಗ ನಿರ್ದೇಶಕಿ ಮಂಗಳಾ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ಲೇಖಕ ಕೆ ಪುಟ್ಟಸ್ವಾಮಿ ಸೇರಿದಂತೆ ವಿಜಯ್ ಜೊತೆ ಒಡನಾಟ ಹೊಂದಿದ್ದ ಸುಮಾರು 32ಕ್ಕೂ ಅಧಿಕ ವ್ಯಕ್ತಿಗಳು ವಿಜಯ್ ಬಗ್ಗೆ ಬರೆದಿರುವ ಬರಹಗಳನ್ನು ಈ ಪುಸ್ತಕ ಒಳಗೊಂಡಿದೆ.
ಕಾಯಕ ಪ್ರಕಾಶನ ಈ ಪುಸ್ತಕವನ್ನು ಹೊರತರುತ್ತಿದ್ದು, ಸಂಚಾರಿ ವಿಜಯ್ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಪುಸ್ತಕದ ಬೆಲೆ 250 ರೂಪಾಯಿ.


Click it and Unblock the Notifications











