ಎಷ್ಟು ಗ್ರ್ಯಾಂಡ್ ಆಗಿ ಮದುವೆ ಆಗ್ತೀವಿ ಅನ್ನೋದಕ್ಕಿಂತ ಹೇಗೆ ಕೂಡಿ ಬಾಳ್ತೀವಿ ಅನ್ನೋದು ಮುಖ್ಯ; ಶರ್ಮಿಳಾ ಮಾಂಡ್ರೆ
ಕನ್ನಡ ನಟಿ ಶರ್ಮಿಳಾ ಮಾಂಡ್ರೆ ಮದುವೆಗೆ ಸಿದ್ಧತೆ ನಡೀತಿದೆ. ತಮಿಳು ನಿರ್ಮಾಪಕ ಸುಧನ್ ಸುಂಧರಮ್ ಅವರೊಟ್ಟಿಗೆ ಚಂದನವನದ ಸಜನಿ ಮದುವೆ ನಿಶ್ಚಯವಾಗಿದೆ. ಮುಂದಿನ ವಾರವೇ ಎಂಗೇಜ್ಮೆಂಟ್ ನಡೆಯಲಿದ್ದು ಇದೇ ವರ್ಷ ಮದುವೆ ತಯಾರಿ ಆರಂಭವಾಗಿದೆ. ಈ ಬಗ್ಗೆ ಎಕ್ಸ್ಕ್ಲೂಸಿವ್ ಆಗಿ ಫಿಲ್ಮಿಬೀಟ್ ಕನ್ನಡ ಜೊತೆ ಶರ್ಮಿಳಾ ಮಾತನಾಡಿದ್ದಾರೆ.
ಬಹಳ ದಿನಗಳಿಂದ ಶರ್ಮಿಳಾ ಮದುವೆ ಮಾಡಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಸುಧನ್ ಸುಂಧರಮ್ ಅವರನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇಬ್ಬರೂ ಚಿತ್ರರಂಗದವರೇ ಆಗಿದ್ದರಿಂದ ಕೆಲ ವರ್ಷಗಳಿಂದ ಪರಿಚಯ ಇತ್ತು. ಇದೀಗ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗಲು ನಿರ್ಧರಿಸಿರುವುದಾಗಿ ಶರ್ಮಿಳಾ ತಿಳಿಸಿದ್ದಾರೆ.

'ಗಾಳಿಪಟ- 2' ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಹಾಗೂ ನಟಿ ಸಂಯುಕ್ತ ಮೆನನ್ ಒಟ್ಟಿಗೆ ನಟಿಸಿದ್ದರು. "ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಮದುವೆ ಆಗುವ ಬಗ್ಗೆ ಸಂಯುಕ್ತಾ ಬಳಿ ಚರ್ಚಿಸುತ್ತಿದ್ದೆ. ಸಂಯುಕ್ತಾ 'ರಾಮ್' ಎಂಬ ಚಿತ್ರದಲ್ಲಿ ನಟಿಸಿದ್ರು. ಆ ಚಿತ್ರವನ್ನು ಸುಧನ್ ಸುಂಧರಮ್ ನಿರ್ಮಾಣ ಮಾಡಿದ್ರು. ಆಗ ಸಂಯುಕ್ತಾ ಬಳಿ ಸುಧನ್ ಕೂಡ ಮದುವೆ ಆಗುವ ಬಗ್ಗೆ ಮಾತನಾಡಿದ್ದರಂತೆ. ಇಬ್ರೂ ಮದುವೆ ಬಗ್ಗೆಯೇ ಮಾತನಾಡುವುದನ್ನು ಕೇಳಿ ಸಂಯುಕ್ತಾ ಮೂಲಕ ನನ್ನ ಹಾಗೂ ಸುಧನ್ ಪರಿಚಯ ಆಗಿತ್ತು. ಕೆಲ ದಿನ ನಮ್ಮ ಸ್ನೇಹ ಮುಂದುವರೆಯಿತು, ಬಳಿಕ ಇಬ್ರೂ ಮದುವೆಗೆ ನಿರ್ಧರಿಸಿದೆವು" ಎಂದು ಶರ್ಮಿಳಾ ಹೇಳಿದ್ದಾರೆ.
ಎಂಗೇಜ್ಮೆಂಟ್ ಬಳಿಕ ಹೆಚ್ಚು ದಿನ ಕಾಯುವುದು ಬೇಡ ಎಂದುಕೊಂಡಿದ್ದೇವೆ. ಹಾಗಾಗಿ ಇದೇ ವರ್ಷ ಮದುವೆ ಆಗಲು ತೀರ್ಮಾನಿಸಿದ್ದೇವೆ. ಮದುವೆ ದಿನಾಂಕ ನಿಗದಿಯಾದ ನಂತರ ಎಲ್ಲಿ, ಹೇಗೆ ಮದುವೆ ಎನ್ನುವುದನ್ನು ಪ್ಲ್ಯಾನ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಕನಸಿನ ಮದುವೆ ಬಗ್ಗೆ ಹೇಳಿ ಎನ್ನುವ ಪ್ರಶ್ನೆಗೆ "ಎಷ್ಟು ಗ್ರ್ಯಾಂಡ್ ಆಗಿ ಮದುವೆ ಆಗ್ತೀವಿ ಅನ್ನುವುದಕ್ಕಿಂತ ಹೇಗೆ ಕೂಡಿ ಬಾಳ್ತೀವಿ ಅನ್ನೋದು ಮುಖ್ಯ" ಎಂದು ಶರ್ಮಿಳಾ ಮಾಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದ್ಧೂರಿಯಾಗಿ ಮದುವೆ ಆಗುವವರು ಎಷ್ಟು ದಿನ ಕೂಡಿ ಬಾಳುತ್ತಾರೆ ಎನ್ನುವುದು ಇತ್ತೀಚೆಗೆ ನೋಡುತ್ತಲೇ ಇದ್ದೇವೆ. ಆ ರೀತಿ ಆಗಬಾರದು ಅಲ್ಲವೇ? ಅದ್ಧೂರಿ ಮದುವೆಗಿಂತ ಒಟ್ಟಿಗೆ ಕೂಡಿ ಬಾಳುವುದು ಅವಶ್ಯಕ ಎಂದು ತಿಳಿಸಿದ್ದಾರೆ. ಮೊದಲು ಯಾರು ಪ್ರಪೋಸ್ ಮಾಡಿದ್ದು ಎನ್ನುವ ಪ್ರಶ್ನೆಗೆ "ಅಯ್ಯೋ ಫಿಲ್ಮಿಸ್ಟೈಲ್ ಅಲ್ಲಿ ಏನು ನಡೀತಿಲ್ಲ. ಬರೀ ಮಾತುಕತೆ ಮೂಲಕವೇ ಇಲ್ಲಿಯವರೆಗೆ ಬಂದು ನಿಂತಿದೆ. ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು. ಬಳಿಕ ಮದುವೆ ಆಗೋಣ ಎಂದು ನಿರ್ಧರಿಸಿದೆವು. ಈಗ ಪೋಷಕರ ಒಪ್ಪಿಗೆ ಪಡೆದು ಮದುವೆ ಹಂತಕ್ಕೆ ಕಾಲಿಟ್ಟಿದ್ದೇವೆ. ಎಂಗೇಜ್ಮೆಂಟ್ ಸಮಯದಲ್ಲೇ ಪ್ರಪೋಸ್ ಎಲ್ಲಾ ನಡೆಯತ್ತೆ" ಎಂದು ಶರ್ಮಿಳಾ ನಕ್ಕರು.
ದರ್ಶನ್ ನಟನೆಯ 'ಡೆವಿಲ್' ಚಿತ್ರದಲ್ಲಿ ಕೊನೆಯದಾಗಿ ಶರ್ಮಿಳಾ ಮಾಂಡ್ರೆ ನಟಿಸಿದ್ದರು. ಸದ್ಯ ಶಿವರಾಜ್ಕುಮಾರ್ ಜೊತೆ 'ಡ್ಯಾಡ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಬಹುತೇಕ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ. ಕನ್ನಡದಲ್ಲಿ 'ದಸರಾ' ಎಂಬ ಚಿತ್ರವನ್ನು ಶರ್ಮಿಳಾ ನಿರ್ಮಿಸಿ ನಟಿಸುತ್ತಿದ್ದಾರೆ. ಈ ವರ್ಷವೇ ಆ ಸಿನಿಮಾ ಬಿಡುಗಡೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಮದುವೆ ಬಳಿಕ ನಟನೆಯಿಂದ ಬ್ರೇಕ್ ಪಡೆಯುತ್ತೀರಾ? ಎನ್ನುವ ಪ್ರಶ್ನೆಗೆ ಅಷ್ಟೆಲ್ಲಾ ಆಲೋಚನೆ ಮಾಡಿಲ್ಲ. ಮುಂದೆ ಏನಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಮುಂದಿನ 6 ತಿಂಗಳಲ್ಲಿ ಏನು ಎನ್ನುವ ಬಗ್ಗೆ ಮಾತ್ರ ನಾನು ಯೋಚನೆ ಮಾಡ್ತೀನಿ. ಅದಕ್ಕಿಂತ ಮುಂದಿನದ್ದು ಬೇಕಾಗಿಲ್ಲ ಎಂದಿದ್ದಾರೆ. ತಮಿಳಿನಲ್ಲಿ 'ಕಾದಲ್ ಕೊಂಜಮ್ ತೂಗುಕಳ' ಎಂಬ ಚಿತ್ರವನ್ನು ಆಕೆ ನಿರ್ಮಾಣ ಮಾಡುತ್ತಿದ್ದಾರೆ. ಶರ್ಮಿಳಾ ಕೈಹಿಡಿರುತ್ತಿರುವ ನಿರ್ಮಾಪಕ ಸುಧನ್ ಸುಂಧರಮ್ ತಮಿಳಿನಲ್ಲಿ ಕೆಲ ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ.


Click it and Unblock the Notifications