ನಟ ಚೇತನ್ ಮದುವೆ ಆದ ರೀತಿಗೆ ಶಭಾಷ್ ಎಂದ ರಾಜಕಾರಣಿ ಶಶಿ ತರೂರ್.!
ಕನ್ನಡ ಚಿತ್ರ 'ಆ ದಿನಗಳು' ಖ್ಯಾತಿಯ ನಟ ಚೇತನ್ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ನಿಮಗೆಲ್ಲ ಗೊತ್ತೇ ಇದೆ. ಫೆಬ್ರವರಿ 1 (ಶನಿವಾರ) ರಿಜಿಸ್ಟರ್ ಮದುವೆ ಮಾಡಿಕೊಂಡು ಗೆಳತಿ ಮೇಘ ರನ್ನ ಬಾಳಸಂಗಾತಿಯನ್ನಾಗಿ ಸ್ವೀಕರಿಸಿದ ನಟ ಚೇತನ್, ಫೆಬ್ರವರಿ 2 (ಭಾನುವಾರ) ರಂದು ಕುಟುಂಬಸ್ಥರು ಮತ್ತು ಚಲನಚಿತ್ರ, ರಾಜಕೀಯ ಗಣ್ಯರಿಗಾಗಿ ಆರತಕ್ಷತೆ ಮತ್ತು ಸಂತೋಷ ಕೂಟ ಆಯೋಜಿಸಿದ್ದರು.
ಚೇತನ್ ಮತ್ತು ಮೇಘ ರವರ ಆರತಕ್ಷತೆ ಮತ್ತು ಸಂತೋಷ ಕೂಟ ಎಂದಿನಂತೆ ಕನ್ವೆನ್ಷನ್ ಹಾಲ್ ನಲ್ಲೋ ಅಥವಾ ಮದುವೆ ಮನೆಯಲ್ಲೋ ನಡೆಯಲಿಲ್ಲ. ಬದಲಾಗಿ, ಬೆಂಗಳೂರಿನ ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದಲ್ಲಿ ನಡೆಯಿತು. ಸರಳ ಮತ್ತು ಸುಂದರವಾಗಿ ನೆರವೇರಿದ ಆರತಕ್ಷತೆ ಮತ್ತು ಸಂತೋಷ ಕೂಟದಲ್ಲಿ ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ, ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಏರ್ಪಡಿಸಲಾಗಿತ್ತು.
ವಿಶಿಷ್ಟ ರೀತಿಯಲ್ಲಿ ನಟ ಚೇತನ್ ಮದುವೆ ಆದ ರೀತಿಗೆ ಕಾಂಗ್ರೆಸ್ ಮುಖಂಡ, ರಾಜಕಾರಣಿ ಶಶಿ ತರೂರ್ ಶಭಾಷ್ ಎಂದಿದ್ದಾರೆ. ನಟ ಚೇತನ್ ಮತ್ತು ಮೇಘ ರವರ ಸಮಾಜಿಕ ಕಳಕಳಿ ಬಗ್ಗೆ ಶಶಿ ತರೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿರಿ...

ಟ್ವೀಟ್ ಮಾಡಿದ ಶಶಿ ತರೂರ್
ನವ ದಂಪತಿ ಚೇತನ್ ಮತ್ತು ಮೇಘ ಜೋಡಿಗೆ ಶುಭ ಕೋರಿದ ಶಶಿ ತರೂರ್, ''ಇದೊಂದು ಸಾಮಾಜಿಕ ಪ್ರಜ್ಞೆಯ ಮದುವೆ. ವಿವಾಹಕ್ಕೆ ಬಂದವರಿಗೆ ಭಾರತೀಯ ಸಂವಿಧಾನದ ಪುಸ್ತಕಗಳನ್ನು ಉಡುಗೊರೆಯಾಗಿ ಚೇತನ್ ಮತ್ತು ಮೇಘ ಕೊಟ್ಟಿದ್ದಾರೆ'' ಎಂದು ಟ್ವೀಟ್ ಮಾಡಿದ್ದಾರೆ.

ಶುಭಾಶಯ ಕೋರಿದ್ದ ದಿನೇಶ್ ಗುಂಡೂರಾವ್
ನಟ ಚೇತನ್ ಮತ್ತು ಮೇಘ ಆರತಕ್ಷತೆಗೆ ರಾಜಕಾರಣಿ ದಿನೇಶ್ ಗುಂಡೂರಾವ್ ಕೂಡ ಪತ್ನಿ ಸಮೇತರಾಗಿ ಹಾಜರ್ ಆಗಿ ನವ ವಧು ವರರಿಗೆ ಶುಭ ಹಾರೈಸಿದ್ದರು.

ಪುನೀತ್ ರಾಜ್ ಕುಮಾರ್ ಭಾಗಿ
ಚೇತನ್ ಮತ್ತು ಮೇಘ ಆರತಕ್ಷತೆ ಮತ್ತು ಸಂತೋಷ ಕೂಟದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಪತ್ನಿ ಅಶ್ವಿನಿ ಕೂಡ ಭಾಗವಹಿಸಿ, ನವ ಜೋಡಿಗೆ ಶುಭ ಹಾರೈಸಿದ್ದರು. ಪುನೀತ್ ದಂಪತಿಗೂ ಸಂವಿಧಾನದ ಪುಸ್ತಕಗಳನ್ನು ಉಡುಗೊರೆಯಾಗಿ ಚೇತನ್ ನೀಡಿದ್ದರು.

ಸಂವಿಧಾನದ ಪುಸ್ತಕ ಕೊಟ್ಟಿದ್ಯಾಕೆ.?
''ಜನರು ನಮ್ಮ ಸಂವಿಧಾನವನ್ನು ಓದಿ, ಅದರಂತೆ ನಡೆದುಕೊಳ್ಳಬೇಕು ಎಂಬುದು ನಮ್ಮ ಇಚ್ಛೆ'' ಎಂದಿದ್ದ ನಟ ಚೇತನ್, ಆರತಕ್ಷತೆ ಸಮಾರಂಭಕ್ಕೆ ಬಂದವರಿಗೆಲ್ಲ ಭಾರತೀಯ ಸಂವಿಧಾನದ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು.


Click it and Unblock the Notifications











