'ತೊಂದ್ರೆ ಇಲ್ಲ ಪಂಕಜಾ' ಹಾಡಿಗೆ ಶೆಫಾಲಿ ಆಯ್ಕೆ ಆಗಿದ್ದೇಗೆ? ಸಿಕ್ಕಿದ್ದ ಸಂಭಾವನೆ ಎಷ್ಟು?
ನಟಿ ಶೆಫಾಲಿ ಜರಿವಾಲಾ ಅಗಲಿಕೆ ಅಭಿಮಾನಿಗಳು ಹಾಗೂ ಆಪ್ತರಿಗೆ ಆಘಾತ ತಂದಿದೆ. 'ಹುಡುಗರು' ಚಿತ್ರತಂಡ ಕೂಡ ಈ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದೆ. ಚಿತ್ರದ ನಿರ್ದೇಶಕ ಕೆ. ಮಾದೇಶ್ ಹಾಗೂ ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಹೃದಯಾಘಾತದಿಂದ ಕೊನೆಯುಸಿರೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. 30- 40 ವಯ್ಸಸಿನವರು ಕೂಡ ಹೀಗೆ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಸಿನಿಮಾ ತಾರೆಯರು ಹೊರತಲ್ಲ. ಮುಂಬೈನ ಅಂಧೇರಿ ಲೋಖಂಡ್ವಾಲಾ ಬಳಿ ನಟಿ ಶೆಫಾಲಿ ನೆಲೆಸಿದ್ದರು. ನಿನ್ನೆ (ಜೂನ್ 27) ರಾತ್ರಿ 11 ಗಂಟೆ ಸುಮಾರಿಗೆ ಆಕೆ ತೀವ್ರ ಅಸ್ವಸ್ಥರಾಗಿದ್ದರು. ಎದೆನೋವು ಕಾಣಿಸಿಕೊಂಡ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.

14 ವರ್ಷಗಳ ಹಿಂದೆ ಬಂದಿದ್ದ ಕನ್ನಡದ 'ಹುಡುಗರು' ಚಿತ್ರದ 'ತೊಂದ್ರೆ ಇಲ್ಲ ಪಂಕಜಾ' ಹಾಡಿಗೆ ಶೆಫಾಲಿ ಹೆಜ್ಜೆ ಹಾಕಿದ್ದರು. ಇಮ್ರಾನ್ ಸರ್ದಾರಿಯಾ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿಯಲ್ಲಿ ಬಿಂದಾಸ್ ಆಗಿ ಕುಣಿದಿದ್ದರು. ನಾಲ್ಕೈದು ನಟಿಯರ ಹೆಸರನ್ನು ಆ ಹಾಡಿಗೆ ಕುಣಿಯಲು ಫೈನಲ್ ಮಾಡಿದ್ದರು. ಅಂತಿಮವಾಗಿ ಅವಕಾಶ ಶೆಫಾಲಿ ಜರಿವಾಲಾ ಪಾಲಾಗಿತ್ತು. 5 ದಿನಗಳ ಕಾಲ ರಾಕ್ಲೈನ್ ಸ್ಟುಡಿಯೋದಲ್ಲಿ ಡಾಬಾ ಸೆಟ್ ಹಾಕಿ ಸಾಂಗ್ ಶೂಟ್ ಮಾಡಿದ್ದರು.
ಪುನೀತ್ ರಾಜ್ಕುಮಾರ್, ಶ್ರೀನಗರ ಕಿಟ್ಟಿ ಹಾಗೂ ಲೂಸ್ ಮಾದ ಯೋಗಿ ಜೊತೆಗೆ ಶೆಫಾಲಿ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ್ದರು. ಒಂದಷ್ಟು ಡ್ಯಾನ್ಸರ್ಸ್ ಅವರಿಗೆ ಸಾಥ್ ಕೊಟ್ಟಿದ್ದರು. ಪಕ್ಕಾ ಟಪೋರಿ ಸ್ಟೈಲ್ ಸಾಂಗ್ ಅದಾಗಿತ್ತು. ಅದಕ್ಕೆ ತಕ್ಕಂತೆ ಡಾಬಾ ಸೆಟ್, ಕಾಸ್ಟ್ಯೂಮ್, ಡ್ಯಾನ್ಸ್ ಮೂವ್ಸ್ ಡಿಸೈನ್ ಮಾಡಲಾಗಿತ್ತು. ವಿ. ಹರಿಕೃಷ್ಣ ಸಂಗೀತದಲ್ಲಿ ಯೋಗರಾಜ್ ಭಟ್ ಹಾಡಿಗೆ ಸಾಹಿತ್ಯ ಬರೆದಿದ್ದರು. ಮಮತಾ ಶರ್ಮಾ ಕಂಠದಲ್ಲಿ ಹಾಡಿಗೆ ಹೊಸ ಖದರ್ ಬಂದಿತ್ತು. ಹರಿ ಕೃಷ್ಣ, ನವೀನ್ ಮಾಧವ್ ಸಾಥ್ ಸಿಕ್ಕಿತ್ತು.
ರೆಕಾರ್ಡಿಂಗ್ ಹಂತದಲ್ಲೇ 'ತೊಂದ್ರೆ ಇಲ್ಲ ಪಂಕಜಾ' ಸಾಂಗ್ ಹಿಟ್ ಆಗಿ ಬಿಟ್ಟಿತ್ತು. ಹಾಗಾಗಿ ಯಾರು ಡ್ಯಾನ್ಸ್ ಮಾಡಿದರೆ ಚೆನ್ನಾಗಿರುತ್ತದೆ ಎನ್ನುವ ಚರ್ಚೆ ನಡೆದಿತ್ತು. ಆಗ ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ ಸೇರಿದಂತೆ ಚಿತ್ರತಂಡ ಒಂದಷ್ಟು ನಟಿಯರ ಹೆಸರನ್ನು ಪಟ್ಟಿ ಮಾಡಿದ್ದರು. ಮುಮೈತ್ ಖಾನ್ ಅವರ ಹೆಸರು ಕೇಳಿಬಂದಿತ್ತು. ಅದಾಗಲೇ 'ಕಾಂಟಾ ಲಗಾ' ಹಾಗೂ 'ಕಲಿಯೋಂ ಕಾ ಚಮನ್' ರೀಮಿಕ್ಸ್ ವರ್ಷನ್ಗಳಲ್ಲಿ ಶೆಫಾಲಿ ಕುಣಿದು ಸದ್ದು ಮಾಡಿದ್ದರು. ಹಾಗಾಗಿ 'ಪಂಕಜಾ' ಆಗಲು ಅವಕಾಶ ಸಿಕ್ಕಿತ್ತು.

ಅವತ್ತಿನ ಕಾಲಕ್ಕೆ ಹುಡುಗರು ಚಿತ್ರದಲ್ಲಿ ಡ್ಯಾನ್ಸ್ ಮಾಡಲು ಅಂದಾಜು 8 ರಿಂದ 10 ಲಕ್ಷ ರೂ. ಸಂಭಾವನೆ ಶೆಫಾಲಿಗೆ ಸಿಕ್ಕಿತ್ತು ಎನ್ನಲಾಗುತ್ತದೆ. ಆಕೆ ಅಗಲಿಕೆಗೆ 'ಹುಡುಗರು' ಚಿತ್ರತಂಡ ಕೂಡ ಸಂತಾಪ ಸೂಚಿಸಿದೆ. ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ ಇಮ್ರಾನ್ ಸರ್ದಾರಿಯ, "ಆಕೆಯ ಅಗಲಿಕೆ ಬಹಳ ನೋವು ತಂದಿದೆ. ಈ ಸಮಯದಲ್ಲಿ ಏನು ಮಾತನಾಡುವುದು ಎಂದು ತಿಳಿಯುತ್ತಿಲ್ಲ" ಎಂದಿದ್ದಾರೆ.
'ಹುಡುಗರು' ಚಿತ್ರದ ನಿರ್ದೇಶಕ ಕೆ. ಮಾದೇಶ್ ಮಾತನಾಡಿ "ಆ ಹಾಡಿಗೆ ಯಾರು ಡ್ಯಾನ್ಸ್ ಮಾಡಬೇಕು ಎಂದು ನಟಿಯರ ಹುಡುಕಾಟದಲ್ಲಿದ್ದೆವು. ಆಗ ಇಮ್ರಾನ್ ಇಬ್ಬರು ಮೂವರು ನಟಿಯರ ಫೋಟೊ ತೋರಿಸಿದರು. ಅಂತಿಮವಾಗಿ ಶೆಫಾಲಿ ಆಯ್ಕೆ ಆಗಿದ್ದರು. 5 ದಿನಗಳ ಕಾಲ ರಾಕ್ಲೈನ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸಿದ್ದೆವು. ಆ ಹಾಡಿನಿಂದ ಚಿತ್ರಕ್ಕೆ ಒಳ್ಳೆ ಮೈಲೇಜ್ ಸಿಕ್ಕಿತ್ತು. ಆಕೆಗೆ ಅಗಲಿಕೆ ಆಘಾತ ತಂದಿದೆ" ಎಂದು ಹೇಳಿದ್ದಾರೆ.
ಮತ್ತೊಬ್ಬ ಡ್ಯಾನ್ಸ್ ಮಾಸ್ಟರ್ ಧನು ಕೂಡ ಆಗ ಈ ಹಾಡಿಗೆ ಇಮ್ರಾನ್ ಸಹಾಯಕರಾಗಿ ಕೆಲಸ ಮಾಡಿದ್ದರು. ಸದ್ಯ ಧನು 'ಪಿನಾಕ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಶೂಟಿಂಗ್ನಲ್ಲಿದ್ದ ಅವರು ಶೆಫಾಲಿ ನಿಧನದ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. "ಬಹಳ ಒಳ್ಳೆಯ ಹುಡುಗಿ. ಆಕೆ ಹೃದಯಾಘಾತದಿಂದ ಆಕೆ ನಿಧನರಾಗಿದ್ದಾರೆ ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಡ್ಯಾನ್ಸ್ ಮಾಡಲು ನಾಲ್ಕೈದು ನಟಿಯರ ಹೆಸರು ಲಿಸ್ಟ್ ಮಾಡಿದ್ದಾಗ ರಾಘಣ್ಣ ಈಕೆಯನ್ನು ಫೈನಲ್ ಮಾಡಿದ್ದರು. ಸಾಂಗ್ ಶೂಟಿಂಗ್ ವೇಳೆ ಬಹಳ ಚೆನ್ನಾಗಿ ಎಲ್ಲರ ಜೊತೆ ಬೆರೆತು ಕೆಲಸ ಮಾಡಿದ್ದರು. ಆ ಬಳಿಕ ಕೂಡ ಕೆಲ ದಿನಗಳ ಕಾಲ ಟಚ್ನಲ್ಲಿದ್ದರು. ನಮ್ಮ ಮುಂದಿನ ಸಿನಿಮಾ ಹಾಡುಗಳ ಬಗ್ಗೆ ಕೇಳುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಅವರ ಪೋಸ್ಟ್ ನೋಡಿದ್ದೆ. ಈಗ ಬಹಳ ನೋವಾಗುತ್ತದೆ" ಎಂದು ತಿಳಿಸಿದ್ದಾರೆ.


Click it and Unblock the Notifications











