ನೆಹರೂ ಪಾರ್ಕ್ ಕತೆಯನ್ನು ಬೆಳ್ಳಿತೆರೆಗೆ ತರಲಿದ್ದಾರೆ.
ಸರಿಸುಮಾರು ಒಂದೂವರೆ ವರ್ಷದಿಂದ ಧಾರಾವಾಹಿ ಹೊರತುಪಡಿಸಿ ಸುಮ್ಮಗಿದ್ದ ದಂಡಿನಶಿವರ ಪಿ.ಶೇಷಾದ್ರಿ ಈಗ ಇನ್ನೊಂದು ಸಿನಿಮಾ ಮಾಡಹೊರಟಿದ್ದಾರೆ.
ಮಂಗಳೂರಿನ ಬ್ಯಾರಿಗಳ ದುರಂತ ಕತೆಯನ್ನು ಅಚ್ಚುಕಟ್ಟಾಗಿ ತೆರೆಗೆ ತಂದ ಈತ ಚೊಚ್ಚಲ ಯತ್ನದಲ್ಲೇ ಪ್ರಶಸ್ತಿಗಳ ಬುಟ್ಟಿಗೆ ಹಾಕಿಕೊಂಡವರು. ಪ್ರಶಸ್ತಿ ಪಡೆದ ನಿರ್ದೇಶಕ ಅಂದಮೇಲೆ ಡಿಮ್ಯಾಂಡ್ ಸಿಗಲೇಬೇಕಲ್ಲ. ಸಿಕ್ಕಾಪಟ್ಟೆ ಅಲ್ಲದಿದ್ದರೂ, ಶೇಷಾದ್ರಿ ಅವರ ಹತ್ತಿರ ಒಂದಷ್ಟು ಗಾಂಧಿನಗರಿಗಳು ಎಡತಾಕಿದ್ದಂತೂ ನಿಜ. ಆದರೆ ಅವರೆಲ್ಲರಿಗೂ ಶೇಷಾದ್ರಿ ನೋ ಅಂದರು.
ಆದರೆ ಸ್ಲೋ ಅಂಡ್ ಸ್ಟಡಿ ವಿನ್ಸ್ ದಿ ರೇಸ್ ಅನ್ನೋದು ಶೇಷಾದ್ರಿ ಥಿಯರಿ. ಸಿನಿಮಾದಲ್ಲಿ ಯಾವುದೋ ಬ್ರಾಂಡ್ ಐಡೆಂಟಿಟಿ ಕಂಡುಕೊಳ್ಳುವುದು ಶೇಷಾದ್ರಿಗೆ ಸರಿಬೀಳಲಿಲ್ಲ. ಹೀಗಾಗಿ ಈಟಿವಿಯ ಕಣ್ಣಾ ಮುಚ್ಚಾಲೆ ಹಾಸ್ಯ ಧಾರಾವಾಹಿಗೇ ಹೆಚ್ಚು ಒತ್ತು ಕೊಟ್ಟರು.
ಬಹು ದಿನಗಳ ನಕಾರಗಳ ನಂತರ ಈಗ ಶೇಷಾದ್ರಿ ಇನ್ನೊಂದು ವೆಂಚರ್ ಕೈಹಾಕೇ ಬಿಡೋಣ ಅಂದಿದ್ದಾರೆ. ಅವರ ಪತ್ರಕರ್ತ ಮಿತ್ರ ಹಾಗೂ 'ಮಾಯಾಮೃಗ" ಸ್ನೇಹಿ ಜೆ.ಎಂ.ಪ್ರಹ್ಲಾದ್ ಬರೆದಿರುವ ನೆಹರೂ ಪಾರ್ಕ್ ಅನ್ನುವ ಕತೆಯನ್ನು ಶೇಷಾದ್ರಿ ಆರಿಸಿಕೊಂಡಿದ್ದಾರೆ. ಯೋಜನೆಯಾಂದಕ್ಕೆ ಪಾರ್ಕಿನ ಮರಗಳನ್ನು ದಡದಡ ಉರುಳಿಸಿದಾಗ, ಪ್ರಹ್ಲಾದ್ ಕರಳು ಚುರ್ರೆಂದು ಹುಟ್ಟಿದ ಕತೆಯಿದು. ಈ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಟಿ.ಎನ್.ಸೀತಾರಾಂರ ಮನ್ವಂತರ ದೈನಿಕ ಧಾರಾವಾಹಿಗೆ ಸಂಭಾಷಣೆ ಬರೆದಿರುವವರ ಪೈಕಿ ಪ್ರಹ್ಲಾದ್ ಕೂಡ ಒಬ್ಬರು.
ಬೊಳುವಾರು ಮೊಹಮ್ಮದ್ ಕುಂಞ್ಞ ಅವರ ಸಣ್ಣಕತೆಯ ಮನ ಮಿಡಿಯುವ ಎಳೆಗಳನ್ನೇ ಸಿನಿಮಾಗೆ ಯಶಸ್ವಿಯಾಗಿ ಹೆಣೆದ ಶೇಷಾದ್ರಿ ಅವರ ಸಿದ್ಧತೆ ಜೋರಾಗಿದೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಎಂಬಲ್ಲಿಗೆ ಶೇಷಾದ್ರಿ ಪ್ರಶಸ್ತಿಗಳ ಬುಟ್ಟಿ ಮತ್ತೆ ತೆರಕೊಳ್ಳಲಿದೆ. ಆಲ್ ದಿ ಬೆಸ್ಟ್ ಶೇಷ್ !


Click it and Unblock the Notifications