ಸಾಲ ಮರುಪಾವತಿ ಮಾಡದ ಚಿತ್ರಮಂದಿರ ಸೀಜ್ ಮಾಡಿದ ಬ್ಯಾಂಕ್ ಸಿಬ್ಬಂದಿ
ಕೊರೊನಾ ಅಟ್ಟಹಾಸದಿಂದ ಸತತ ಒಂದು ವರ್ಷ ಬಾಗಿಲು ಹಾಕಿ ಆದಾಯ ಕಾಣದೆ ತತ್ತರಿಸಿ ಹೋಗಿದ್ದ ಚಿತ್ರಮಂದಿರಗಳು ಇದೀಗ ಸಿನಿಮಾಗಳ ಬಿಡುಗಡೆ ಪ್ರಾರಂಭವಾಗಿದ್ದರೂ ಇನ್ನೂ ಪೂರ್ಣ ಚೇತರಿಕೆ ಹಾದಿಗೆ ಮರಳಿಲ್ಲ.
ಕೊರೊನಾ ಸಮಯದಲ್ಲಿ ರಾಜ್ಯದಾದ್ಯಂತ ಹಲವು ಚಿತ್ರಮಂದಿರಗಳು ಬಾಗಿಲು ಹಾಕಿದವು. ಅದರಲ್ಲಿಯೂ ಹಲವು ದಶಕಗಳಿಂದ ಪ್ರೇಕ್ಷಕರಿಗೆ ಮನರಂಜನೆ ಉಣಬಡಿಸುತ್ತಿದ್ದ ರಾಜ್ಯದ ಪ್ರಮುಖ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಕಳೆದ ಎರಡು ವರ್ಷದ ಅವಧಿಯಲ್ಲಿ ಅವಸಾನಗೊಂಡವು. ಇದೀಗ ಚಿತ್ರಮಂದಿರವೊಂದು ಸಾಲ ಕಟ್ಟಲಾಗದ ಕಾರಣಕ್ಕೆ ಬ್ಯಾಂಕ್ನಿಂದ ಸೀಜ್ ಹಾಗುವ ಹಂತ ತಲುಪಿದೆ.
ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ನಗರದ ಮಯೂರ ವೃತ್ತದಲ್ಲಿರುವ, ಮಯೂರ ಚಿತ್ರಮಂದಿರವನ್ನು ಬೆಂಗಳೂರು ಸಿಟಿ ಸಹಕಾರ ಸಂಘದಿಂದ ಪಡೆದ ಸಾಲವನ್ನು ಮರುಪಾವತಿ ಮಾಡಿಲ್ಲವೆಂದು ನ್ಯಾಯಾಲಯದ ಆದೇಶದಂತೆ ಶುಕ್ರವಾರ (ಡಿಸೆಂಬರ್ 24) ಸೀಜ್ ಮಾಡಿ, ಬೀಗ ಜಡಿಯಲಾಗಿದೆ.

ಶಿಡ್ಲಘಟ್ಟದ ಮಯೂರ ಚಿತ್ರಮಂದಿರದ ನಿರ್ವಹಣೆಗಾಗಿ ಪಡೆದಿದ್ದ ಸಾಲದ ಮೊತ್ತಕ್ಕೆ ಬಡ್ಡಿ ಸೇರಿ 4 ಕೋಟಿ ರೂಪಾಯಿಯಾಗಿದ್ದು, ಸಾಲ ಮರುಪಾವತಿ ಮಾಡಿರಲಿಲ್ಲ. ಸಾಕಷ್ಟು ಬಾರಿ ನೊಟೀಸ್ ಜಾರಿ ಮಾಡಿದ್ದರೂ ಮರುಪಾವತಿಯಾಗದ ಕಾರಣ, ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ನ್ಯಾಯಾಲಯದ ಆದೇಶದಂತೆ ವಕೀಲರೊಂದಿಗೆ ಬಂದಿದ್ದ ಬ್ಯಾಂಕಿನ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಬ್ಯಾಂಕಿಗೆ ಬೀಗ ಜಡಿದಿದ್ದಾರೆ. ಚಿತ್ರಮಂದಿರದ ಜೊತೆಯಲ್ಲಿ 08 ಅಂಗಡಿಗಳನ್ನೂ ಸೀಜ್ ಮಾಡಿದ್ದಾರೆ. ಸಾಲ ಮರುಪಾವತಿ ಮಾಡಿದರೆ ಪುನಃ ಬೀಗ ವಾಪಸ್ಸು ನೀಡುವುದಾಗಿ ವ್ಯವಸ್ಥಾಪಕ ಅಪ್ಪಾಜಯ್ಯ ಸಿ.ಎನ್ ಅವರು ತಿಳಿಸಿದರು.
ಶಿಡ್ಲಘಟ್ಟ ನಗರದ ಮಯೂರ ವೃತ್ತದಲ್ಲಿರುವ ಮಯೂರ ಚಿತ್ರಮಂದಿರವನ್ನು ಬೆಂಗಳೂರು ಸಿಟಿ ಕೋ ಆಫರೇಟಿವ್ ಬ್ಯಾಂಕಿನ ಸಿಬ್ಬಂದಿ ಸೀಜ್ ಮಾಡಿದರು.
ಈ ಚಿತ್ರಮಂದಿರವು ಹಲವು ವರ್ಷಗಳಿಂದ ಶಿಡ್ಲಘಟ್ಟ ಹಾಗೂ ನೆರೆ ಹೊರೆಯ ಗ್ರಾಮಗಳ ಜನರಿಗೆ ಸಿನಿಮಾ ಪ್ರದರ್ಶಿಸುತ್ತಿತ್ತು. ತೆಲುಗು ಗಡಿ ಭಾಗದಲ್ಲಿರುವ ಶಿಡ್ಲಘಟ್ಟದಲ್ಲಿ ಕನ್ನಡ, ತೆಲುಗು ಸಿನಿಮಾಗಳು ಹೆಚ್ಚಾಗಿ ಪ್ರದರ್ಶನ ಆಗುತ್ತಿದ್ದು, ಮಯೂರ ಚಿತ್ರಮಂದಿರವು ಸೀಜ್ ಆಗುವ ವೇಳೆಗೆ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಪ್ರದರ್ಶನವಾಗುತ್ತಿತ್ತು.


Click it and Unblock the Notifications











