ವೇದಿಕೆ ಮೇಲೆ ನಿಂತು ನಿರ್ದೇಶಕ ಆರ್.ಚಂದ್ರುಗೆ ಖಡಕ್ ಎಚ್ಚರಿಕೆ ನೀಡಿದ ಶಿವಣ್ಣ
ಶಿವರಾಜ್ ಕುಮಾರ್ ಅವರಿಗೆ ಸ್ಯಾಂಡಲ್ವುಡ್ನಲ್ಲಿ ಈಗ ಸಕ್ರಿವಾಗಿರುವ ಬಹುತೇಕ ಎಲ್ಲ ಜನಪ್ರಿಯ ನಿರ್ದೇಶಕರು, ನಟರೊಂದಿಗೆ ಬಹಳ ಆತ್ಮೀಯತೆ. ಯಾರಿಗೆ ಬೇಕಾದರೂ ಸಲಹೆ ನೀಡುವ, ಗದರುವ, ಕಿವಿ ಹಿಂಡುವಷ್ಟು ಹಿರಿಯತೆ, ಆತ್ಮೀಯತೆ, ಸಲುಗೆ ಶಿವರಾಜ್ ಕುಮಾರ್ ಅವರಿಗೆ ಇದೆ.
ನಿನ್ನೆಯಷ್ಟೆ ಖಾಸಗಿ ಹೋಟೆಲ್ನಲ್ಲಿ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ 'ಸಲಗ' ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಟ ಶಿವರಾಜ್ ಕುಮಾರ್ ಭಾಗವಹಿಸಿದ್ದರು.
Recommended Video
'ಸಲಗ' ಸಿನಿಮಾ, ದುನಿಯಾ ವಿಜಯ್, ತಮ್ಮ ಸಹ ನಟರು, ಗಣೇಶ್, ಡಾಲಿ ಧನಂಜಯ್, ಕಿಟ್ಟಿ ಇತರ ನಟರುಗಳ ಬಗ್ಗೆ ಖುಷಿಯಿಂದ, ಹೆಮ್ಮೆಯಿಂದ ಮಾತನಾಡಿದ ನಟ ಶಿವರಾಜ್ ಕುಮಾರ್ ಕೊನೆಗೆ ಸಿನಿಮಾ ಕಾರ್ಯಕ್ರಮದಲ್ಲಿ ಹಾಜರಿದ್ದ ನಿರ್ದೇಶಕ ಆರ್.ಚಂದ್ರು ಅವರಿಗೆ ಖಡಕ್ ಎಚ್ಚರಿಕೆಯನ್ನು ವೇದಿಕೆ ಮೇಲಿಂದಲೇ ನೀಡಿದರು.

ಕನ್ನಡದ ನಟಿಯರನ್ನು ಹಾಕಿಕೊಳ್ಳಿ: ಆರ್ ಚಂದ್ರುಗೆ ಶಿವಣ್ಣ ಒತ್ತಾಯ
'ಸಲಗ' ಸಿನಿಮಾದ ನಟಿಯ ಬಗ್ಗೆ ಮಾತನಾಡುತ್ತಾ, ಕನ್ನಡದಲ್ಲಿ ಸಾಕಷ್ಟು ಒಳ್ಳೆಯ ನಟಿಯರಿದ್ದಾರೆ ಆದರೆ ಈ ಆರ್.ಚಂದ್ರು ಅಂಥಹವರು ಹೊರಗಡೆಯಿಂದ ನಟಿಯರನ್ನು ಕರೆದುಕೊಂಡು ಬರಲು ನೋಡುತ್ತಾರೆ. ನಮ್ಮಲ್ಲಿ ಟ್ಯಾಲೆಂಟ್ ಇರುವ ಹೆಣ್ಣು ಮಕ್ಕಳು ಇದ್ದಾರೆ. ನೀವು ಅದನ್ನು ಗಮನಿಸಬೇಕು ಚಂದ್ರು, ನಾನು ನಿಮಗೆ ಮನವಿ ಮಾಡುತ್ತೇನೆ. ನಮ್ಮ ಚಿತ್ರರಂಗದ ಹೆಣ್ಣುಮಕ್ಕಳನ್ನು ತಾತ್ಸಾರ ಮಾಡುವುದು ಬೇಡ, ಈ ವಿಷಯ ನಿಮ್ಮ ಮನಸ್ಸಿನಲ್ಲಿರಲಿ'' ಎಂದು ನೇರವಾಗಿ ಆರ್.ಚಂದ್ರುಗೆ ಹೇಳಿದರು ಶಿವರಾಜ್ ಕುಮಾರ್.

'ಕಬ್ಜ' ಬೇಗ ರಿಲೀಸ್ ಆಗಬೇಕು: ಆರ್ ಚಂದ್ರುಗೆ ಶಿವಣ್ಣ ಒತ್ತಾಯ
''ದೊಡ್ಡ ಸಿನಿಮಾ ಮಾಡ್ತಾ ಇದ್ದೀರ. ಆದಷ್ಟು ಬೇಗ ಹೊರಗಡೆ ಬರಬೇಕದು. 'ಕಬ್ಜ' ಸಿನಿಮಾಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ನೀವು ಒಳ್ಳೆಯ ಡೈರೆಕ್ಟರ್, ಒಂದೇ ಸಿನಿಮಾದಲ್ಲಿ ಸಿಕ್ಕಿ ಹಾಕಿಕೊಳ್ಳಬೇಡಿ. ಒಂದೇ ಸಿನಿಮಾವನ್ನು ಎಷ್ಟು ವರ್ಷ ಮಾಡ್ತೀರ. ಬೇಗ ರಿಲೀಸ್ ಮಾಡಿ. ನಿರ್ದೇಶಕರಾಗಿ ನೀವು ಹೆಚ್ಚು ಸಿನಿಮಾಗಳನ್ನು ಮಾಡಬೇಕು. ಜಗತ್ತು ವೇಗವಾಗಿ ಚಲಿಸುತ್ತಿದೆ. ನೀವು ಸಹ ಅದಕ್ಕೆ ತಕ್ಕಂತೆ ಇರಬೇಕು. ಪಟ-ಪಟ ಅಂಥ ಸಿನಿಮಾಗಳನ್ನು ಮಾಡಿ ಬಿಡುಗಡೆ ಮಾಡಬೇಕು. ಯಾವಾಗ ಏನಾಗುತ್ತೊ ಗೊತ್ತಿಲ್ಲ. ಅದಕ್ಕೆ ತುಸು ಸ್ಪೀಡ್ ಆಗಿ ಕೆಲಸ ಮಾಡಿ ಬೇಗ ಸಿನಿಮಾಗಳನ್ನು ಮುಗಿಸಬೇಕು'' ಎಂದರು ಶಿವಣ್ಣ. ಶಿವಣ್ಣರ ಮಾತಿಗೆ ಗಾಬರಿಯಾಗಿ ಆಯಿತೆಂಬಂತೆ ತಲೆ ಆಡಿಸಿದರು ನಿರ್ದೇಶಕ ಆರ್.ಚಂದ್ರು.

ಸಹ ನಟರ ಬಗ್ಗೆ ಒಳ್ಳೆಯ ಮಾತಾಡಿದ ಶಿವಣ್ಣ
ಇತರ ನಟರ ಬಗ್ಗೆಯೂ ಒಳ್ಳೆಯ ಮಾತುಗಳನ್ನಾಡಿದ ನಟ ಶಿವರಾಜ್ ಕುಮಾರ್, 'ಗಣೇಶ್, ಕಿಟ್ಟಿ, ದುನಿಯಾ ವಿಜಿ, ಇನ್ನೂ ಹಲವರು ಇದ್ದಾರೆ ಎಲ್ಲರೂ ಚೆನ್ನಾಗಿ ಮಾಡುತ್ತಿದ್ದಾರೆ. ನನ್ನನ್ನು ಅವರ ವಯಸ್ಸಿನವನಂತೆ ಅವರು ಟ್ರೀಟ್ ಮಾಡುತ್ತಿರುವುದಕ್ಕೆ ನಾನು ಅವರಿಗೆ ಧನ್ಯವಾದ ಹೇಳಬೇಕು. ಎಲ್ಲರಲ್ಲೂ ಒಂದು ಪಾಸಿಟಿವಿಟಿ ಇದೆ. ಅವರಿಂದಲೇ ನಾನು ಇನ್ನೂ ಈ ವಯಸ್ಸಿನಲ್ಲೂ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ನನ್ನ ಸುತ್ತಲೂ ನೆಗೆಟಿವಿಟಿ ಇದ್ದಿದ್ದರೆ ಎಷ್ಟೇ ಜಿಮ್ ಮಾಡಿದರೂ ಆರೋಗ್ಯ ಇರುವುದಿಲ್ಲ. ಪಾಸಿಟಿವಿಟಿ ಇದ್ದರಷ್ಟೆ ಆರೋಗ್ಯದಿಂದ ಇರಲು ಸಾಧ್ಯ'' ಎಂದರು ಶಿವರಾಜ್ ಕುಮಾರ್. ಡಾಲಿ ಧನಂಜಯ್ ಹೆಸರು ಹೇಳಲು ಮರೆತಿದ್ದ ಶಿವಣ್ಣ ಕೊನೆಗೆ ಡಾಲಿಯನ್ನು ಮರೆತಿದ್ದಕ್ಕೆ ಸಾರಿ ಅಂದು, ಡಾಲಿ ನನ್ನ ಹೃದಯದಲ್ಲಿದ್ದಾನೆ'' ಎಂದರು.

ಶಿವಣ್ಣ-ಆರ್.ಚಂದ್ರು ನಡುವೆ ಒಳ್ಳೆಯ ಬಾಂದವ್ಯವಿದೆ
ಆರ್.ಚಂದ್ರು ಹಾಗೂ ಶಿವರಾಜ್ ಕುಮಾರ್ ನಡುವೆ ಉತ್ತಮ ಬಾಂಧವ್ಯ ಇದೆ. ಲಾಕ್ಡೌನ್ ಅವಧಿಯಲ್ಲಿ ಆರ್.ಚಂದ್ರು ಅವರ ಊರಿಗೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಆಗಮಿಸಿದ್ದರು. ಇಬ್ಬರೂ ಚಂದ್ರು ಅವರ ತೋಟ, ಮನೆ ಸುತ್ತಾಡಿದ್ದರು. ಚಂದ್ರು ಕುಟುಂಬದೊಂದಿಗೆ ಬೆರೆತು ಊಟ ಮಾಡಿ. ಊರಿನವರೊಟ್ಟಿಗೆ ಬೆರೆತು ಅವರೊಂದಿಗೆ ಚಿತ್ರಗಳನ್ನು ತೆಗೆಸಿಕೊಂಡು ಹೋಗಿದ್ದರು. ಆರ್.ಚಂದ್ರು ನಿರ್ದೇಶನದ 'ಮೈಲಾರಿ' ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರು. ಈ ಸಿನಿಮಾ 2010ರಲ್ಲಿ ಬಿಡುಗಡೆ ಆಗಿತ್ತು.


Click it and Unblock the Notifications











