ಶಕ್ತಿಧಾಮದ ಮಕ್ಕಳನ್ನು ಪಿಕ್ನಿಕ್ಗೆ ಕರೆತಂದ ಶಿವರಾಜ್ ಕುಮಾರ್
ದೊಡ್ಮನೆ ಕುಟುಂಬದವರು ನಡೆಸುತ್ತಿರುವ ಶಕ್ತಿಧಾಮದ ಮಕ್ಕಳು ನಿನ್ನೆ ಪುನೀತ್ ರಾಜ್ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿದ್ದರು. ಸ್ವತಃ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಶಕ್ತಿಧಾಮದ ಮಕ್ಕಳನ್ನು ಸ್ವಾಗತಿಸಿದರು.
Recommended Video
ಇಂದು ಶಕ್ತಿಧಾಮದ ಮಕ್ಕಳನ್ನು ನಂದಿ ಬೆಟ್ಟ ಹಾಗೂ ಇತರೆ ಕಡೆಗಳಿಗೆ ಪಿಕ್ನಿಕ್ಗೆಂದು ನಟ ಶಿವರಾಜ್ ಕುಮಾರ್ ಕರೆತಂದಿದ್ದರು.
ನಂದಿ ದೇವಾಲಯ ಹಾಗೂ ನಂದಿ ಬೆಟ್ಟಕ್ಕೆ ಶಕ್ತಿಧಾಮದ ಮಕ್ಕಳನ್ನು ಶಿವರಾಜ್ ಕುಮಾರ್ ಕರೆ ತಂದಿದ್ದರು. ಶಕ್ತಿಧಾಮದ ಮಕ್ಕಳು ಸಮವಸ್ತ್ರ ಧರಿಸಿ ಸಾಲಾಗಿ ಕೈ ಕೈ ಹಿಡಿದುಕೊಂಡು ದೇವಾಲಯಕ್ಕೆ ಭೇಟಿ ನೀಡಿ ದೇವಾಲಯ ವೀಕ್ಷಿಸಿದರು.
ದೇವರ ದರ್ಶನದ ನಂತರ ಮಕ್ಕಳು ತಿಂಡಿ ಸೇವಿಸಿದರು. ಗೀತಾ ಶಿವರಾಜ್ಕುಮಾರ್ ಅವರಿಗೆ ಮಕ್ಕಳು ಸಿಹಿ ತಿನ್ನಿಸಿದರು. ಗೀತಾ ಶಿವರಾಜ್ ಕುಮಾರ್ ಸಹ ಮಕ್ಕಳಿಗೆ ಸಿಹಿ ತಿನ್ನಿಸಿದರು.
ನಂತರ ಮಕ್ಕಳು ನಂದಿ ಬೆಟ್ಟ ಏರಿದರು. ಪುನೀತ್ ರಾಜ್ಕುಮಾರ್ ಹಾಡು ಹಾಡುತ್ತಾ, ಸ್ಪೂರ್ತಿಧಾಯಕ ಘೋಷಣೆಗಳನ್ನು ಕೂಗುತ್ತಾ ಸಾಲಾಗಿ ಮಕ್ಕಳು ಬೆಟ್ಟ ಏರಿದರು. ನಂದಿ ಬೆಟ್ಟದ ಮೇಲೆ ಹೋಗಿ ಅಲ್ಲಿನ ರಮ್ಯ ನೊಟ ಕಂಡು ಬೆರಗಾಗಿ ಖುಷಿ ಪಟ್ಟರು.

ಜ್ಞಾನ ವಿಸ್ತರಣೆಗಾಗಿ ಪ್ರವಾಸ: ಶಿವರಾಜ್ ಕುಮಾರ್
ಈ ಸಮಯದಲ್ಲಿ ಮಾಧ್ಯಮದೊಟ್ಟಿಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ''ಮಕ್ಕಳ ಜ್ಞಾನ ವೃದ್ಧಿಗಾಗಿ, ಪ್ರವಾಸಿ ತಾಣಗಳ ಬಗ್ಗೆ ಮಾಹಿತಿಗಾಗಿ ಪ್ರವಾಸ ಕರೆತಂದಿದ್ದೇವೆ. ನಿನ್ನೆ ಬೆಂಗಳೂರಿಗೆ ಬಂದಿದ್ದರು. ಅಪ್ಪಾಜಿ, ಅಮ್ಮ, ಅಪ್ಪು ಅವರನ್ನು (ಸಮಾಧಿ) ನೋಡಿದರು. ನಂತರ ಮ್ಯೂಸಿಯಂ, ಪ್ಯಾಲೆಸ್ ನೋಡಿದರು. ಇಂದು ನಂದಿಗೆ ಕರೆತಂದಿದ್ದೇವೆ. ಇಲ್ಲಿಂದ ಸಂಜೆ ಮನೆಗೆ ಬರುತ್ತಾರೆ. ಪ್ರವಾಸ ಮುಗಿಸಿ ನಾಳೆ ಎಲ್ಲರೂ ಮೈಸೂರಿಗೆ ಮರಳಲಿದ್ದಾರೆ'' ಎಂದು ಶಿವರಾಜ್ ಕುಮಾರ್.

ತಾಯಿ ಅಗಲಿಕೆ ಬಳಿಕ ಗೀತಾ ನೋಡಿಕೊಳ್ಳುತ್ತಿದ್ದಾರೆ: ಶಿವರಾಜ್ ಕುಮಾರ್
''ನಮ್ಮ ತಂದೆ ತಾಯಿ ಹಾಗೂ ಕೆಂಪಯ್ಯನವರು ಆರಂಭಿಸಿದ ಸಂಸ್ಥೆ ಶಕ್ತಿಧಾಮ. ಸಾಕಷ್ಟು ಟ್ರಸ್ಟಿಗಳು ಸೇರಿ ಆರಂಭ ಮಾಡಿದ ಸಂಸ್ಥೆ ಇದು. ಸಂಸ್ಥೆಯಲ್ಲಿ 150 ಮಂದಿ ಮಕ್ಕಳಿದ್ದಾರೆ ಈ ವರ್ಷದಲ್ಲಿ 200 ಜನ ಮಕ್ಕಳು ಆಗಲಿದ್ದಾರೆ. ಅವರಿಗೆ ಊಟ ವಸತಿ ಶಾಲೆ ಎಲ್ಲಾ ಜವಾಬ್ದಾರಿ ನಮ್ಮದು. ಅಮ್ಮ ಅಗಲಿದ ಬಳಿಕ ಗೀತಾ ಶಿವರಾಜ್ ಕುಮಾರ್ ಅವರು ಶಕ್ತಿಧಾಮವನ್ನು ನೋಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಶೈಕ್ಷಣಿಕ ಪಾಠಗಳಷ್ಟೆ ಅಲ್ಲದೆ ಬೇರೆ ವಿಷಯಗಳ ಬಗ್ಗೆಯೂ ಆಸಕ್ತಿ ಬೆಳೆಸುವ ಕಾರ್ಯವನ್ನು ಅವರು ಮಾಡುತ್ತಿದ್ದಾರೆ'' ಎಂದು ಶಿವರಾಜ್ ಕುಮಾರ್ ಹೇಳಿದರು.

ಅಪ್ಪು ಬಗ್ಗೆ ಶಿವರಾಜ್ ಕುಮಾರ್ ಮಾತು
ಅಪ್ಪು ಬಗ್ಗೆಯೂ ಮಾತನಾಡಿದ ಶಿವರಾಜ್ ಕುಮಾರ್, ''ಪುನೀತ್ ಇಲ್ಲದ ನೋವು ಯಾವುತ್ತೂ ಹೋಗಲ್ಲ, ಅಪ್ಪು ಯಾವತ್ತು ನಮ್ಮ ಜೊತೆಯಲ್ಲಿ ಇದ್ದಾರೆ ಅನ್ನೋದೆ ನಮ್ಮ ಭಾವನೆ. ಅಪ್ಪು ಅಮರವಾಗಿದ್ದಾರೆ ಎಂಬುದೇ ನಮ್ಮ ಆಸೆ. ಅದರಲ್ಲಿ ನಾವೇ ಬದುಕುಬೇಕು, ಅಪ್ಪುವನ್ನು ಸುಲಭವಾಗಿ ಮರೆಯಲು ಸಾಧ್ಯವಿಲ್ಲ ಎಂದರು. ಜೊತೆಗೆ ನಂದಿ ಗಿರಿಧಾಮಕ್ಕೆ, ದೇವಾಲಯಕ್ಕೆ ಈ ಹಿಂದೆ ಬಂದಿದ್ದ ನೆನಪುಗಳನ್ನು ಮೆಲುಕು ಹಾಕಿದರು.

ಶಿವಣ್ಣನ ಮನೆಯ ಮುಂದೆ ಮಕ್ಕಳಿಗೆ ಊಟದ ವ್ಯವಸ್ಥೆ
ಮೈಸೂರಿನಿಂದ ಆಗಮಿಸಿರುವ ಶಕ್ತಿಧಾಮದ ಮಕ್ಕಳು ಸದ್ಯ ಶಿವಣ್ಣ ನಿವಾಸದ ಸಮೀಪವಿರುವ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶಿವಣ್ಣ ಅವರ ಮನೆ ಮುಂದೆ ಪೆಂಡಾಲ್ ಹಾಕಿ ಮಕ್ಕಳಿಗೆ ಮಕ್ಕಳಿಗೆ ಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ. ಮಕ್ಕಳಿಗೆ ಬೇಕಾದಂತೆ ಊಟದ ವ್ಯವಸ್ಥೆ ಇದ್ದು, 140ಕ್ಕೂ ಹೆಚ್ಚು ಮಂದಿ ಕುಳಿತು ಊಟ ಮಾಡುವಂತೆ ಸಿದ್ಧತೆ ಮಾಡಲಾಗಿದೆ.

ಡ್ರೈವ್ ಕರೆದುಕೊಂಡು ಹೋಗಿದ್ದ ಶಿವಣ್ಣ
ಅಪ್ಪು ಅಗಲಿಕೆಯ ಬಳಿಕ ಶಕ್ತಿಧಾಮಕ್ಕೆ ಹೆಚ್ಚು ಭೇಟಿ ನೀಡುತ್ತಿದ್ದಾರೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್. ಕೆಲವು ದಿನಗಳ ಹಿಂದಷ್ಟೆ ಗಣರಾಜ್ಯೋತ್ಸವಕ್ಕೆ ಶಕ್ತಿಧಾಮಕ್ಕೆ ಭೇಟಿ ನೀಡಿದ್ದ ಶಿವರಾಜ್ ಕುಮಾರ್, ಮಕ್ಕಳನ್ನೆಲ್ಲಾ ವ್ಯಾನ್ನಲ್ಲಿ ಕರೆದುಕೊಂಡು ತಾವೇ ಡ್ರೈವ್ ಮಾಡಿಕೊಂಡು ಮೈಸೂರು ಸುತ್ತು ಹೊಡೆಸಿದ್ದರು. ಅದಕ್ಕೂ ಮುನ್ನ ಶಕ್ತಿಧಾಮದ ಮಕ್ಕಳೊಂದಿಗೆ ಖೋ-ಖೋ ಆಟವಾಡಿ ಖುಷಿಪಟ್ಟಿದ್ದರು.


Click it and Unblock the Notifications











