ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿಯಾದ ಶಿವರಾಜ್ ಕುಮಾರ್
ನಟ ಶಿವರಾಜ್ ಕುಮಾರ್ ಇಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿದ್ದಾರೆ. ಚೆನ್ನೈನ ರಾಜ್ಯಪಾಲರ ಭವನದಲ್ಲಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿ ಶಿವಣ್ಣ ಮಾತುಕತೆ ನಡೆಸಿದ್ದಾರೆ.
ನಟ ಶಿವರಾಜ್ ಕುಮಾರ್ ಕಳೆದ ಕೆಲ ದಿನಗಳಿಂದ ಚೆನ್ನೈನಲ್ಲಿದ್ದು ಎರಡು ದಿನದ ಹಿಂದೆಯಷ್ಟೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರನ್ನು ಭೇಟಿಯಾಗಿದ್ದರು. ಇದೀಗ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿದ್ದಾರೆ.
ಪುನೀತ್ ರಾಜ್ಕುಮಾರ್ ನಿಧನರಾದ ಬಳಿಕ ಬೆಂಗಳೂರಿಗೆ ಬಂದಿದ್ದ ವೆಂಕಯ್ಯ ನಾಯ್ಡು ಅವರು ಬಿಟಿಎಸ್ (ಬೆಂಗಳೂರು ತಂತ್ರಜ್ಞಾನ ಶೃಂಗ) ಉದ್ಘಾಟಿಸಿ ಮಾತನಾಡುತ್ತಾ ಅಪ್ಪು ಅವರನ್ನು ನೆನಪು ಮಾಡಿಕೊಂಡಿದ್ದರು. ಬಹಳ ಸಣ್ಣ ವಯಸ್ಸಿನಲ್ಲಿಯೇ ಅತ್ಯುತ್ತಮ ಕಲಾವಿದರೊಬ್ಬರನ್ನು ನಾವು ಕಳೆದುಕೊಂಡಿದ್ದೇವೆ ಎಂದಿದ್ದರು. ಶಿವರಾಜ್ ಕುಮಾರ್ ಹಾಗೂ ಅಪ್ಪು ಕುಟುಂಬಕ್ಕೆ ಸಾಂತ್ವನ ಪತ್ರವನ್ನೂ ವೆಂಕಯ್ಯ ನಾಯ್ಡು ಬರೆದಿದ್ದರು ಎನ್ನಲಾಗಿದೆ.

ಹಾಗಾಗಿ ಅವರಿಗೆ ಧನ್ಯವಾದ ಅರ್ಪಿಸಲು ಶಿವರಾಜ್ ಕುಮಾರ್ ಇಂದು ವೆಂಕಯ್ಯ ಅವರನ್ನು ಭೇಟಿಯಾಗಿದ್ದರು. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರನ್ನೂ ಸಹ ಇದೇ ಕಾರಣಕ್ಕೆ ಕೆಲವು ದಿನಗಳ ಹಿಂದೆಯಷ್ಟೆ ಶಿವಣ್ಣ ಹಾಗೂ ಪತ್ನಿ ಗೀತ ಶಿವರಾಜ್ ಕುಮಾರ್ ಭೇಟಿ ಆಗಿದ್ದರು.
ಅವಿಭಜಿತ ಆಂಧ್ರ ಪ್ರದೇಶದವರಾದ ವೆಂಕಯ್ಯ ನಾಯ್ಡು ಬಿಜೆಪಿ ಸಂಸದರಾಗಿ, ಕೇಂದ್ರ ಸಚಿವರಾಗಿ ಕೆಲಸ ನಿರ್ವಹಿಸಿ ಈಗ ಉಪರಾಷ್ಟ್ರಪತಿಗಳಾಗಿದ್ದಾರೆ. ತೆಲುಗು ಭಾಷಿಕರಾದ ವೆಂಕಯ್ಯ ನಾಯ್ಡು ತೆಲುಗು ಚಿತ್ರರಂಗದೊಟ್ಟಿಗೆ ಆಪ್ತ ನಂಟು ಹೊಂದಿದ್ದಾರೆ. ಚಿರಂಜೀವಿ, ವೆಂಕಯ್ಯ ಅವರಿಗೆ ಬಹು ಆಪ್ತ ಮಿತ್ರರು.
ವೆಂಕಯ್ಯ ನಾಯ್ಡು ಹಾಗೂ ಚಿರಂಜೀವಿ ಹಾಜರಿದ್ದ ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಚಿರಂಜೀವಿ, ಅಂದೂ ಸಹ ಅಪ್ಪು ನಿಧನದ ಬಗ್ಗೆ ಪ್ರಸ್ತಾಪಿಸಿದ್ದರು. ಅವರೊಬ್ಬ ಅದ್ಭುತ ನಟ ಎಂದಿದ್ದ ಚಿರಂಜೀವಿ, ಅಣ್ಣಾವ್ರ ಕುಟುಂಬದ ಬಗ್ಗೆ ತಮ್ಮ ಕಾಳಜಿಯನ್ನು ಅಂದು ವ್ಯಕ್ತಪಡಿಸಿದ್ದರು. ವೆಂಕಯ್ಯ ನಾಯ್ಡು ಸಹ ಅಂದಿನ ಕಾರ್ಯಕ್ರಮದಲ್ಲಿ ಅಪ್ಪು ಅವರನ್ನು ನೆನಪು ಮಾಡಿಕೊಂಡಿದ್ದರು.


Click it and Unblock the Notifications











