'ಗಂಧದ ಗುಡಿ' ಟೀಸರ್ ನೋಡಿ ಶಾಕ್ ಆಯಿತು: ಶಿವರಾಜ್ ಕುಮಾರ್
ಪುನೀತ್ ರಾಜ್ಕುಮಾರ್ ಅಗಲಿದಾಗ ಸಾಕಷ್ಟು ಯುವ ನಿರ್ದೇಶಕರು, ತಂತ್ರಜ್ಞರು, ಕಲಾವಿದರು ತೀವ್ರ ಬೇಸರ ವ್ಯಕ್ತಪಡಿಸಿದರು. ''ಪುನೀತ್ ಸಾವು ಎಂಬುದು ಕೇವಲ ಅವರೊಬ್ಬರ ಸಾವಲ್ಲ, ಹಲವಾರು ಪ್ರತಿಭಾವಂತರ ಕನಸಿನ ಸಾವು'' ಎಂದೊಬ್ಬ ಯುವ ನಿರ್ದೇಶಕ ಬಣ್ಣಿಸಿದ್ದರು. ಅದಕ್ಕೆ ಕಾರಣವೂ ಇತ್ತು.
ಸದಾ ಸಿನಿಮಾವನ್ನು ಜಪಿಸುತ್ತಿದ್ದ ಪುನೀತ್ ರಾಜ್ಕುಮಾರ್ಗೆ ಚಿತ್ರರಂಗಕ್ಕೆ ಅತ್ಯುತ್ತಮವಾದುದನ್ನು ನೀಡಬೇಕೆಂಬ ಹಂಬಲ ಬಹಳವಾಗಿ ಇತ್ತು. ಪ್ರೊಡಕ್ಷನ್ ಹೌಸ್ ನಿರ್ಮಿಸಿ ಹಲವು ಹೊಸಬರಿಗೆ ಅವಕಾಶ ನೀಡಿದ್ದರು. ಕೆಲವು ಅತ್ಯುತ್ತಮ ಸಿನಿಮಾಗಳನ್ನು ತೆರೆಗೆ ತರುವ ಯೋಜನೆ ಈಗಾಗಲೇ ಜಾರಿಯಲ್ಲಿತ್ತು.
ಕೇವಲ ಸಿನಿಮಾ ಮಾತ್ರವಲ್ಲ ಕರ್ನಾಟಕದ ಬಗ್ಗೆಯೂ ಅಪಾರ ಪ್ರೀತಿಯುಳ್ಳವರಾಗಿದ್ದ ಪುನೀತ್, ಕರ್ನಾಟಕದ ಸೊಬಗನ್ನು ವಿಶ್ವದೆಲ್ಲೆಡೆ ತೋರಿಸಬೇಕೆಂಬ ಆಸೆಯಿಂದ ಸತತ ಒಂದು ವರ್ಷ ಕರ್ನಾಟಕದ ಮೂಲೆ-ಮೂಲೆ ಪ್ರಯಾಣ ಮಾಡಿ ಅದ್ಭುತ ವಿಡಿಯೋಗಳನ್ನು ತೆಗೆದುಕೊಂಡು ಬಂದಿದ್ದು, ಅವುಗಳ ಮೂಲಕ ಕತೆಯೊಂದನ್ನು ಹೇಳಲು ಹೊರಟಿದ್ದರು. ಆದರೆ ಅದು ಬಿಡುಗಡೆ ಆಗುವ ಮುನ್ನವೇ ಪುನೀತ್ ನಿಧನ ಹೊಂದಿದರು. ಈ ಯಾತ್ರೆಯಲ್ಲಿ ಪುನೀತ್ ಜೊತೆಗಿದ್ದ ಅಮೋಘ ವರ್ಷ ಪ್ರಾಜೆಕ್ಟ್ ಅನ್ನು ಮುಂದುವರೆಸಿದ್ದು ಇಂದು 'ಗಂಧದ ಗುಡಿ' ಟ್ರಾವೆಲ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.
ಪುನೀತ್ ಅವರ 'ಗಂಧದ ಗುಡಿ' ಟ್ರಾವೆಲ್ ಸಿನಿಮಾದ ಟೀಸರ್ ಅನ್ನು ನೋಡಿದ ಹಲವು ನಟರು, ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಶ್, ಪ್ರಶಾಂತ್ ನೀಲ್ ಸೇರಿದಂತೆ ಹಲವರು 'ಗಂಧದ ಗುಡಿ' ಟೀಸರ್ ಅನ್ನು ಬಹುವಾಗಿ ಮೆಚ್ಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್ ಸಹ ಟೀಸರ್ ಅನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಟೀಸರ್ ನೋಡಿ ಶಾಕ್ ಆಯಿತು: ಶಿವರಾಜ್ ಕುಮಾರ್
'ಗಂಧದ ಗುಡಿ' ಟೀಸರ್ ಬಗ್ಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ''ಟೀಸರ್ ನೋಡಿ ಬಹಳ ಶಾಕ್ ಆಯಿತು ಜೊತೆಗೆ ಬೇಜಾರು ಸಹ ಆಯಿತು. ಏಕೆಂದರೆ ತೆಗೆದ ಮನುಷ್ಯ ಅಪ್ಪುನೇ ಇಲ್ಲ ಎಂಬುದು ಬಹಳ ನೋವಿನ ವಿಷಯ. ಟೀಸರ್ನಲ್ಲಿನ ಅಪ್ಪು ಅವರ ಲುಕ್ಸ್, ಸ್ಮೈಲ್ ಬಹಳವಾಗಿ ಕಾಡುತ್ತೆ. ಆದರೆ ಪುನೀತ್ರ ಪ್ರಯತ್ನ ಇದೆಯಲ್ಲ ಅದು ಅದ್ಭುತ'' ಎಂದರು ಶಿವರಾಜ್ ಕುಮಾರ್.

''ಅಪ್ಪ, ಮಕ್ಕಳು 'ಗಂಧದ ಗುಡಿ' ಮಾಡಿರುವುದು ನಮ್ಮ ಹೆಮ್ಮೆ''
''ಗಂಧದ ಗುಡಿ' ಎಂಬುದು ಕನ್ನಡ ನಾಡಿನ ಮತ್ತೊಂದು ಹೆಸರಿದ್ದಂತೆ. 'ಗಂಧದ ಗುಡಿ'ಗೂ ನಮ್ಮ ಕುಟುಂಬಕ್ಕೂ ನಂಟಿದೆ. 'ಗಂಧದ ಗುಡಿ'ಯಲ್ಲಿ ಅಪ್ಪಾಜಿ ನಟಿಸಿದ್ದರು, 'ಗಂಧದ ಗುಡಿ 2' ನಲ್ಲಿ ನಾನು ನಟಿಸಿದ್ದೆ, ಈಗ 'ಗಂಧದ ಗುಡಿ'ಯಲ್ಲಿ ಪುನೀತ್ ನಟಿಸಿದ್ದಾನೆ. 'ಗಂಧದ ಗುಡಿ'ಯಲ್ಲಿ ಅಪ್ಪ, ಮಕ್ಕಳು ನಟಿಸುವುದು ಒಂದು ರೀತಿ ವಿಶೇಷ. ಇದು ನಮಗೆ, ನಮ್ಮ ಕುಟುಂಬಕ್ಕೆ ಹೆಮ್ಮೆಯ ವಿಷಯ, ಆದರೆ ಈ ಎಲ್ಲದರ ನಡುವೆ ಪುನೀತ್ ಇಲ್ಲ ಎಂಬುದು ದುಃಖದ ವಿಷಯ. ನಾವು ಪುನೀತ್ ಇಲ್ಲ ಎಂದು ಕೊಳ್ಳುವುದಿಲ್ಲ'' ಎಂದರು ಶಿವರಾಜ್ ಕುಮಾರ್.

''ಪುನೀತ್ ಈ ಸಮಯದಲ್ಲಿ 'ಗಂಧದ ಗುಡಿ' ಮಾಡಿರುವುದು ಅರ್ಥಪೂರ್ಣ''
''ಅರಣ್ಯಕ್ಕೂ ಚಿತ್ರರಂಗಕ್ಕೂ ನಂಟು ಹಳೆಯದು. ನಾವು 'ಗಂಧದ ಗುಡಿ' ಮಾಡಿದ್ದೆವು, ಪ್ರಭಾಕರ್ 'ಕಾಡಿನ ರಾಜ' ಮಾಡಿದ್ದರು. ನನ್ನ ಸಿನಿಮಾಗಳಲ್ಲಿಯೂ 'ಮನ ಮೆಚ್ಚಿದ ಹುಡುಗಿ' ಸಿನಿಮಾದಿಂದ ಈಗಿನ 'ಭಜರಂಗಿ 02' ವರೆಗೆ ಅರಣ್ಯದ ಬಗ್ಗೆ ಸಿನಿಮಾಗಳನ್ನು ಮಾಡಿಕೊಂಡು ಬಂದಿದ್ದೀನಿ. ಸಾಕಷ್ಟು ಸಿನಿಮಾಗಳಲ್ಲಿ ನಿಸರ್ಗದ ಜೊತೆಗೆ ಹೊಂದಿಕೊಳ್ಳುವ ಅವಕಾಶ ನಮಗೆ ಸಿಕ್ಕಿದೆ. ಇಂಥಹಾ ಸಂದರ್ಭದಲ್ಲಿ ಅಪ್ಪು 'ಗಂಧದ ಗುಡಿ' ಅಂಥಹಾ ಒಂದು ಕಾನ್ಸೆಪ್ಟ್ ತೆಗೆದುಕೊಂಡು ಬರುತ್ತಿರುವುದು ಅರ್ಥಪೂರ್ಣ ಎನಿಸುತ್ತದೆ'' ಎಂದಿದ್ದಾರೆ ಶಿವರಾಜ್ ಕುಮಾರ್.

ನಿಸರ್ಗಕ್ಕೆ ತೊಂದರೆ ಕೊಟ್ಟರೆ ನಮಗೇ ತೊಂದರೆ: ಶಿವಣ್ಣ
''ನಿಸರ್ಗ ಎಷ್ಟು ಅವಶ್ಯಕ, ಕಾಡಿಗೆ ತೊಂದರೆ ಮಾಡಿದಾಗ ಏನೆಲ್ಲ ಆಗಬಹುದು ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ. ಎಲ್ಲರೂ ನೋಡಿರುವ ಹಾಗೆ ನೈಸರ್ಗಿಕ ವಿಕೋಪಗಳು ಇತ್ತೀಚೆಗೆ ಹೆಚ್ಚಾಗಿವೆ. ಅತಿವೃಷ್ಟಿ, ಅನಾವೃಷ್ಟಿಗಳಿಗೆ ನಿಸರ್ಗದ ಮೇಲೆ ಮಾನವನ ದಬ್ಬಾಳಿಕೆಯೇ ಕಾರಣ. ಕಾಡಿಗೆ ನಾವು ಎಷ್ಟು ತೊಂದರೆ ಕೊಡುತ್ತೇವೆಯೋ ಅಷ್ಟು ಸಮಸ್ಯೆ ಜನರಿಗೆ ಆಗುತ್ತದೆ ಎಂಬುದಕ್ಕೆ ಈ ಅತಿವೃಷ್ಟಿ, ಅನಾವೃಷ್ಟಿ, ಭೂ ಕುಸಿತಗಳೇ ಉದಾಹರಣೆ'' ಎಂದಿದ್ದಾರೆ ಶಿವರಾಜ್ ಕುಮಾರ್.


Click it and Unblock the Notifications











