ನಿಮಗೆಷ್ಟು ಬೇಸರ ಆಗಿದ್ಯೋ ನನಗೂ ಅಷ್ಟೇ ಆಗಿದೆ: ಅಭಿಮಾನಿಗಳಲ್ಲಿ ಶಿವಣ್ಣ ವಿಶೇಷ ಮನವಿ
ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದೆ. ಪ್ರತಿವರ್ಷ ಶಿವಣ್ಣ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ತಿಂಗಳ ಮುಂಚೆಯೇ ಅಭಿಮಾನಿಗಳು ಸಂಭ್ರಮಕ್ಕೆ ಸಜ್ಜಾಗುತ್ತಿದ್ದರು. ಮನೆಯ ಮುಂದೆ ಅಭಿಮಾನಿಗಳ ದಂಡೇ ಸೇರಿರುತ್ತಿತ್ತು. ಆದರೆ ಕೊರೊನಾ ಹಾವಳಿಯಿಂದ ಕಳೆದ ವರ್ಷದಿಂದ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಬಿದ್ದಿದೆ.
ಆದರೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ತನ್ನ ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿರುವ ಶಿವಣ್ಣ ಇಂಥ ಸಮಯದಲ್ಲಿ ಹುಟ್ಟುಹಬ್ಬ ಸಂಭ್ರಮಾಚರಣೆ ಬೇಡ ಎಂದು ಶಿವಣ್ಣ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಹುಟ್ಟುಹಬ್ಬ ಸಂಭ್ರಮಕ್ಕಿಂತ ಎಲ್ಲರ ಆರೋಗ್ಯ ಮುಖ್ಯ ಎಂದು ಹೇಳಿದ್ದಾರೆ.

"ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ತುಂಬಾ ಮುಖ್ಯ. ದೇವರ ದಯೆಯಿಂದ ಕೊರೊನಾ ಕಮ್ಮಿ ಆಗಿದೆ. ಹಾಗಂತ ಹೆಚ್ಚರಿಕೆಯಿಂದ ಇರುವ ಸಮಯ ಮುಗಿದಿಲ್ಲ. ಮುಂದೆ ಇನ್ನು ಎಚ್ಚರಿಕೆಯಿಂದ ಇರಬೇಕು. ಜುಲೈ 12 ನನ್ನ ಹುಟ್ಟಿದ ದಿನ ಎಲ್ಲರಿಗೂ ಗೊತ್ತಿದೆ. ಕೆಲವು ಕಾರಣಗಳಿಂದ ನಾನು ಬೆಂಗಳೂರಿನಲ್ಲಿ ಇರಲ್ಲ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ನಿಮಗೆ ಎಷ್ಟು ಬೇಸರ ಆಗುತ್ತಿದೆಯೋ ನನಗೂ ಅಷ್ಟೇ ಆಗುತ್ತಿದೆ. ನಿಮ್ಮ ವಿಶ್ಗಳನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿ. ನಿಮ್ಮ ಪ್ರೀತಿ, ವಿಶ್ವಾಸ, ಪ್ರೋತ್ಸಾಹ ಯಾವಾಗಲು ಇರಬೇಕು. ದಯವಿಟ್ಟು ಕೊರೊನಾ ನಿಯಮ ಫಾಲೋ ಮಾಡಿ" ಎಂದು ಮನವಿ ಮಾಡಿಕೊಂಡಿದ್ದಾರೆ.
ಅಂದಹಾಗೆ ಶಿವಣ್ಣ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ನಿಂದ ಸುಮಾರು 2 ತಿಂಗಳಿಗೂ ಅಧಿಕ ಸಮಯ ಮನೆಯಲ್ಲೇ ಇರುವಂತಾಗಿತ್ತು. ಇದೀಗ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿದ್ದು, 123ನೇ ಸಿನಿಮಾ 'ಶಿವಪ್ಪ' ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಡಾಲಿ ಧನಂಜಯ್ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಜಯ್ ಮಿಲ್ಟನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಭಜರಂಗಿ-2 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.


Click it and Unblock the Notifications











