500KM ಸೈಕಲ್ ತುಳಿದು ಬಂದ ಅಭಿಮಾನಿಯನ್ನು ಕಂಡು ಕರಗಿತು ಶಿವಣ್ಣನ ಮನ!
Recommended Video

ಅಭಿಮಾನ ಎನ್ನುವುದೇ ಹಾಗೆ ಅದು ಏನನ್ನು ಬೇಕಾದರೂ ಮಾಡಿಸಿಬಿಡುತ್ತದೆ. ಇದೀಗ ಶಿವಣ್ಣನ ಅಭಿಮಾನಿಯೊಬ್ಬ ಎಲ್ಲರೂ ಅಚ್ಚರಿ ಪಡುವ ಕೆಲಸ ಮಾಡಿದ್ದಾನೆ. ಪಕೀರಪ್ಪ ಎಂಬ ಶಿವಣ್ಣ ಅವರ ಅಪ್ಪಟ್ಟ ಅಭಿಮಾನಿ 500 ಕಿಲೋ ಮೀಟರ್ ಸೈಕಲ್ ಸವಾರಿ ಮಾಡಿದ್ದಾನೆ.
ಇಂದು ನಟ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬವಿದ್ದು, ಅಭಿಮಾನಿಗಳು ಅವರ ನಿವಾಸಕ್ಕೆ ಬಂದು ಶುಭ ಹಾರೈಸುತ್ತಿದ್ದಾರೆ. ಆದರೆ, ಈ ಅಭಿಮಾನಿ ಸೈಕಲ್ ನಲ್ಲಿ 500 ಕಿಲೋ ಮೀಟರ್ ದೂರದಿಂದ ಶಿವನ ದರ್ಶನಕ್ಕಾಗಿ ಬಂದಿದ್ದಾನೆ. ಶಿವಣ್ಣ ಮನೆ ತಲುಪಿದ ಈ ಅಭಿಮಾನಿ 'ಫಿಲ್ಮಿಬೀಟ್ ಕನ್ನಡ' ಜೊತೆಗೆ ತನ್ನ ಅಂತರಾಳದ ಮಾತುಗಳನ್ನು ಹಂಚಿಕೊಂಡಿದ್ದಾನೆ. ಮುಂದೆ ಓದಿ...

ಪಕೀರಪ್ಪ ಎಂಬ ಶಿವ ಭಕ್ತ
ಪಕೀರಪ್ಪ ಎಂಬ ಈ ಅಭಿಮಾನಿ ಮೂಲತಃ ಬೆಳಗಾವಿಯವರು. ತಂದೆ ತಾಯಿಯ ಪ್ರೀತಿ ಇಲ್ಲದೆ ಬೆಳೆದ ಈ ಹುಡುನಿಗೆ ಶಿವಣ್ಣನ 'ಆನಂದ್' ಸಿನಿಮಾ ತುಂಬ ಹತ್ತಿರ ಆಗಿದೆಯಂತೆ. ಮೊದಲು ಈ ಚಿತ್ರ ನೋಡಿ ಇಷ್ಟ ಪಟ್ಟ ಈತ ಮುಂದೆ ಶಿವಣ್ಣನ ದೊಡ್ಡ ಅಭಿಮಾನಿ ಆಗಿದ್ದಾನೆ. ಪಿಯುಸಿ ಓದಿರುವ ಪಕೀರಪ್ಪ ತನ್ನ ಊರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದಾನೆ.

500 ಕಿಲೋ ಮೀಟರ್ ಸೈಕಲ್ ಸವಾರಿ
ಬೆಳಗಾವಿಯಿಂದ ಬೆಂಗಳೂರಿಗೆ ಸುಮಾರು 500 ಕಿಲೋ ಮೀಟರ್ ಪ್ರಯಾಣವನ್ನು ಸೈಕಲ್ ನಲ್ಲಿ ಮಾಡಿ ಪಕೀರಪ್ಪ ಇಂದು ಶಿವಣ್ಣ ಮನೆ ತಲುಪಿದ್ದಾನೆ. ಕಳೆದ ಭಾನುವಾರ ಮಧ್ಯಾಹ್ನ ಎರಡು ಗಂಟೆಗೆ ಬೆಳಗಾವಿ ಬಿಟ್ಟ ಪಕೀರಪ್ಪ ಹುಬ್ಬಳಿ, ಹರಿಹರ, ಚಿತ್ರದುರ್ಗ, ಹಿರಿಯೂರು, ತುಮಕೂರು ಮಾರ್ಗವಾಗಿ ನಿನ್ನೆ ಬೆಂಗಳೂರು ತಲುಪಿದ್ದಾನೆ.

ಸತತ ಮೂರನೇ ಬಾರಿ
ವಿಶೇಷ ಅಂದರೆ, ಪಕೀರಪ್ಪ ಈ ರೀತಿ ಶಿವಣ್ಣನ ನೋಡಲು ಬರುತ್ತಿರುವುದು ಇದು ಮೂರನೇ ಬಾರಿ. ಮೊದಲ ಬಾರಿ ಸೈಕಲ್ ನಲ್ಲಿ ಬಂದ ಈತ ಕಳೆದ ವರ್ಷ ಕಾಲು ನಡಿಗೆಯಲ್ಲಿ ಬಂದಿದ್ದನಂತೆ. ಇನ್ನು ಪ್ರತಿ ವರ್ಷ ಹೀಗೆ ಬರುವಾಗ ಹುಬ್ಬಳಿ ಮಠದಲ್ಲಿ ಹಾಗೂ ತುಮಕೂರು ಸಿದ್ಧಗಂಗಾ ಮಠದಲ್ಲಿ ಶಿವಣ್ಣ ಹೆಸರಿನಲ್ಲಿ ಪೂಜೆ ಮಾಡಿಸಿಕೊಂಡು ಬರುತ್ತಾನಂತೆ.

ಸೈಕಲ್ ತುಂಬ ಶಿವಣ್ಣನ ಸಿನಿಮಾಗಳ ಹೆಸರು
ಇನ್ನು, ಪಕೀರಪ್ಪ ಮಾತ್ರವಲ್ಲ ಆತನ ಸೈಕಲ್ ಕೂಡ ತುಂಬ ವಿಶೇಷವಾಗಿದೆ. ಆತನ ಸೈಕಲ್ ತುಂಬ ಸಿನಿಮಾ ಎಲ್ಲ ಸಿನಿಮಾಗಳ ಹೆಸರುಗಳು ಇವೆ. 'ಆನಂದ್' ಚಿತ್ರದಿಂದ 'ದಿ ವಿಲನ್' ಚಿತ್ರದ ವರೆಗಿನ ಸಿನಿಮಾಗಳ ಹೆಸರು ಸೈಕಲ್ ಮೇಲೆ ಮೂಡಿವೆ.

ಎದೆ ಮೇಲೆ ಮೂಡಿದೆ ಶಿವಣ್ಣನ ಹಜ್ಜೆ
ನಿನ್ನೆ ರಾತ್ರಿ 1 ಗಂಟೆಗೆ ಬೆಂಗಳೂರು ತಲುಪಿದ ಈ ಹುಡುಗ ಬೆಳಗಿನ ಜಾವ 3 ಗಂಟೆಗೆ ತನಗೆ ಪರಿಚಯ ಇರುವವರಿಂದ ಹಜ್ಜೆ ಹಾಕಿಸಿಕೊಂಡಿದ್ದಾರನೆ. ತನ್ನ ಎದೆ ಮೇಲೆ ಶಿವಣ್ಣನ ಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡ ಬಳಿಕವೇ ಶಿವರಾಜ್ ಕುಮಾರ್ ಮನೆ ಮುಂದೆ ಈತ ಬಂದು ನಿಂತಿದ್ದಾನೆ.

ಅಭಿಮಾನಿ ಕಂಡು ಕರಗಿದ ಶಿವಣ್ಣನ ಮನ
ಅಭಿಮಾನಿಯ ಈ ಪ್ರೀತಿ ನೋಡಿ ಶಿವಣ್ಣನ ಮನ ಕರಗಿದೆ. ಶಿವಣ್ಣ ಈತನಿಗೆ ಸಹಾಯ ಮಾಡುವ ಭರವಸೆಯನ್ನು ಈಗಾಗಲೇ ನೀಡಿದ್ದಾರಂತೆ. ಇತ್ತ ಪಕೀರಪ್ಪ ಕೂಡ ''ನನ್ನ ಜೀವ ಮತ್ತು ಜೀವನ ಎರಡು ಅಣ್ಣನೇ, ಶಿವಣ್ಣ ಬಿಟ್ಟರೆ ಬೇರೆ ದಾರಿ ಇಲ್ಲ.'' ಎಂದು ಶಿವನ ಆರಾಧನೆ ಮಾಡುತ್ತಿದ್ದಾನೆ.


Click it and Unblock the Notifications











