ಟ್ರೈಲರ್ ತೋರ್ಸಿತೀನಿ ಎಂದಿದ್ದ ಆಮೇಲೆ ಸಿಗಲೇ ಇಲ್ಲ: ಶಿವಣ್ಣ ಭಾವುಕ
'ಪುನೀತ ಪರ್ವ' ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ವೇದಿಕೆ ಮೇಲೆ ಸಹೋದರ ಪುನೀತ್ ರಾಜ್ಕುಮಾರ್ ಹಾಡುಗಳಿಗೆ ಡ್ಯಾನ್ಸ್ ಮಾಡುವ ಜೊತೆಗೆ ಅಪ್ಪು ನೆನಪನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡರು.
ಎನರ್ಜಿ ಭರಿತವಾಗಿ ಡ್ಯಾನ್ಸ್ ಮಾಡಿದ ಶಿವಣ್ಣ, ವೇದಿಕೆ ಮೇಲೆ ಮಾತನಾಡುತ್ತಾ, ಮೊದಲಿಗೆ ನೆರಿದಿದ್ದ ಎಲ್ಲರಿಗೂ, ಆಗಮಿಸಿದ ಅತಿಥಿಗಳಿಗೂ ಮಾಧ್ಯಮಗಳಿಗೆ ಧನ್ಯವಾದ ಹೇಳಿದರು.
ಮೊದಲಿಗೆ 'ಗಂಧದ ಗುಡಿ' ಸಿನಿಮಾವನ್ನು ಅಪ್ಪಾಜಿಯವರು ಮಾಡಿದರು. ವಿಷ್ಣುವರ್ಧನ್ ಅವರು ಅಪ್ಪಾಜಿಯವರು ಒಟ್ಟಿಗೆ ನಟಿಸಿದ ಸಿನಿಮಾ ಅದು. ಆ ಸಿನಿಮಾವನ್ನು ಎಂದಿಗೂ ಮರೆಯುವಂತಿಲ್ಲ. ಆ ನಂತರ 'ಗಂಧದ ಗುಡಿ 2' ಸಿನಿಮಾದಲ್ಲಿ ನಟಿಸುವ ಭಾಗ್ಯ ನನಗೆ ದೊರಕಿತು. ಆ ಸಿನಿಮಾದ ಕೊನೆಯಲ್ಲಿ ಅಪ್ಪಾಜಿ ನನ್ನನ್ನು ಅಪ್ಪಿಕೊಳ್ಳುವ ದೃಶ್ಯ ಇದೆ. ಆ ಸಿನಿಮಾದಲ್ಲಿ ನಾನು ಅವರ ಮಗನಾಗಿಯೇ ನಟಿಸಿದ್ದೆ'' ಎಂದು ನೆನಪು ಮಾಡಿಕೊಂಡರು.

ಈಗ ಅಪ್ಪು 'ಗಂಧದ ಗುಡಿ' ಮಾಡಿದ್ದಾನೆ. ನಮ್ಮ ಕುಟುಂಬಕ್ಕೆ 'ಗಂಧದ ಗುಡಿ' ಆಗಿಬಂದಿದೆ. ಅದು ನಮ್ಮ ಪುಣ್ಯ. ಪ್ರಕೃತಿಯ ಬಗ್ಗೆ ಅಪ್ಪುಗೆ ಅಪಾರ ಪ್ರೀತಿ ಇತ್ತು, ಯಾವಾಗ ಸಿಕ್ಕಾಗಲೂ ಶಿವಣ್ಣ ನಾನು ಅಲ್ಲಿಗೆ ಹೋಗಿದ್ದೆ, ಇಲ್ಲಿಗೆ ಹೋಗಿದ್ದೆ, ಅದು ಮಾಡಿದೆ ಹೀಗೆ ಏನೇನೋ ಹೇಳುತ್ತಿದ್ದ, ಈ ರೀತಿಯ ಸಾಹಸಗಳೆಂದರೆ ಅವನಿಗೆ ಬಹಳ ಇಷ್ಟ'' ಎಂದು ನೆನಪು ಮಾಡಿಕೊಂಡರು.
'ಸಲಗ' ಸಿನಿಮಾದ ಪ್ರೀಮಿಯರ್ ಶೋನಲ್ಲಿ ಸಿಕ್ಕಾಗ 'ನೆಕ್ಸ್ಟ್ ಭೇಟಿಯಾದಾಗ 'ಗಂಧದ ಗುಡಿ' ಟ್ರೈಲರ್ ತೋರಿಸುತ್ತೀನಿ ಎಂದಿದ್ದ ಆದರೆ ನಾವು ಮತ್ತೆ ಭೇಟಿ ಆಗಲೇ ಇಲ್ಲ. ಆದರೆ ನಾನು ಅವನನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಅವನು ನನ್ನಿಂದ ದೂರ ಆಗಿದ್ದರೆ ತಾನೇ ಮಿಸ್ ಮಾಡಿಕೊಳ್ಳುವುದು'' ಎಂದರು.
ಬಳಿಕ ನಿರೂಪಕಿ ಅನುಶ್ರೀಯ ಮಾತಿಗೆ ಪ್ರತಿಕ್ರಿಯಿಸುತ್ತಾ, ''ಎಲ್ಲರೂ ನನ್ನನ್ನು ಒಳ್ಳೆಯ ಡ್ಯಾನ್ಸರ್ ಎನ್ನುತ್ತಾರೆ ಆದರೆ ನಿಜವಾಗಿಯೂ ಉತ್ತಮವಾದ ಡ್ಯಾನ್ಸರ್ ಎಂದರೆ ಅಪ್ಪು. ನಾನು ಹತ್ತನೆ ತರಗತಿ ಓದಬೇಕಾದರೇನೆ ಅವನು ಮೈಕಲ್ ಜಾಕ್ಸನ್ ವಿಡಿಯೋ ನೋಡಿ ಅದರಂತೆ ಡ್ಯಾನ್ಸ್ ಮಾಡುತ್ತಿದ್ದ. ಆವಾಗ ನನಗೆ ಆಶ್ಚರ್ಯ ಆಗೋದು, ಏನಪ್ಪಾ ಇವನ ಟ್ಯಾಲೆಂಟ್ ಎಂದುಕೊಳ್ಳುತ್ತಿದ್ದೆ'' ಎಂದರು.
'ಅವನು ಹೇಳ್ತಾನೆ, ನಾನು ಶಿವಣ್ಣನ ಫ್ಯಾನ್ ಎಂದು ಆದರೆ ನಿಜವಾಗಿಯೂ ನಾನು ಅವನ ಫ್ಯಾನ್, ಅದೆಷ್ಟು ಚೆನ್ನಾಗಿ ಡ್ಯಾನ್ಸ್ ಮಾಡುತ್ತಿದ್ದ ಅವನು, ಅವನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ಮಾತು ಮುಗಿಯುವುದೇ ಇಲ್ಲ'' ಎಂದರು.
''ಪ್ರಕೃತಿ ಬಗ್ಗೆ ಅಪ್ಪುಗೆ ಅಪಾರ ಪ್ರೇಮ ಇತ್ತು. ಅದು ಎಲ್ಲರಿಗೂ ಇರಬೇಕು. ಈಗ ನೋಡಿ ಎಲ್ಲೆಲ್ಲೋ ಅಕಾಲಿಕ ಮಳೆಗಳೆಲ್ಲ ಆಗುತ್ತಿವೆ. ಇದಕ್ಕೆಲ್ಲ ಪ್ರಕೃತಿಯನ್ನು ನಾವು ಹಾಳುಗೆಡವುತ್ತಿರುವುದೇ ಕಾರಣ. 'ಗಂಧದ ಗುಡಿ' ಮೇಕಿಂಗ್ನಲ್ಲಿ ಪುನೀತ್ ಜೊತೆಗಿದ್ದ ಅಮೋಘವರ್ಷಗೂ ಧನ್ಯವಾದ ಅವರಿಗೆ ಒಳ್ಳೆಯದಾಗಲಿ'' ಎಂದು ಮಾತು ಮುಗಿಸಿದರು ಶಿವಣ್ಣ.


Click it and Unblock the Notifications











