ಜೀವ ಇರೋವರೆಗೆ ನೋವು ಕಾಡಲಿದೆ: ಶಿವರಾಜ್ ಕುಮಾರ್
ಪುನೀತ್ ರಾಜ್ಕುಮಾರ್ ನಿಧನರಾಗಿ ಇಂದಿನ 11 ದಿನವಾಗಿದ್ದು, ಪುನೀತ್ ಕುಟುಂಬಸ್ಥರು, ಅಣ್ಣಾವ್ರ ಕುಟುಂಬದ ಸದಸ್ಯರು ಕಂಠೀರ ಸ್ಟುಡಿಯೋದ ಪುನೀತ್ ಸಮಾಧಿ ಬಳಿ 11 ನೇ ದಿನದ ಕಾರ್ಯವನ್ನು ನೆರವೇರಿಸಿದರು.
ಶಿವರಾಜ್ ಕುಮಾರ್ ಕುಟುಂಬ, ರಾಘವೇಂದ್ರ ರಾಜ್ಕುಮಾರ್ ಕುಟುಂಬ, ಶ್ರೀಮುರಳಿ, ವಿಜಯರಾಘವೇಂದ್ರ ರಾಜ್ಕುಮಾರ್ ಕುಟುಂಬ, ಚಿನ್ನೇಗೌಡರ ಕುಟುಂಬ, ಬಂಗಾರಪ್ಪ ಕುಟುಂಬದ ಕೆಲ ಸದಸ್ಯರು, ಪುನೀತ್ ರಾಜ್ಕುಮಾರ್ ಆಪ್ತೇಷ್ಟರು, ಉದ್ಯಮದ ಗಣ್ಯರು ಇನ್ನೂ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪುನೀತ್ ನಿಧನರಾಗಿ 11 ದಿನವಾದರೂ ಕುಟುಂಬದವರಲ್ಲಿ ನೋವಿನ ಛಾಯೆ ತುಸುವೂ ಕಡಿಮೆಯಾದಂತೆ ಕಾಣಲಿಲ್ಲ.
ಕಾರ್ಯ ಮಾಡುವ ವೇಳೆ ಪುನೀತ್ ರಾಜ್ಕುಮಾರ್ ಮಕ್ಕಳು, ಶಿವರಾಜ್ ಕುಮಾರ್ ಮಕ್ಕಳು ಇನ್ನೂ ಹಲವರು ಕಣ್ಣೀರು ಸುರಿಸಿದರು. ಕಾರ್ಯ ಮುಗಿದ ಬಳಿಕ ಶಿವರಾಜ್ ಕುಮಾರ್ ಮಾಧ್ಯಮಗಳೊಟ್ಟಿಗೆ ಮಾತನಾಡಿದರು.
''ಜೀವ ಇರುವವರೆಗೆ ಈ ನೋವು ಕಾಡಲಿದೆ. ಈ ಕಾರ್ಯಗಳನ್ನೆಲ್ಲ ಅವನಿಗಾಗಿ ಮಾಡುವ ಸ್ಥಿತಿ ಬಂತಲ್ಲ ಎಂಬುದನ್ನೇ ನಂಬಲು ಸಾಧ್ಯವಾಗುತ್ತಿಲ್ಲ. ಇಂದು ಬೆಳಿಗ್ಗೆ ಸಹ ಮಾತನಾಡಿಕೊಂಡಿವು, ಏನಿದು? ಹೀಗೆ ಆಗಿಬಿಟ್ಟಿದೆಯಲ್ಲ. ಇದನ್ನೆಲ್ಲ ನಾವು ಅವನಿಗಾಗಿ ಮಾಡುವ ದಿನ ಬಂತಲ್ಲ ಎಂದುಕೊಂಡೆವು ಆದರೆ ಏನೂ ಮಾಡಲು ಆಗುವುದಿಲ್ಲ. ನೋವು ಸಾಕಷ್ಟಿದೆ, ಶಾಸ್ತ್ರದ ಪ್ರಕಾರ ಮಾಡಲೇ ಬೇಕು ಹಾಗಾಗಿ ಅದರ ಜೊತೆಗೇ ಮಾಡುತ್ತಿದ್ದೇವೆ'' ಎಂದರು.

ನನ್ನ ಬಲಗೈ ಕಳೆದುಕೊಂಡಂತೆ ಭಾಸವಾಗುತ್ತಿದೆ: ಶಿವಣ್ಣ
''ಅವನಿಲ್ಲ ಎಂಬುದರ ಬಗ್ಗೆ ಮಾತನಾಡಲು ಸಹ ಆಗುತ್ತಿಲ್ಲ ಅಷ್ಟು ನೋವಿದೆ. ನನ್ನ ತಮ್ಮನಂತಿರಲಿಲ್ಲ, ನನ್ನ ಮಗನಂತಿದ್ದ ಅವನು. ನನಗಿಂತಲೂ ಹದಿಮೂರು ವರ್ಷ ಚಿಕ್ಕವನಾಗಿದ್ದ, ನನ್ನ ಮಗನಂತೆ ಎತ್ತಿ ಆಡಿಸಿದ್ದೆ. ಅವನು ಹೋಗಿರುವುದು ನನಗೆ ಬಲಗೈ ಹೋದಂತೆ ಅನ್ನಿಸುತ್ತಿದೆ. ಎಷ್ಟು ಹೇಳಿದರು ಆದ ನೋವನ್ನು ವ್ಯಕ್ತಪಡಿಸಲು ಆಗುವುದಿಲ್ಲ. ಅಳಬಹುದು, ದುಃಖ ತೋಡಿಕೊಳ್ಳಬಹುದು ಆದರೆ ಈ ನೋವು ನನ್ನ ಜೀವ ಇರುವವರೆಗೆ ಜೊತೆಯಾಗಿ ಇರಲಿದೆ'' ಎಂದಿದ್ದಾರೆ ಶಿವರಾಜ್ ಕುಮಾರ್.

ನೊಂದಿದ್ದೇವೆ, ನೋವು ಕೊಡಬೇಡಿ: ಶಿವಣ್ಣ
''ಚಿಕ್ಕ ವಯಸ್ಸಿನಿಂದಲೂ ನಾವು ಅವನನ್ನು ಆರಾಧಿಸಿದ್ದೇವೆ. ಅವನ ಬೆಳವಣಿಗೆ ನೋಡಿ ಖುಷಿಪಟ್ಟವರು ನಾವು. ನಮಗೆ ಇಷ್ಟು ನೋವಾಗಿದೆ ಎಂದಮೇಲೆ ಅಭಿಮಾನಿಗಳಿಗೆ ಇನ್ನೂ ಹೆಚ್ಚಿನ ನೋವಾಗಿದೆ. ಅಪ್ಪು ಸಂತೋಶವಾಗಿರಬೇಕು ಎಂದರೆ ಅಭಿಮಾನಿಗಳು ಪ್ರಾಣ ಕಳೆದುಕೊಳ್ಳುವ ಕೆಟ್ಟ ನಿರ್ಧಾರ ಮಾಡಬಾರದು. ಇದರಿಂದ ನಿಮ್ಮ ಕುಟುಂಬ ಸದಸ್ಯರಿಗೆ ಸಮಸ್ಯೆ ಆಗುತ್ತದೆ. ಅಪ್ಪು ಹೆಸರನ್ನು ಉಳಿಸುವಂಥಹಾ ಕಾರ್ಯವನ್ನು ಮಾಡಿ, ಅವನು ಮಾಡುತ್ತಿದ್ದ ಕೆಲಸಗಳನ್ನು ಮುಂದುವರೆಸು ಕೆಲಸ ಮಾಡಿ. ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ನಾವು ಈಗಾಗಲೇ ನೋವಿನಲ್ಲಿ ಇದ್ದೇವೆ. ಮತ್ತೆ ನೋವು ಕೊಡಬೇಡಿ. ಕೈ ಕೈಮುಗಿದು ಬೇಡಿಕೊಂಡರು.

ಅವನು ತಂದೆಗೆ ತಕ್ಕ ಮಗ: ಶಿವಣ್ಣ
''ಅವನು ತಂದೆಗೆ ತಕ್ಕ ಮಗ, ಅವನಿಗಾಗಿ ದೇಶದ ಜನರು ಇಂದು ದುಃಖ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೋಂದು ಜನರನ್ನು ಅವನು ಸಂಪಾದನೆ ಮಾಡಿದ್ದಾನೆ. ಅದು ಅವನ ಒಳ್ಳೆಯತನ ಮತ್ತು ಪ್ರತಿಭೆ ಅವನು ಅಪ್ಪನಂತೆ ಇದ್ದ. ಕೆಲವು ದಿನಗಳ ಹಿಂದಷ್ಟೆ 'ಸಲಗ' ಸಿನಿಮಾದ ಕಾರ್ಯಕ್ರಮದಲ್ಲಿ ಅಣ್ಣನ ಸಿನಿಮಾ ನಿರ್ದೇಶನ ಮಾಡುತ್ತೀನಿ ಎಂದಿದ್ದ. ಅಲ್ಲೇ ವೇದಿಕೆ ಮೇಲೆ ತಾಲೀಮು ಸಹ ಮಾಡಿದೆವು. ಅದನ್ನು ನೆನಪಿಸಿಕೊಂಡಾಗಲೆಲ್ಲ ಮನಸ್ಸಿಗೆ ಬಹಳ ನೋವಾಗುತ್ತದೆ. ಕಳೆದ ಒಂದು ತಿಂಗಳಿನಿಂದಲೂ ಬಹಳ ಕಾರ್ಯಕ್ರಮಗಳನ್ನು ನಾವು ಜೊತೆಯಾಗಿ ಅಟೆಂಡ್ ಮಾಡಿದೆವು. ಈ ವಿಷಯಗಳನ್ನೆಲ್ಲ ಮಾತನಾಡಲು ಸಹ ನನಗೆ ಕಷ್ಟವಾಗುತ್ತಿದೆ'' ಎಂದರು ಶಿವರಾಜ್ ಕುಮಾರ್.

ಪುನೀತ್ಗೆ ಪದ್ಮಶ್ರೀ: ಶಿವಣ್ಣ ಹೇಳಿದ್ದು ಹೀಗೆ
ಪುನೀತ್ಗೆ ಪದ್ಮಶ್ರೀ ಕೊಡಬೇಕೆಂಬ ಒತ್ತಾಯ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ''ಅವನಿಗೆ ಯಾವ ಪ್ರಶಸ್ತಿ ಕೊಟ್ಟರು ಕಡಿಮೆಯೇ ಅವನು ಅಮರಶ್ರೀ. ಪದ್ಮಶ್ರೀ, ಪದ್ಮ ಭೂಷಣ ಅವೆಲ್ಲ ಕೇವಲ ಹೆಸರುಗಳಷ್ಟೆ. ಅಪ್ಪುವಿನದ್ದು ಅವುಗಳನ್ನೆಲ್ಲ ಮೀರಿದ ವ್ಯಕ್ತಿತ್ವ'' ಎಂದರು. ''ಇಂದು ಮನೆಯಲ್ಲಿ ಕೆಲವು ಪೂಜೆಗಳನ್ನು ಮಾಡುತ್ತೇವೆ, ನಾಳೆ ತ್ರಿಪುರ ವಾಸಿನಿಯಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಇಟ್ಟುಕೊಂಡಿದ್ದೇವೆ'' ಎಂದರು.


Click it and Unblock the Notifications











