ಯಡಿಯೂರಪ್ಪ-ಶಿವರಾಜ್ ಕುಮಾರ್ ಭೇಟಿಗೆ ಮುಹೂರ್ತ ನಿಗದಿ: ಚಿತ್ರರಂಗದ ಬಗ್ಗೆ ಮಾತು
ಚಂದನವನದ ನಾಅಯಕತ್ವವನ್ನು ಹೊತ್ತುಕೊಂಡಿರುವ ಶಿವರಾಜ್ ಕುಮಾರ್ ಮೇಲೆ ಅತಿಯಾದ ಜವಾಬ್ದಾರಿ ಇದೆ. ಅದರಲ್ಲೂ ಈ ಕೊರೊನಾ ಸಂಕಷ್ಟದಲ್ಲಿ ಅವರ ಜವಾಬ್ದಾರಿ ದ್ವಿಗುಣವಾಗಿದೆ.
ಚಿತ್ರರಂಗದ ಗಣ್ಯರೆಲ್ಲಾ ಸೇರಿ ಶಿವರಾಜ್ ಕುಮಾರ್ ಅವರಿಗೆ ಸಿನಿಮಾರಂಗದ ನಾಯಕತ್ವವನ್ನು ಒಕ್ಕೂರಲಿನಿಂದ ನೀಡಿದ್ದಾರೆ. ಕೊರೊನಾ ಕಾಲದಲ್ಲಿ ಸಂಕಷ್ಟದಲ್ಲಿರುವ ಚಿತ್ರರಂಗ ಶಿವಣ್ಣನ ನಾಯಕತ್ವದಲ್ಲಿ ಸಂಕಷ್ಟಗಳನ್ನು ಎದುರಿಸುವ ನಿರ್ಣಯ ಮಾಡಿದೆ.
ನಾಯಕತ್ವ ವಹಿಸಿಕೊಂಡ ಎರಡೇ ದಿನಕ್ಕೆ ಶಿವಣ್ಣ ಅವರು ಚಿತ್ರರಂಗದ ಟಾಪ್ ನಾಯಕ ನಟರನ್ನು ಮನೆಗೆ ಕರೆಸಿಕೊಂಡಿದ್ದರು. ಆ ಸಭೆಗೆ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರನ್ನು ಆಹ್ವಾನಿಸಿ ಚರ್ಚಿಸಿದರು. ಇದೀಗ ಸಿಎಂ ಅವರನ್ನು ಸಹ ಭೇಟಿ ಮಾಡಲು ನಿಶ್ಚಯಿಸಿದ್ದಾರೆ.

ಹಲವು ವಿಷಯಗಳ ಬಗ್ಗೆ ಚರ್ಚೆ
ಚಿತ್ರರಂಗದ ಪ್ರಸ್ತುತ ಸ್ಥಿತಿ, ಸರ್ಕಾರದಿಂದ ಚಿತ್ರೋದ್ಯಮ ನಿರೀಕ್ಷಿಸುತ್ತಿರುವ ಸಹಾಯ, ಚಿತ್ರೋದ್ಯಮದ ಭವಿಷ್ಯ. ಸರ್ಕಾರ ಮತ್ತು ಚಿತ್ರೋದ್ಯಮದ ನಡುವೆ ಸಮನ್ವಯ ಹೀಗೆ ಹಲವು ವಿಷಯಗಳ ಬಗ್ಗೆ ಶಿವರಾಜ್ ಕುಮಾರ್ ಅವರು ಸಿಎಂ ಯಡಿಯೂರಪ್ಪ ಬಳಿ ಚರ್ಚಿಸಲಿದ್ದಾರೆ.

ಯಡಿಯೂರಪ್ಪ-ಶಿವರಾಜ್ ಕುಮಾರ್ ಭೇಟಿ
ಶಿವರಾಜ್ ಕುಮಾರ್ ಅವರು ಇನ್ನೂ ಕೆಲವು ಚಿತ್ರರಂಗದ ಪ್ರಮುಖರೊಂದಿಗೆ ಸಿಎಂ ಯಡಿಯೂರಪ್ಪ ಅವರನ್ನು ಮಂಗಳವಾರ ಸಿಎಂ ಅವರ ಅಧಿಕೃತ ಕಚೇರಿಯಲ್ಲಿ ಭೇಟಿ ಮಾಡಲಿದ್ದಾರೆ. ಮೊದಲಿಗೆ ಸೋಮವಾರ ನಿಗದಿಯಾಗಿದ್ದ ಈ ಸಭೆ ನಂತರ ಮಂಗಳವಾರಕ್ಕೆ ಮುಂದಕ್ಕೆ ಹೋಗಿದೆ.

ಚಿತ್ರೋದ್ಯಮಕ್ಕೆ ಪ್ಯಾಕೇಜ್ ನೀಡಲು ಮನವಿ
ಚಿತ್ರೋಮದ್ಯಮಕ್ಕೆ ಪ್ಯಾಕೇಜ್ ಅದರಲ್ಲಿಯೂ ಚಿತ್ರೋದ್ಯಮದಲ್ಲಿ ದುಡಿಯುತ್ತಿರುವ ಕಾರ್ಮಿಕ ವರ್ಗಕ್ಕೆ ಸಹಾಯವನ್ನು ಶಿವರಾಜ್ ಕುಮಾರ್ ಅವರು ಯಡಿಯೂರಪ್ಪ ಅವರ ಬಳಿ ಕೇಳಲಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಕುಮಾರಸ್ವಾಮಿ ಅವಧಿಯಲ್ಲಿ ಘೋಷಿಸಲಾಗಿದ್ದ ಫಿಲಂ ಸಿಟಿ ಕುರಿತು ಸಹ ಚರ್ಚೆ ಮಾಡುವ ಸಾಧ್ಯತೆ ಇದೆ.


Click it and Unblock the Notifications











