ಕಾಂಗರೂ ನಾಡಲ್ಲಿ 'ಕನ್ನಡದ ಕಹಳೆ' ಮೊಳಗಿಸಲಿದ್ದಾರೆ ಸೆಂಚುರಿ ಸ್ಟಾರ್
Recommended Video

'ಎಲ್ಲಾದರು ಇರು ಎಂತಾದರು ಎಂದೆಂದಿಗೂ ನೀ ಕನ್ನಡವಾಗಿರೋ ಕನ್ನಡವೇ ಸತ್ಯ.. ಕನ್ನಡವೇ ನಿತ್ಯ... ಎಂದ ರಾಷ್ಟ್ರಕವಿ ಕುವೆಂಪು ಅವರ ನುಡಿಮುತ್ತಿನಂತೆ, ಇಂದು ಕನ್ನಡಿಗರು ವಿಶ್ವದಾದ್ಯಂತ ಕರುನಾಡಿನ ಕಂಪನ್ನ ಪಸರಿಸುತ್ತಿದ್ದಾರೆ.
ಅದ್ರಂತೆ, ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿ ನೆಲೆಸಿರುವಂತಹ ಕನ್ನಡಿಗರು 'ಮೆಲ್ಬರ್ನ್ ಕನ್ನಡ ಸಂಘ' ಎಂಬ ಸಂಸ್ಥೆ ಕಟ್ಟಿಕೊಂಡು ಸುಮಾರು 32ವರ್ಷಗಳಿಂದ ಕಾಂಗರೋ ನಾಡಲ್ಲಿ ಕನ್ನಡಾಭಿಮಾನ ಮೆರೆಯುತ್ತಿದ್ದಾರೆ. ಇದೀಗ, ಮೆಲ್ಬರ್ನ್ ಕನ್ನಡ ಸಂಘ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅಲ್ಲೊಂದು ಕನ್ನಡ ಭವನವನ್ನ ನಿರ್ಮಾಣ ಮಾಡೋದಕ್ಕೆ ಚಾಲನೆ ಕೊಡ್ತಿದೆ.
ವಿಶೇಷ ಅಂದ್ರೆ, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಡಾ. ಶಿವರಾಜ್ ಕುಮಾರ್ ಅವರು ಆಗಮಿಸುತ್ತಿದ್ದು, ಕನ್ನಡ ಭವನ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ. ನವೆಂಬರ್ 10ನೇ ತಾರೀಖು ಮೆಲ್ಬರ್ನ್ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ವಿಜೃಂಭಣೆಯಿಂದ ನೆರವೇರಲಿದ್ದು, ಅದೇ ದಿನ ಕನ್ನಡ ಭವನಕ್ಕೆ ನಿರ್ಮಾಣ ಕಾರ್ಯ ಆರಂಭವಾಗಲಿದೆ.

ಪ್ರಸ್ತುತ ಸಂಘದ ಅಧ್ಯಕ್ಷರಾಗಿರುವ ಶ್ರೀ ಚಂದ್ರ ಬೆಂಗಳೂರು ಅವರು ಈ ಕಾರ್ಯಕ್ರಮದ ಸೂತ್ರಧಾರ. ಮೂಲತಃ ಐಟಿ ಉದ್ಯಮದಲ್ಲಿರೋ ಇವ್ರು, ಹವ್ಯಾಸಿ ಅಧ್ಯಪಕರಾಗಿ ಮೆಲ್ಬರ್ನ್ ಕನ್ನಡ ಶಾಲೆಯಲ್ಲಿ ಕನ್ನಡ ಪಾಠವನ್ನ ಮಾಡಿದ ಮೊದಲ ಮೇಷ್ಟ್ರು ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ವಿಕ್ಟೋರಿಯನ್ ಸರ್ಕಾರದ ಸಹಕಾರದೊಂದಿಗೆ ಮೆಲ್ಬರ್ನ್ನಲ್ಲಿ ಕನ್ನಡ ಭವನ ಯೋಜನೆಗೆ ಚಾಲನೆ ಕೊಡ್ತಿರೋ ಇವ್ರ ಕನ್ನಡ ಸಂಘದ ಜೊತೆಗೆ ಬೆಂಗಳೂರಿನ ಉದ್ಯಮಿ ಸಾಯಿ ಅಶೋಕ್ ಅವರು ಈ ಕಾರ್ಯಕ್ರಮವನ್ನ ಆಯೋಜಿಸುತ್ತಿದ್ದಾರೆ. ಇವರಿಗೆ ಮೆಲ್ಬರ್ನ್ ಕನ್ನಡ ಸಂಘದ ಸದಸ್ಯರು, ಪದಾಧಿಕಾರಿಗಳು ಸಾಥ್ ನೀಡಿದ್ದಾರೆ.

ಇನ್ನುಳಿದಂತೆ ಶಿವಣ್ಣನೊಟ್ಟಿಗೆ, ಸಂಗೀತಗಾರರು, ಗಾಯಕರು, ಹಾಸ್ಯ ಕಲಾವಿದರು ಸೇರಿದಂತೆ, ನಾಡಿನ ಹಲವರೂ ಕಲಾವಿದರು ತಮ್ಮ ಕಲೆಗಳನ್ನ ಪ್ರದರ್ಶಿಸಲಿದ್ದಾರೆ. ಇವರೊಟ್ಟಿಗೆ ಮೆಲ್ಬರ್ನ್ನಲ್ಲಿರುವ ಕನ್ನಡಿಗರು ಕೂಡ ತಮ್ಮ ಕಲೆಗಳನ್ನ ಪ್ರದರ್ಶಿಸಲಿದ್ದಾರೆ. ಒಟ್ಟಾರೆ ನವೆಂಬರ್ 10ರಂದು ಕಾಂಗರೂ ನಾಡಿನಲ್ಲಿ ಕನ್ನಡದ ಕಹಳೆ ಮೊಳಗಲಿದ್ದು, ಇಡೀ ಜಗತ್ತಿನಲ್ಲಿರುವಂತಹ ಅಷ್ಟು ಕನ್ನಡಿಗರು ಹೆಮ್ಮೆ ಪಡುವಂತಹ ಮಹತ್ತರ ಕಾರ್ಯಕ್ಕೆ ಚಾಲನೆಯನ್ನೂ ಕೊಡಲಾಗ್ತಿದೆ.

ಕನ್ನಡ ಸಂಘದ ಬಗ್ಗೆ
35 ವರ್ಷಗಳಿಂದ ಕನ್ನಡ ಕುರಿತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಾಡುವ ಮೂಲಕ ಕನ್ನಡದ ಕಂಪು ಹೆಚ್ಚಿಸಿದ್ದಾರೆ. ಮೆಲ್ಬರ್ನ್ನಲ್ಲಿ ಕನ್ನಡ ಶಾಲೆಯನ್ನ ತೆರೆದಿದ್ದು, ಇವರೆಗೂ ಅಲ್ಲಿ ಸುಮಾರು 75ಕ್ಕೂ ಹೆಚ್ಚು ಮಕ್ಕಳು ಕನ್ನಡವನ್ನ ಕಲಿತಿದ್ದು, ಈಗಲೂ ಕಲಿಯುತ್ತಿದ್ದಾರೆ. ಅಷ್ಟೇ ಅಲ್ಲ ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಪುಸ್ತಕಗಳ ಗ್ರಂಥಾಲಯ ಕೂಡ ಇದೆ. 32ವರ್ಷಗಳ ಅವಧಿಯಲ್ಲಿ ಕರುನಾಡಿನಿಂದ ಅನೇಕ ಕಲಾವಿದ್ರು, ಸಾಹಿತಿಗಳು, ನಾಟಕಕಾರರು ಸೇರಿದಂತೆ, ನಾಡಿನ ಜನಪ್ರಿಯರೆಲ್ಲಾ ಮೆಲ್ಬರ್ನ್ ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.


Click it and Unblock the Notifications











