ಡಾ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ಸಾಥ್ ನೀಡಿದ ಶಿವಣ್ಣ
ಡಾ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ಇಂದು ಅಧಿಕೃತವಾಗಿ ಆರಂಭವಾಗಿದೆ. ಕನ್ನಡ ನಟ ಕಿಚ್ಚ ಸುದೀಪ್ ಅವರು ಈ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಡಾ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ನಡೆಯಲಿದ್ದು, ವಿವಿಧ ಬಗೆಯ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ.
ಸಾಹಸ ಸಿಂಹ ವಿಷ್ಣುದಾದ ಅವರ ನೆನಪಿನಾರ್ಥ ನಡೆಯುತ್ತಿರುವ ಈ ಉತ್ಸವಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶುಭಕೋರಿದ್ದಾರೆ. 'ಡಾ ವಿಷ್ಣು ಸೇನಾ ಸಮಿತಿ'ಯ ಸಾರಥ್ಯದಲ್ಲಿ ಹಮ್ಮಿಕೊಳ್ಳಲಾಗಿರುವ ಈ ಉತ್ಸವಕ್ಕೆ ಶಿವಣ್ಣ ಸಂಪೂರ್ಣ ಬೆಂಬಲ ನೀಡಿದ್ದು, ವಿಡಿಯೋ ಮೂಲಕ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ.
''ಒಳ್ಳೆಯ ಕಾರ್ಯಕ್ರಮ. ಕಳೆದ ಬಾರಿ ದೆಹಲಿಯಲ್ಲಿ ಮಾಡಿದ್ರು. ಈಗ ಬೆಂಗಳೂರಿನಲ್ಲಿ ಆಗ್ತಿದೆ. ಇಂತಹ ಕಾರ್ಯಕ್ರಮ ಈ ಮೇರು ನಟನಿಗೆ ಮಾಡಲೇಬೇಕು. ಈ ಉತ್ಸವವನ್ನ ನೀವೆಲ್ಲರೂ ಬಂದು ಹಾರೈಸಿ. ವಿಷ್ಣುವರ್ಧನ್ ಅವರನ್ನ ನಾವು ಯಾವತ್ತು ಮಿಸ್ ಮಾಡಿಕೊಳ್ಳುವುದಿಲ್ಲ. ಅವರು ನಮ್ಮ ಹೃದಯದಲ್ಲಿದ್ದಾರೆ'' ಎಂದು ಶಿವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.

ವಿವಿ ಪುರಂನಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಈ ಉತ್ಸವ ನಡೆಯಲಿದ್ದು, ಮೊದಲ ದಿನ ವಿಷ್ಣುವರ್ಧನ್ ಅಭಿಮಾನಿಗಳಿಂದ ಮೆರವಣಿಗೆ ಇರಲಿದೆ. ವಿಷ್ಣುವರ್ಧನ್ ಅವರ ಕುರಿತು ಮೂರು ಕೃತಿಗಳನ್ನ ಬಿಡುಗಡೆ ಮಾಡಲಾಗುವುದು. ಕಿಚ್ಚ ಸುದೀಪ್, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಕರವೇ ಅಧ್ಯಕ್ಷ ನಾರಾಯಣ ಗೌಡ, ಶಾಸಕ ಉದಯ ಗರುಡಾಚಾರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಎರಡನೇ ದಿನ ನಾಡು, ನುಡಿ ಮತ್ತು ವಿಷ್ಣುವರ್ಧನ್ ಕಾರ್ಯಕ್ರಮ ನಡೆಯಲಿದೆ. ರವಿ ವರ್ಮಾನಾ ಕುಂಚದಾ ಶೀರ್ಷಿಕೆಯಲ್ಲಿ ಚಿತ್ರಗಳಲ್ಲಿ ಅರಳಿದ ವಿಷ್ಣುವರ್ಧನ್ ವಿಶೇಷ ಕಾರ್ಯಕ್ರಮಕ್ಕೆ ಬಿ ಎಲ್ ಶಂಕರ್ ಚಾಲನೆ ನೀಡಲಿದ್ದಾರೆ.

ಮೂರನೇ ದಿನ ವಿಷ್ಣುಜಯಂತಿ ಕಾರ್ಯಕ್ರಮ. ಬೆಳಿಗ್ಗೆ 11 ಗಂಟೆಗೆ ವಿಷ್ಣು ಪುಣ್ಯಭೂಮಿ ಅಭಿಮಾನ್ ಸ್ಟುಡಿಯೋದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಸಂಜೆ ನಟಿ ವಿನಯಾ ಪ್ರಕಾಶ್ ಅವರಿಗೆ ಡಾ ವಿಷ್ಣುವರ್ಧನ್ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತೆ.


Click it and Unblock the Notifications











