ಮುಂದುವರಿದ ಶಿವಣ್ಣನ ಸಿನಿಮಾ ಪರ್ವ: ಯುವ ನಿರ್ದೇಶಕನ ಜೊತೆ 127ನೇ ಚಿತ್ರ
ಕೊರೊನಾದಿಂದ ಸ್ವಲ್ಪ ಚೇತರಿಕೆ ಕಾಣುತ್ತಿದ್ದಂತೆ ಸಿನಿಮಾ ಇಂಡಸ್ಟ್ರಿ ಮತ್ತೆ ಸಕ್ರಿಯವಾಗಿದೆ. ಈಗಾಗಲೇ ತಯಾರು ಆಗಿರುವ ಚಿತ್ರಗಳು ಚಿತ್ರಮಂದಿರಕ್ಕೆ ಬರಲು ಸಜ್ಜಾಗುತ್ತಿವೆ. ಅದರ ಜೊತೆಗೆ ಹೊಸ ಸಿನಿಮಾಗಳ ಘೋಷಣೆ, ಶೂಟಿಂಗ್ ಎಲ್ಲವೂ ಶುರು ಮಾಡಿದೆ. ಈ ನಡುವೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸತತವಾಗಿ ಸರ್ಪ್ರೈಸ್ ಕೊಡ್ತಾನೆ ಇದ್ದಾರೆ. ಇತ್ತೀಚಿಗಷ್ಟೆ ಶಿವಣ್ಣ ಅಭಿನಯದ 124ನೇ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ಈ ಸಿನಿಮಾ ಮುಹೂರ್ತ ನಡೆದು ಮೂರು ದಿನ ಆಗಿಲ್ಲ. ಅಷ್ಟರಲ್ಲೂ ಮತ್ತೆ ಎರಡು ಹೊಸ ಚಿತ್ರಗಳಿಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ.
123ನೇ ಸಿನಿಮಾ 'ಬೈರಾಗಿ' ಶೂಟಿಂಗ್ ಮಾಡುತ್ತಿರುವ ಶಿವರಾಜ್ ಕುಮಾರ್ ಈಗ 124, 125, 126, 127ನೇ ಚಿತ್ರಗಳಿಗೆ ಬುಕ್ ಆಗಿದ್ದಾರೆ. ಸ್ಕ್ರಿಪ್ಟ್, ನಿರ್ದೇಶಕ, ಶೂಟಿಂಗ್ ಪ್ಲಾನ್ ಎಲ್ಲವೂ ಮುಗಿದು ಹೋಗಿದೆ. ಅಂದ್ಹಾಗೆ, ಸೆಂಚುರಿ ಸ್ಟಾರ್ ಹೊಸ ಸಿನಿಮಾ ಯುವ ನಿರ್ದೇಶಕ ಲೋಹಿತ್ ಎಚ್ ಜೊತೆ ಮಾಡುತ್ತಿರುವುದು ವಿಶೇಷವಾಗಿ ಗಮನ ಸೆಳೆದಿದೆ.
ಈ ಹಿಂದೆ 'ಮಮ್ಮಿ ಸೇವ್ ಮಿ' ಹಾಗೂ 'ದೇವಕಿ' ಚಿತ್ರಗಳನ್ನು ನಿರ್ದೇಶಿಸಿದ ಎಚ್ ಲೋಹಿತ್ ತಮ್ಮ ಮುಂದಿನ ಚಿತ್ರವನ್ನು ಕರುನಾಡ ಚಕ್ರವರ್ತಿ ಜೊತೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಟೈಟಲ್ ಸಹ ಫಿಕ್ಸ್ ಆಗಿದ್ದು, ಪೋಸ್ಟರ್ ಬಿಡುಗಡೆಯಾಗಿದೆ. ಮುಂದೆ ಓದಿ...

'ಸತ್ಯಮಂಗಳ'ಕ್ಕೆ ಶಿವಣ್ಣ ನಾಯಕ
ಲೋಹಿತ್ ಎಚ್ ನಿರ್ದೇಶನದಲ್ಲಿ ಶಿವರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಇದು ಶಿವಣ್ಣನ 127ನೇ ಸಿನಿಮಾ. ಈ ಪ್ರಾಜೆಕ್ಟ್ಗೆ 'ಸತ್ಯಮಂಗಳ' ಎಂದು ಹೆಸರಿಡಲಾಗಿದೆ. ಆಗಸ್ಟ್ 20ರಂದು ಹ್ಯಾಟ್ರಿಕ್ ಹೀರೋ 127ನೇ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ಅಂದ್ಹಾಗೆ, ಈ ಚಿತ್ರವನ್ನು ಕೃಷ್ಣ ಸಾರ್ಥಕ್ ನಿರ್ಮಾಣ ಮಾಡುತ್ತಿದ್ದಾರೆ. ಕೃಷ್ಣ ಸಾರ್ಥಕ್ಗೆ ಶಿವಣ್ಣನ ಜೊತೆ ಎರಡನೇ ಸಿನಿಮಾ. ಅನೂಪ್ ಸೀಳಿನ್ ಸಂಗೀತ ಒದಗಿಸುತ್ತಿದ್ದಾರೆ. ಇನ್ನುಳಿದಂತೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ.

123ನೇ ಚಿತ್ರಕ್ಕೂ ಕೃಷ್ಣ ಸಾರ್ಥಕ್ ನಿರ್ಮಾಪಕ
ಈಗಾಗಲೇ ನಿರ್ಮಾಪಕ ಕೃಷ್ಣ ಸಾರ್ಥಕ್ ನಟ ಶಿವರಾಜ್ ಕುಮಾರ್ ಜೊತೆ 123ನೇ ಸಿನಿಮಾ 'ಬೈರಾಗಿ' ಮಾಡ್ತಿದ್ದಾರೆ. ತಮಿಳು ನಿರ್ದೇಶಕ ವಿಜಯ್ ಮಿಲ್ಟನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ಪ್ರಮುಖ ಪಾತ್ರದಲ್ಲಿ ಧನಂಜಯ್ ಮತ್ತು 'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ನಟಿಸುತ್ತಿದ್ದಾರೆ. ಶಿವಣ್ಣನ ಜೊತೆ ಮೊದಲ ಸಿನಿಮಾ ಮುಗಿಸುತ್ತಿದ್ದಂತೆ ಮತ್ತೊಂದು ಚಿತ್ರಕ್ಕೆ ಕಾಲ್ಶೀಟ್ ಪಡೆದುಕೊಂಡಿದ್ದಾರೆ ಕೃಷ್ಣ ಸಾರ್ಥಕ್.

ರಿಷಬ್ ಶೆಟ್ಟಿ ಜೊತೆ 126ನೇ ಸಿನಿಮಾ
ನಿನ್ನೆಯಷ್ಟೇ (ಆಗಸ್ಟ್ 19) ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಜಯಣ್ಣ ಹ್ಯಾಟ್ರಿಕ್ ಹೀರೋ ಮನೆಗೆ ಭೇಟಿ ಮಾಡಿ ಹೊಸ ಸಿನಿಮಾದ ಬಗ್ಗೆ ಮಾತುಕತೆ ನಡೆಸಿದ್ದಾರೆ. ರಿಷಬ್ ನಿರ್ದೇಶನದಲ್ಲಿ ಶಿವಣ್ಣ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇದು 126ನೇ ಸಿನಿಮಾ ಎನ್ನುವುದು ವಿಶೇಷ. ಜಯಣ್ಣ ನಿರ್ಮಾಣ ಮಾಡ್ತಿದ್ದಾರೆ. ಸದ್ಯಕ್ಕೆ ಸಿನಿಮಾ ಮಾತ್ರ ಖಚಿತವಾಗಿದೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಹೊರಬೀಳಬೇಕಿದೆ.

ರಾಮ್ ಧುಲಿಪುಡಿ ಚಿತ್ರ
ರಾಮ್ ಧುಲಿಪುಡಿ ನಿರ್ದೇಶನದಲ್ಲಿ ತಯಾರಾಗಲಿರುವ 'ನೀ ಸಿಗೋವರೆಗೂ' ಸಿನಿಮಾ 124ನೇ ಪ್ರಾಜೆಕ್ಟ್. ಈ ಚಿತ್ರ ಅದಾಗಲೇ ಶುರುವಾಗಿದೆ. ಏಪ್ರಿಲ್ವೊತ್ತಿಗೆ ತೆರೆಗೆ ತರಲು ಯೋಜಿಸಿದೆ. ಕಿಚ್ಚ ಸುದೀಪ್ ಈ ಚಿತ್ರಕ್ಕೆ ಚಾಲನೆ ಕೊಟ್ಟಿದ್ದರು. ನಟಿ ಮೆಹ್ರೀನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದಾದ ಮೇಲೆ ಹರ್ಷ ನಿರ್ದೇಶನದಲ್ಲಿ 'ವೇದ' ಸಿನಿಮಾ ಮಾಡಲಿದ್ದಾರೆ. ಇದು ಶಿವಣ್ಣನ 125ನೇ ಸಿನಿಮಾ ಆಗಲಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಸದ್ಯ ಭಜರಂಗಿ 2 ಸಿನಿಮಾ ಬಿಡುಗಡೆಯಾಗಿ ಕಾಯುತ್ತಿರುವ ಹರ್ಷ, ಆದಷ್ಟೂ ಬೇಗ ಈ ಚಿತ್ರವನ್ನು ಟೇಕ್ ಅನ್ ಮಾಡಲಿದ್ದಾರೆ ಎಂಬ ಮಾಹಿತಿ ಇದೆ.


Click it and Unblock the Notifications











