ಕನ್ನಡ ಚಿತ್ರಗಳಲ್ಲಿ ಶಿವಾಜಿ; ಅಣ್ಣಾವ್ರ ಎದುರು ಛತ್ರಪತಿಯಾಗಿ ನಟಿಸಿದ್ದು ಯಾರು?
ಛತ್ರಪತಿ ಶಿವಾಜಿ 395ನೇ ಜನ್ಮದಿನದ ಹಿನ್ನೆಲೆ ದೇಶದ ಗಣ್ಯರು ನುಡಿನಮನ ಸಲ್ಲಿಸುತ್ತಿದ್ದಾರೆ. ಮರಾಠ ಸಾಮ್ರಾಜ್ಯದ ದೊರೆ ಶಿವಾಜಿ ರಾಷ್ಟ್ರಪ್ರೇಮ, ಸ್ವಾಭಿಮಾನ, ಶೌರ್ಯ- ಪರಾಕ್ರಮಕ್ಕೆ ಹೆಸರಾಗಿದ್ದರು. ಶಿವಾಜಿ ಪುತ್ರ ಸಾಂಬಾಜಿ ಜೀವನಾಧರಿತ 'ಛಾವ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ.
ಮರಾಠ ಛತ್ರಪತಿ ಶಿವಾಜಿಯ ಕುರಿತು ಸಾಕಷ್ಟು ಸಿನಿಮಾಗಳು, ಧಾರಾವಾಹಿಗಳು ಬಂದಿವೆ. ಶತಮಾನಗಳಿಂದ ಶಿವಾಜಿಯ ಕುರಿತು ನಾಟಕಗಳನ್ನು ಮಾಡುತ್ತಾ ಬರಲಾಗುತ್ತಿದೆ. ಕೆಲ ದಿನಗಳ ಹಿಂದೆ ರಿಷಬ್ ಶೆಟ್ಟಿ ಹೀರೊ ಆಗಿ 'ದಿ ಪ್ರೈಡ್ ಆಫ್ ಭಾರತ್ - ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾ ಘೋಷಣೆ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂದೀಪ್ ಸಿಂಗ್ ಚಿತ್ರವನ್ನು ಕಟ್ಟಿಕೊಡಲು ಮುಂದಾಗಿದ್ದಾರೆ. ಕರ್ನಾಟಕಕ್ಕೆ ಶಿವಾಜಿ ಕೊಡುಗೆ ಏನು? ರಿಷಬ್ ಶೆಟ್ಟಿ ಈ ಚಿತ್ರದಲ್ಲಿ ನಟಿಸಬಾರದು ಎಂದು ಕೆಲವರು ಚಕಾರ ಎತ್ತಿದ್ದರು.

ಸದ್ಯ 'ಕಾಂತಾರ- 1' ಚಿತ್ರವನ್ನು ನಿರ್ದೇಶಿಸಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಬಳಿಕ ಶಿವಾಜಿ ಜೀವನಾಧರಿತ ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ. ತೆಲುಗು 'ಜೈ ಹನುಮಾನ್' ಚಿತ್ರವನ್ನು ಕೂಡ ಅವರು ಒಪ್ಪಿಕೊಂಡಿದ್ದಾರೆ. ಹಾಗಾಗಿ ಮೊದಲಿಗೆ ಯಾವ ಸಿನಿಮಾ ಶುರುವಾಗುತ್ತದೆ ಕಾದು ನೋಡಬೇಕಿದೆ. ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. 7 ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ನಿರ್ದೇಶಕ ಸಂದೀಪ್ ಸಿಂಗ್ ಹೇಳಿದ್ದಾರೆ. ಪ್ರೀತಂ ಸಂಗೀತ, ರವಿವರ್ಮನ್ ಛಾಯಾಗ್ರಹಣ ಚಿತ್ರಕ್ಕಿರಲಿದೆ.
ಶಿವಾಜಿ ಪಾತ್ರದಲ್ಲಿ ನಟಿಸಲು ನಟ ರಿಷಬ್ ಶೆಟ್ಟಿ ಬಹಳ ಉತ್ಸುಕರಾಗಿದ್ದಾರೆ. ಖ್ಯಾತ ವಸ್ತ್ರ ವಿನ್ಯಾಸಕ ಆಶ್ಲೇ ರೆಬೆಲ್ಲೊ ಸಂದರ್ಶನವೊಂದರಲ್ಲಿ ಮಾತನಾಡಿ ಶಿವಾಜಿ ಪಾತ್ರಕ್ಕೆ ರಿಷಬ್ ಶೆಟ್ಟಿ ಸೂಕ್ತ ಎಂದು ಹೇಳಿದ್ದಾರೆ. 'ದಿ ಪ್ರೈಡ್ ಆಫ್ ಭಾರತ್ - ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರಕ್ಕೆ ಅವರು ವಸ್ತ್ರ ವಿನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾಗಳಲ್ಲಿ ಶಿವಾಜಿ ಮಹಾರಾಜರ ಪ್ರಸ್ತಾಪ ಈ ಹಿಂದೆ ಕೂಡ ನಡೆದಿದೆ. ಡಾ. ರಾಜ್ಕುಮಾರ್ ನಟಿಸಿದ 'ಸಂತ ತುಕಾರಾಮ' ಚಿತ್ರದಲ್ಲಿ ಕೂಡ ಶಿವಾಜಿಯನ್ನು ತೋರಿಸಲಾಗಿದೆ.
ತುಕಾರಾಮನ ಶಿಷ್ಯನಾಗಿ ಶಿವಾಜಿ
ಮಹಾರಾಷ್ಟ್ರದ ಸಂತ ಪರಂಪರೆಯ ಶ್ರೇಷ್ಠ ಸಂತ ತುಕಾರಾಮರ ಜೀವನವನ್ನಾಧರಿಸಿ ಕನ್ನಡದಲ್ಲಿ ಸಿನಿಮಾ ಬಂದಿತ್ತು. ಸಂತ ತುಕಾರಾಮ ಚಿತ್ರದಲ್ಲಿ ತುಕಾರಾಮರ ಪಾತ್ರದಲ್ಲಿ ಡಾ. ರಾಜ್ಕುಮಾರ್ ನಟಿಸಿದ್ದರು. ಶಿವಾಜಿ ಮಹಾರಾಜರ ಪಾತ್ರಕ್ಕೆ ಉದಯ್ ಕುಮಾರ್ ಬಣ್ಣ ಹಚ್ಚಿದ್ದರು. ಸಂತ ತುಕಾರಾಮರಿಗೆ ಶಿವಾಜಿ ಶರಣಾಗಿ ಅವರ ಶಿಷ್ಯನಾಗುವ ಸನ್ನಿವೇಶಗಳನ್ನು ಚಿತ್ರದಲ್ಲಿ ನೋಡಬಹುದು.
ರಾಘವೇಂದ್ರ- ಶಿವಾಜಿ ಭೇಟಿ
ಸಂತ ತುಕಾರಾಮ ಬಳಿಕ ಶ್ರೀರಾಘವೇಂದ್ರ ವೈಭವ ಚಿತ್ರದಲ್ಲಿ ಕೂಡ ಶಿವಾಜಿಯ ಪ್ರಸ್ತಾಪ ಇತ್ತು. ರಾಘವೇಂದ್ರ ತೀರ್ಥರ ಜೀವನಾಧರಿತ ಚಿತ್ರ ಇದು. ಪ್ರಣಯ ರಾಜ ಶ್ರೀನಾಥ್ ಚಿತ್ರದಲ್ಲಿ ರಾಘವೇಂದ್ರ ತೀರ್ಥರ ಪಾತ್ರದಲ್ಲಿ ನಟಿಸಿದ್ದರು. ರಾಘವೇಂದ್ರ ತೀರ್ಥರು ದೇಶ ಸಂಚಾರಕ್ಕೆ ಹೋದಾಗ ಕೊಲ್ಲಾಪುರದಲ್ಲಿ ಉಳಿದಿದ್ದರು. ಆಗ ಶಿವಾಜಿ ಮಹಾರಾಜರು ಬಂದು ರಾಘವೇಂದ್ರ ತೀರ್ಥರ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು ಎನ್ನಲಾಗುತ್ತದೆ. ಈ ಸನ್ನಿವೇಶವನ್ನು ಚಿತ್ರದಲ್ಲಿ ತೋರಿಸಲಾಗಿತ್ತು. ಆದರೆ ರಾಘವೇಂದ್ರ ತೀರ್ಥರು ಹಾಗೂ ಶಿವಾಜಿ ಭೇಟಿಯ ಬಗ್ಗೆ ಯಾವುದೇ ಪುರಾವೆ ಇಲ್ಲ ಎನ್ನುವವರು ಇದ್ದಾರೆ.


Click it and Unblock the Notifications











