'ಶಿವಾಜಿ ಸೂರತ್ಕಲ್' ಸೀಕ್ವೆಲ್ಗೆ ಸಜ್ಜಾದ ರಮೇಶ್ ಅರವಿಂದ್
ಕನ್ನಡ ನಟ ರಮೇಶ್ ಅರವಿಂದ್ ನಟನೆಯ ಶಿವಾಜಿ ಸೂರತ್ಕಲ್ ಸಿನಿಮಾ ಬಿಡುಗಡೆಯಾಗಿ ಗಮನ ಸೆಳೆದಿತ್ತು. ಇದೀಗ, ಈ ಚಿತ್ರದ ಮುಂದುವರಿದ ಭಾಗಕ್ಕೆ ಸಜ್ಜಾಗಿದ್ದು, ರಮೇಶ್ ಅವರ ಹುಟ್ಟುಹಬ್ಬದ ದಿನ ಸೀಕ್ವೆಲ್ಗೆ ಚಾಲನೆ ಕೊಡಲಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ.
ಸೆಪ್ಟೆಂಬರ್ 10 ರಂದು ರಮೇಶ್ ಅರವಿಂದ್ ಅವರ ಜನುಮದಿನ. ಅದೇ ದಿನ ಶಿವಾಜಿ ಸೂರತ್ಕಲ್ ಸಿನಿಮಾ ಭಾಗ 2 ಚಿತ್ರದ ಮುಹೂರ್ತ ನೆರವೇರಿಸಲು ಚಿತ್ರತಂಡ ನಿರ್ಧರಿಸಿದೆ.
ಆಕಾಶ್ ಶ್ರೀವಾಸ್ತವ್ ಅವರು ಈ ಚಿತ್ರ ನಿರ್ದೇಶಿಸಿದ್ದರು. 2020ರ ಫೆಬ್ರವರಿ ತಿಂಗಳಲ್ಲಿ ಶಿವಾಜಿ ಸೂರತ್ಕಲ್ ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಕೊರೊನಾ ವೈರಸ್ ಭೀತಿ ಎದುರಿಸಿದ ಆ ವರ್ಷದಲ್ಲಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

ಶಿವಾಜಿ ಸೂರತ್ಕಲ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಚಿತ್ರದ ಕ್ಲೈಮ್ಯಾಕ್ಸ್ ಸಹ ಕುತೂಹಲಕಾರಿಯಾಗಿ ಮುಗಿದಿತ್ತು. ಹಾಗಾಗಿ, ಈ ಕಥೆ ಮುಂದುವರಿಸಲು ಪ್ರೇರೇಪಣೆ ಸಿಕ್ಕಿದ್ದು, ಭಾಗ 2 ಮಾಡಲು ತೀರ್ಮಾನಿಸಲಾಗಿದೆ.
ಅನೂಪ್ ಗೌಡ ಹಾಗೂ ರೇಖ ನಿರ್ಮಾಣ ಮಾಡಿದ್ದ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ಅವಿನಾಶ್, ರಾಘು ರಾಮಣ್ಣಕೊಪ್ಪ, ರಮೇಶ್ ಪಂಡಿತ್ ಸೇರಿದಂತೆ ಹಲವರು ನಟಿಸಿದ್ದರು. ಈಗ ಮುಂದುವರಿದ ಭಾಗದಲ್ಲೂ ರಮೇಶ್, ರಾಧಿಕಾ ನಾರಾಯಣ್, ವಿದ್ಯಾಮೂರ್ತಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಇವರು ಜೊತೆ ಹೊಸ ಹೊಸ ಕಲಾವಿದರು ಸೇರ್ಪಡೆಯಾಗಲಿದ್ದಾರೆ.
ಆಕಾಶ್ ಶ್ರೀವಾಸ್ತವ್ ಜೊತೆ ಅಭಿಜಿತ್ ಸೇರಿ ಚಿತ್ರಕಥೆ ರಚಿಸಿದ್ದರು. ಜುಡಾ ಸ್ಯಾಂಡಿ ಸಂಗೀತ ನೀಡಿದ್ದರು. ಗುರುಪ್ರಸಾದ್ ಎಂ ಅವರ ಛಾಯಾಗ್ರಹಣ ಒಳಗೊಂಡಿತ್ತು. ಈ ಚಿತ್ರವನ್ನು ಕೆಆಆರ್ಜಿ ಸ್ಟುಡಿಯೋಸ್ ನಿರ್ಮಾಣ ಮಾಡಿತ್ತು.
ಶಿವಾಜಿ ಸೂರತ್ಕಲ್: ದಿ ಕೇಸ್ ಆಫ್ ರತ್ನಗಿರಿ ರಹಸ್ಯ ಚಿತ್ರದ ಮುಂದುವರಿದ ಭಾಗ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ 2022ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾಗಳ ಜೊತೆ ಬೈರಾದೇವಿ, 100 ಚಿತ್ರಗಳಲ್ಲಿಯೂ ರಮೇಶ್ ಅರವಿಂದ್ ನಟಿಸಿದ್ದಾರೆ.


Click it and Unblock the Notifications











