ಪುನೀತ್ ನಿಧನ: ಶಿವಮೊಗ್ಗದಲ್ಲಿ ಸೂತಕದ ಛಾಯೆ, ಅಘೋಷಿತ ಬಂದ್ ಸ್ಥಿತಿ
ನಟ ಪುನಿತ್ ರಾಜ್ ಕುಮಾರ್ ನಿಧನಕ್ಕೆ ಅಸಂಖ್ಯ ಜನರು ಕಂಬನಿ ಮಿಡಿದಿದ್ದಾರೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಪ್ರತಿ ಹಳ್ಳಿ, ಪ್ರತಿ ಬೀದಿಯಲ್ಲೂ ಬ್ಯಾನರ್ ಕಟ್ಟಿ, ಪೂಜೆ ಸಲ್ಲಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ಇವತ್ತೂ ಕೂಡ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರ ಭಾವಚಿತ್ರದ ಫ್ಲೆಕ್ಸ್ ಕಟ್ಟಲಾಗಿದೆ. ಪ್ರತಿ ವಾರ್ಡ್, ಪ್ರತಿ ಬೀದಿಯಲ್ಲೂ ಫ್ಲೆಕ್ಸ್ ಕಟ್ಟಿ ಪೂಜೆ ಸಲ್ಲಿಸಲಾಗುತ್ತಿದೆ. ಯುವಕರಷ್ಟೆ ಅಲ್ಲದೆ ಸ್ವಯಂ ಪ್ರೇರಿತವಾಗಿ ಜನರು ಬಂದು ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.
ಇನ್ನು, ಜಿಲ್ಲೆಯ ಬಹುತೇಕ ಎಲ್ಲಾ ಗ್ರಾಮಗಳಲ್ಲೂ ನಟ ಪುನಿತ್ ರಾಜ್ ಕುಮಾರ್ ಅವರ ಫ್ಲೆಕ್ಸ್ ಕಟ್ಟಿ, ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಯುವಕರ ಸಂಘಗಳು, ಅಭಿಮಾನಿಗಳು, ಸಾರ್ವಜನಿಕರು ಪೂಜೆ ಸಲ್ಲಿಸಿ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ನಟ ಪುನಿತ್ ರಾಜ್ ಕುಮಾರ್ ಅವರಿಗೆ ಜನ ಕಂಬನಿ ಮಿಡಿದಿದ್ದಾರೆ. ಶಿವಮೊಗ್ಗದಲ್ಲಿ ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡವರು ಅವುಗಳನ್ನು ಪೋಸ್ಟ್ ಮಾಡಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ನಟ ಪುನಿತ್ ರಾಜ್ ಕುಮಾರ್ ನಿಧನ ಹಿನ್ನೆಲೆ ಗೌರವ ಸೂಚಿಸಿ ರಿಪ್ಪನ್ ಪೇಟೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ರಿಪ್ಪನ್ ಪೇಟೆಯಲ್ಲಿ ಮೆಡಿಕಲ್ ಶಾಪ್ ಹೊರತು ಉಳಿದೆಲ್ಲ ಮಳಿಗೆಗಳು, ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. ಮಧ್ಯಾಹ್ನದವರೆಗೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ವಾಹನ ಸಂಚಾರ, ಬಸ್ಸುಗಳ ಓಡಾಟಕ್ಕೆ ಯಾವುದೆ ಅಡ್ಡಿಯಾಗಿಲ್ಲ. ರಿಪ್ಪನ್ ಪೇಟೆ ಸರ್ಕಲ್'ನಲ್ಲಿ ಪುನಿತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಹೂವು ಹಾಕಿ ಗೌರವ ಸಲ್ಲಿಸಲಾಗಿದೆ. ಸಾಗರ ತಾಲೂಕು ಕೇಂದ್ರದಲ್ಲೂ ಸಂಪೂರ್ಣ ಬಂದ್ ಮಾಡಲಾಗಿದೆ. ಪಟ್ಟಣದಲ್ಲಿ ಅಂಗಡಿಗಳು ಬಂದ್ ಮಾಡಲಾಗಿದೆ. ವಾಹನ ಸಂಚಾರಕ್ಕೆ ಯಾವುದೆ ತೊಂದರೆ ಇಲ್ಲ. ಪುನಿತ್ ರಾಜ್ ಕುಮಾರ್ ಅವರನ್ನು ನೆನೆದು ಜನರು ಕಂಬನಿ ಮಿಡಿದಿದ್ದಾರೆ.
ಶಿವಮೊಗ್ಗಕ್ಕೂ ಪುನೀತ್ ರಾಜ್ಕುಮಾರ್ಗೂ ಆತ್ಮೀಯ ಬಂಧವಿತ್ತು. ಶಿವಮೊಗ್ಗ ಜಿಲ್ಲೆಯ ಕುರಿತು ನಟ ಪುನಿತ್ ರಾಜ್ ಕುಮಾರ್ಗೆ ಬಹಳ ಅಭಿಮಾನವಿತ್ತು. ಇದನ್ನು ಹಲವು ಭಾರಿ ಅವರು ಹೇಳಿಕೊಂಡಿದ್ದರು. ನಾಯಕ ನಟನಾಗಿ ಮೊಟ್ಟಮೊದಲ ಭಾರಿಗೆ ರಾಜ್ಯ ಪ್ರಶಸ್ತಿ ಪಡೆದಿದ್ದೇ ಶಿವಮೊಗ್ಗದಲ್ಲಿ.

ಮಿಲನ ಸಿನಿಮಾದ ಅಭಿನಯಕ್ಕಾಗಿ ಪುನಿತ್ ರಾಜ್ ಕುಮಾರ್ ಅವರಿಗೆ ಉತ್ತಮ ನಟ ಪ್ರಶಸ್ತಿ ಲಭಿಸಿತ್ತು. 2010ರಲ್ಲಿ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪುನಿತ್ ರಾಜ್ ಕುಮಾರ್ ಅವರಿಗೆ ಪ್ರಶಸ್ತಿ ವಿತರಿಸಿದ್ದರು.
ಶಿವಮೊಗ್ಗ ಜಿಲ್ಲೆಯಲ್ಲಿ ಪುನಿತ್ ರಾಜ್ ಕುಮಾರ್, ಹಲವು ಸಿನಿಮಾಗಳ ಚಿತ್ರೀಕರಣಕ್ಕೆ ಬರುತ್ತಿದ್ದರು. ಇದರ ಹೊರತಾಗಿ ಸ್ನೇಹಿತರು, ಸಂಬಂಧಿಗಳ ಭೇಟಿಗೂ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದರು. ಹಲವು ಸಂಬಂಧಿಗಳ ಮನೆಯಲ್ಲಿ ಪುನಿತ್ ರಾಜ್ ಕುಮಾರ್ ಅವರು ಉಳಿಯುತ್ತಿದ್ದರು. ಜಾಕಿ, ಹುಡುಗರು ಸೇರಿ ಇನ್ನೂ ಹಲವು ಸಿನಿಮಾಗಳ ಪ್ರಮೋಷನ್ಗೆ ಅವರು ಬಂದಿದ್ದರು. ಪುನೀತ್ ನಟನೆಯ 'ಪರಮಾತ್ಮ' ಸಿನಿಮಾದ ಕೆಲ ದೃಶ್ಯಗಳ ಚಿತ್ರೀಕರಣ ಇಲ್ಲಿಯೇ ನಡೆದಿತ್ತು. ಜೊತೆಗೆ ಇತ್ತೀಚೆಗಷ್ಟೆ ಡಾಕ್ಯುಮೆಂಟರಿ ಒಂದರ ಚಿತ್ರೀಕರಣಕ್ಕಾಗಿ ಪುನೀತ್ ಶಿವಮೊಗ್ಗದ ಸಕ್ರೆಬೈಲಿಗೆ ಆಗಮಿಸಿದ್ದರು.


Click it and Unblock the Notifications











