ಶಿವಣ್ಣ ಅಭಿಮಾನಿಗಳಿಂದ ಪವಮಾನ ಶಾಂತಿ ಹೋಮ
ಕರುನಾಟ ಚಕ್ರವರ್ತಿ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ ಚಿತ್ರ ಗುರುವಾರ (ಡಿ.12) ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರ ಯಶಸ್ವಿಯಾಗಲಿ, ಶತದಿನೋತ್ಸವ ಆಚರಿಸಲಿ ಎಂದು ಶಿವಣ್ಣ ಅಭಿಮಾನಿಗಳು ಕೋರಿದ್ದಾರೆ.
ಈ ಸಂಬಂಧ ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಬೆಂಗಳೂರು ದಕ್ಷಿಣ ವಿಭಾಗ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಪವಮಾನ ಶಾಂತಿ ಹೋಮ ಆಚರಿಸುತ್ತಿದೆ. ಪ್ರಸನ್ನ ಚಿತ್ರಮಂದಿರದಲ್ಲಿ 12-12-13ರಂದು ಬೆಳಗ್ಗೆ 7.30ರಿಂದ 10 ಗಂಟೆಗೆ ಹೋಮ ನಡೆಯಲಿದೆ.

ತ್ರಿವೇಣಿ ಚಿತ್ರಮಂದಿರದಲ್ಲಿ ವಿಶೇಷ ಪ್ರದರ್ಶನ 7 ಗಂಟೆಗೆ ಆರಂಭವಾಗಲಿದೆ. ವಿಶೇಷ ಪ್ರದರ್ಶನದ ಟಿಕೆಟ್ ಗಳು ಈಗಾಗಲೆ ಸೋಲ್ಡ್ ಔಟ್ ಆಗಿದ್ದು ಬಾಲ್ಕನಿ ಟಿಕೆಟ್ ಬೆಲೆ ರು. 150. ಒಟ್ಟಾರೆಯಾಗಿ ಭಜರಂಗಿ ಚಿತ್ರದಲ್ಲಿ ಏನೆಲ್ಲಾ ವಿಶೇಷಗಳುಂಟು ಎಂಬ ಬಗ್ಗೆ ಕುತೂಹಲ ಅಭಿಮಾನಿಗಳಲ್ಲಿ ಇದ್ದೇ ಇದೆ.
ಚಿತ್ರಕ್ಕೆ ಎ.ಹರ್ಷ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ನಂದ, ಶಕ್ತಿ ಅವರೊಡನೆ ಚಿತ್ರಕಥೆ ಬರೆದಿರುವ ಹರ್ಷ ಈ ಚಿತ್ರದ ನೃತ್ಯ ನಿರ್ದೇಶಕರೂ ಹೌದು. ಜೈಆನಂದ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನಿಮ್ಮ ನೆಚ್ಚಿನ ಒನ್ಇಂಡಿಯಾ ಕನ್ನಡದಲ್ಲಿ ಚಿತ್ರವಿಮರ್ಶೆಯನ್ನು ನಿರೀಕ್ಷಿಸಿ.
ಈ ಬಾರಿ ಶುಕ್ರವಾರಕ್ಕೆ ಬದಲಾಗಿ ಗುರುವಾರ (ಡಿ.12) ಚಿತ್ರವನ್ನು ತೆರೆಗೆ ತರುತ್ತಿರುವುದು ಇನ್ನೊಂದು ವಿಶೇಷ. ಗುರುರಾಯರ ಕೃಪೆ, ಶಿವಣ್ಣನ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಲ್ಲ ಎಂಬ ಲೆಕ್ಕಾಚಾರದಲ್ಲಿ ಚಿತ್ರತಂಡವಿದೆ. ನೃತ್ಯ ನಿರ್ದೇಶಕ ಎ ಹರ್ಷ ಅವರು ಆಕ್ಷನ್ ಕಟ್ ಹೇಳಿರುವ ಚಿತ್ರವಿದು. ಚಿತ್ರದ ನಾಯಕಿ ಐಂದ್ರಿತಾ ರೇ. ಈಗಾಗಲೆ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಚಿತ್ರತಂಡವ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.
ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ. ದೀಪು.ಎಸ್.ಕುಮಾರ್ ಅವರ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ರಮೇಶ್ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಐಂದ್ರಿತಾ ರೇ, ಊರ್ವಶಿ, ಬುಲೆಟ್ ಪ್ರಕಾಶ್, ಸಾಧುಕೋಕಿಲಾ, ತಬಲನಾಣಿ, ಹೊನ್ನವಳ್ಳಿ ಕೃಷ್ಣ, ಶಿವರಾಂ, ಎಂ.ಎಸ್.ಉಮೇಶ್, ಬಿರಾದಾರ್, ಚಿಕ್ಕಣ್ಣ, ಎಂ.ಎನ್.ಲಕ್ಷ್ಮೀದೇವಿ, ಶೃತಿ, ಸಿಲ್ಲಿಲಲ್ಲಿ ಆನಂದ್ ಹಾಗೂ ರಂಗಭೂಮಿ ಕಲಾವಿದರಾದ ಲೋಕಿ, ರಾಜಕುಮಾರ್, ಮಧು, ಚೇತನ್ ಮುಂತಾದವರಿದ್ದಾರೆ.


Click it and Unblock the Notifications











