ಕಿಚ್ಚನ ಸಿನಿಮಾ ಜರ್ನಿಗೆ 27 ವರ್ಷ; ಶಿವಣ್ಣ, ರಿಷಬ್, ಗಣೇಶ್ ವಿಶ್ ಮಾಡಿದ್ದು ಹೀಗೆ
ಚಂದನವನದ ಪ್ರಮುಖ ನಟರಲ್ಲಿ ಓರ್ವರಾಗಿರುವ ಕಿಚ್ಚ ಸುದೀಪ್ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿ ಇಂದಿಗೆ ( ಜನವರಿ 31 ) 27 ವರ್ಷಗಳು ಕಳೆದಿವೆ. ಹೌದು, 1997ರಲ್ಲಿ ತೆರೆಕಂಡ ತಾಯವ್ವ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ರಾಮು ಎಂಬ ನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಸುಂದರಮ್ ಹಾಗೂ ಷಣ್ಮುಗಂ ಬರೆದಿದ್ದ ಕತೆಗೆ ವಿ ಉಮಾಕಾಂತ್ ಆಕ್ಷನ್ ಕಟ್ ಹೇಳಿದ್ದರು. ಚಿತ್ರದಲ್ಲಿ ಸಿಂಧು ನಾಯಕಿಯಾಗಿ ನಟಿಸಿದರೆ, ಹಿರಿಯ ಕಲಾವಿದರಾದ ಉಮಾಶ್ರೀ, ಚರಣ್ ರಾಜ್ ಹಾಗೂ ಅವಿನಾಶ್ ನಟಿಸಿದ್ದರು.
ಈ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ಕಿಚ್ಚ ಸುದೀಪ್ ನಂತರ ರಮೇಶ್ ಅರವಿಂದ್ ನಟನೆಯ ಪ್ರತ್ಯರ್ಥ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಹಾಗೂ ಸ್ಪರ್ಶ ಚಿತ್ರದಲ್ಲಿ ಮತ್ತೆ ನಾಯಕ ನಟನಾಗಿ ಗಮನಾರ್ಹ ಅಭಿನಯ ನೀಡಿದ್ದರು. ಹೀಗೆ ಸುದೀಪ್ ನಟಿಸಿದ್ದ ಮೊದಲ ಮೂರು ಚಿತ್ರಗಳಲ್ಲಿ ಸಿಗದಿದ್ದಂತಹ ದೊಡ್ಡ ಬ್ರೇಕ್ ಅನ್ನು ನಾಲ್ಕನೇ ಚಿತ್ರ ಹುಚ್ಚ ನೀಡಿತ್ತು.
ಹೌದು, ಈ ಚಿತ್ರ ಸುದೀಪ್ ಸಿನಿ ಜೀವನಕ್ಕೆ ದೊಡ್ಡ ಬ್ರೇಕ್ ಕೊಟ್ಟಂತಹ ಚಿತ್ರ. ಈ ಚಿತ್ರದಲ್ಲಿ ಕಿಚ್ಚ ಎಂಬ ಪಾತ್ರವನ್ನು ನಿರ್ವಹಿಸಿದ್ದ ಸುದೀಪ್ ಚಿತ್ರ ಯಶಸ್ಸು ಸಾಧಿಸಿದ ಬೆನ್ನಲ್ಲೇ ಕಿಚ್ಚ ಸುದೀಪ್ ಎಂದೇ ಕರೆಸಿಕೊಳ್ಳಲು ಆರಂಭಿಸಿದರು. ಹೀಗೆ ಹಲವಾರು ಏಳುಬೀಳುಗಳನ್ನು ಕಂಡು ಓರ್ವ ಸ್ಟಾರ್ ನಟನಾಗಿ ಕನ್ನಡ ಚಲನಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿ 27 ವರ್ಷಗಳನ್ನು ಪೂರೈಸಿರುವ ಕಿಚ್ಚ ಸುದೀಪ್ ಅವರಿಗೆ ಈ ವಿಶೇಷ ದಿನದಂದು ಕನ್ನಡದ ಹಲವಾರು ಸ್ಟಾರ್ ನಟರು ಶುಭ ಕೋರಿದ್ದಾರೆ.

ಟ್ವಿಟರ್ನಲ್ಲಿ 27 ವರ್ಷ ಪೂರೈಸಿದ್ದರ ಕುರಿತು ಖುಷಿ ಹಂಚಿಕೊಂಡ ಕಿಚ್ಚ ಸುದೀಪ್
ಇನ್ನು ಮೊದಲಿಗೆ ತಾನು ಸಿನಿಮಾ ಕ್ಷೇತ್ರದಲ್ಲಿ 27 ವರ್ಷ ಪೂರೈಸಿರುವುದರ ಬಗ್ಗೆ ಟ್ವೀಟ್ ಮಾಡಿದ ಕಿಚ್ಚ ಸುದೀಪ್ ""ಇದು ಖಂಡಿತವಾಗಿಯೂ ಎಂದೂ ಮರೆಯಲಾಗದಂತಹ ಜರ್ನಿ. ಹಲವಾರು ಪ್ರತಿಭೆಗಳು ತುಂಬಿರುವ ಸಿನಿಮಾ ಕ್ಷೇತ್ರದಲ್ಲಿ ನಾನು ಉಳಿದುಕೊಂಡಿದ್ದು ನಿಜಕ್ಕೂ ಹೆಮ್ಮೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಒಳ್ಳೆಯ ನಟನೆ ಮಾಡುವಂತೆ ಉತ್ತೇಜಿಸಿದ ಎಲ್ಲಾ ಪ್ರತಿಭೆಗಳಿಗೆ ಧನ್ಯವಾದಗಳು. ಯಾವಾಗಲೂ ನನ್ನ ಬೆನ್ನಿಗೆ ನಿಂತ ಸ್ನೇಹಿತರಿಗೆ ಶಿರ ಬಾಗುತ್ತೇನೆ. ನಿಮ್ಮಂತ ಅಭಿಮಾನಿಗಳನ್ನು ಪಡೆದ ನಾನೇ ಧನ್ಯ. ನನಗೆ ಅವಕಾಶಗಳನ್ನು ನೀಡಿದ ಕನ್ನಡ ಚಲನಚಿತ್ರರಂಗಕ್ಕೆ ಧನ್ಯವಾದಗಳು. ನನ್ನನ್ನು ನಂಬಿದ ಹಿಂದಿ, ತೆಲುಗು ಹಾಗೂ ತಮಿಳು ಚಿತ್ರರಂಗಗಳನ್ನು ಈ ಸಮಯದಲ್ಲಿ ಮರೆಯಲಾಗುವುದಿಲ್ಲ" ಎಂದು ಬರೆದುಕೊಳ್ಳುವುದರ ಮೂಲಕ ಧನ್ಯವಾದ ತಿಳಿಸಿದ್ದರು.

ಶಿವಣ್ಣ, ಗಣೇಶ್, ರಿಷಬ್ ಮುಂತಾದವರು ಶುಭ ಕೋರಿದ್ದು ಹೀಗೆ
ಸುದೀಪ್ 27 ವರ್ಷಗಳನ್ನು ಪೂರೈಸಿದ್ದರ ಕುರಿತು ಟ್ವೀಟ್ ಮಾಡಿದ ಶಿವ ರಾಜ್ಕುಮಾರ್ ಕಿಚ್ಚ ಸುದೀಪ್ಗೆ ಶುಭ ಕೋರಿದ್ದು, 27 ವರ್ಷಗಳಿಂದ ಚಿತ್ರರಂಗದಲ್ಲಿ ಎಲ್ಲರನ್ನು ಮನರಂಜಿಸುತ್ತಾ ಬಂದಿರುವ ನಿಮಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ರಿಪ್ಲೈ ಮಾಡಿರುವ ಸುದೀಪ್ ಧನ್ಯವಾದಗಳು ಅಣ್ಣ ಎಂದು ಟ್ವೀಟ್ ಮಾಡಿದ್ದಾರೆ. ಇನ್ನುಳಿದಂತೆ ಗಣೇಶ್, ರಿಷಬ್ ಶೆಟ್ಟಿ, ಅನುಪ್ ಭಂಡಾರಿ, ನಿರುಪ್ ಭಂಡಾರಿ ಸೇರಿದಂತೆ ಹಲವಾರು ಕಲಾವಿದರು ಕಿಚ್ಚನಿಗೆ ಶುಭಕೋರಿದ್ದು, ಪ್ರತಿಯೊಬ್ಬರಿಗೂ ಕಿಚ್ಚ ಧನ್ಯವಾದ ತಿಳಿಸಿದ್ದರೆ.

ಕುತೂಹಲ ಮೂಡಿಸಿದ ಕೆಆರ್ಜಿ ವಿಶ್
ಇನ್ನು ಕಿಚ್ಚ ಸುದೀಪ್ ಅವರ ಈ ವಿಶೇಷ ಮೈಲಿಗಲ್ಲಿಗೆ ಕೆಆರ್ಜಿ ಕನೆಕ್ಟ್ಸ್ ಮಾಡಿರುವ ಟ್ವೀಟ್ ಕುತೂಹಲ ಮೂಡಿಸಿದೆ. ಕಿಚ್ಚ ಸುದೀಪ್ ನಟನೆಯ ಮುಂದಿನ ಚಿತ್ರಕ್ಕೆ ಇದೇ ಬ್ಯಾನರ್ ಬಂಡವಾಳ ಹೂಡಲಿದೆ ಎಂದು ಸುದ್ದಿ ಹರಿದಾಡುತ್ತಿರುವಾಗಲೇ ಈ ರೀತಿ ಕೆಆರ್ಜಿ ಕನೆಕ್ಟ್ಸ್ ಪ್ರತ್ಯೇಕ ಎಡಿಟ್ ಮಾಡಿ ಸುದೀಪ್ ಅವರಿಗೆ ವಿಶ್ ಮಾಡಿರುವುದು ಈ ಸುದ್ದಿಗೆ ಮತ್ತಷ್ಟು ಮೈಲೇಜ್ ನೀಡಿದಂತಾಗಿದೆ.


Click it and Unblock the Notifications











