ಮನುಷ್ಯತ್ವಕ್ಕೆ ಬೆಲೆ ಇಲ್ಲವಾ ; ಶಿವಣ್ಣ ಬೇಸರ ಮಾಡಿಕೊಂಡಿದ್ದೇಕೆ..?
ಸಿನಿಮಾ ಮಾಡುವುದು ಅಷ್ಟೇ ಮುಖ್ಯ ಅಲ್ಲ. ಆ ಸಿನಿಮಾವನ್ನ ಜನರ ಬಳಿ ತಲುಪಿಸುವುದು ಕೂಡ ಅಷ್ಟೇ ಮುಖ್ಯ. ಕನ್ನಡ ಚಿತ್ರರಂಗದ ಅನೇಕ ಕಲಾವಿದರು-ನಿರ್ದೇಶಕರು ಈ ಮಾತನ್ನ ಒಪ್ಪುತ್ತಾರೆ ಕೂಡ.
ಹೀಗಾಗಿಯೇ ತಮ್ಮ ಚಿತ್ರದ ಬಿಡುಗಡೆ ಸಮಯದಲ್ಲಿ ಅನೇಕ ಕಲಾವಿದರು ತಮ್ಮ ಶಕ್ತಿಗೂ ಮೀರಿ ಪ್ರಚಾರದಲ್ಲಿ ಕೈ ಜೋಡಿಸುತ್ತಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ಊರಿಂದ ಊರಿಗೆ ಓಡಾಡುತ್ತಾರೆ. ಕಣ್ಣಿಗೆ ಎಣ್ಣೆ ಬಿಟ್ಕೊಂಡು ಹಗಲಿರುಳು ಅನ್ನದೇ ಸಂದರ್ಶನಗಳನ್ನೂ ನೀಡ್ತಾರೆ.

ಆದರೆ ವಿಪರ್ಯಾಸ ಬಹುತೇಕ ಬಾರಿ ಸಂದರ್ಶನಗಳಲ್ಲಿ ಚಿತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳೇ ಇರಲ್ಲ. ಬದಲಿಗೆ ಚಿತ್ರಕ್ಕೆ ಸಂಬಂಧವೇ ಇರದ ಪ್ರಶ್ನೆಗಳನ್ನ ಕೇಳಲಾಗುತ್ತೆ. ಇನ್ನೂ ಕೆಲವೊಮ್ಮೆ ವಿವಾದಕ್ಕೆ ಅವಕಾಶ ಮಾಡಿಕೊಡುವ ಪ್ರಶ್ನೆಯನ್ನ ಕೇಳಲಾಗುತ್ತೆ. ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಮೊನ್ನೆ ಇದೇ ವಿಚಾರಕ್ಕೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಹೌದು, ನಿಮಗೆ ಗೊತ್ತು, ಶಿವಣ್ಣ ಅಭಿನಯದ ಕರಟಕ ದಮನಕ ಇದೇ ಮಾರ್ಚ್ 08ರಂದು ಬಿಡುಗಡೆಯಾಗ್ತಿದೆ. ಚಿತ್ರಕ್ಕೆ ಸಂಬಂಧಿಸಿದ ಪ್ರಚಾರ ಕಾರ್ಯ ಕೂಡ ಭರದಿಂದ ಸಾಗಿದೆ. ಇದೇ ವೇಳೆ ಕನ್ನಡ ಪಿಚ್ಚರ್ ಯುಟ್ಯೂಬ್ ವಾಹಿನಿ ಜೊತೆ ಮಾತನಾಡಿರುವ ಶಿವಣ್ಣ, ಸಂದರ್ಶನದ ನೆಪದಲ್ಲಿ ಬೇಡದೆ ಇರುವ ವಿಚಾರವನ್ನ ಕೇಳಲೆಂದೆ ಸುಮಾರು ಜನ ಬರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಏನೇ ಮಾತನಾಡಿದರೂ ಮನಸಿಂದ ಮಾತನಾಡಬೇಕು ಎಂದಿರುವ ಶಿವಣ್ಣ ಅಗತ್ಯ ಇಲ್ಲದೇ ಇರುವ ವಿಚಾರವನ್ನ ಕೇಳಿ ಅದನ್ನ ಬ್ರೇಕಿಂಗ್ ಸಮಾಚಾರವನ್ನಾಗಿ ಬಿತ್ತರಿಸುವ ಅವಶ್ಯಕತೆ ಆದರೂ ಏನಿದೆ ಅಂದಿದ್ದಾರೆ. ಎಲ್ಲರೂ ಸಂಪಾದನೆ ಮಾಡ್ತಾರೆ ಆದರೆ ಆ ಸಂಪಾದನೆಯ ಮಾರ್ಗ ಸರಿಯಾಗಿರಬೇಕು ಎಂದು ಕಿಡಿ ಕಾರಿದ್ದಾರೆ.
ಇನ್ನೂ ಯಾವುದೋ ವಿಚಾರಕ್ಕೆ ಇನ್ಯಾವುದೋ ಮಾತನ್ನ ಪೋಣಿಸುವುದು ತಪ್ಪಲ್ಲವಾ ಎಂಬ ಪ್ರಶ್ನೆಯನ್ನೂ ಕೇಳಿರುವ ಶಿವಣ್ಣ ಎಲ್ಲ ದುಡ್ಡಿಗೆ ಬೆಲೆ ಕೊಟ್ಟರೆ, ಮನುಷ್ಯತ್ವಕ್ಕೆ ಬೆಲೆ ಕೊಡೊರು ಯಾರು ಎಂದು ಅಸಮಾಧಾನವನ್ನೂ ಹೊರ ಹಾಕಿದ್ದಾರೆ.
ಕರಟಕ ದಮನಕ ಚಿತ್ರ ಇನ್ನೇನು ಬಿಡುಗಡೆಯಾಗಲಿದೆ ಆ ಚಿತ್ರದ ಬಗ್ಗೆ ಅಷ್ಟೇ ಕೇಳಬೇಕು, ನಾವೂ ಕೂಡ ಚಿತ್ರದ ಬಗ್ಗೆಯಷ್ಟೇ ಮಾತನಾಡಬೇಕೆ ಹೊರತು, ಚಿತ್ರಕ್ಕೆ ಸಂಬಂಧ ಇಲ್ಲದವರ ಬಗ್ಗೆ ಮಾತನಾಡಿದರೆ ಏನೂ ಪ್ರಯೋಜನ ಎಂದಿದ್ದಾರೆ ಶಿವಣ್ಣ.
ಶಿವಣ್ಣ ಅವರ ಈ ನೇರ ನುಡಿ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ವಿಡಿಯೋ ವೈರಲ್ ಆಗ್ತಿದೆ. ಶಿವಣ್ಣ ಅವರ ಮಾತುಗಳಿಗೆ ಸಮ್ಮತಿಯನ್ನ ಸೂಚಿಸುತ್ತಿರುವ ಅನೇಕರು ಮಾತು ಅಂದರೆ ಇದು ಶಿವಣ್ಣ ಅನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











