ಶಾಪ ವಿಮೋಚನೆಯಂದೇ ಶಿವಪ್ಪನಾಯ್ಕ
ಚಿತ್ರ ಬಿಡುಗಡೆಯ ದಿನವೇ ಹೊಸ ಚಿತ್ರವನ್ನು ಪ್ರಕಟಿಸುವುದು ಬಿ.ಸಿ. ಪಾಟೀಲ್ ಶೈಲಿ. ಈ ಹಿಂದೆ ಹಲವಾರು ಬಾರಿ ಅವರು ಈ ತಂತ್ರವನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ. ಇಂದು ಶುಕ್ರವಾರದ ಶುಭಸಂಜೆಯಲ್ಲಿಯೂ ಇಂಥಾದ್ದೇ ಒಂದು ಅನೌನ್ಸ್ಮೆಂಟ್ ಪತ್ರಕರ್ತರಿಗೆ ಕಾದಿದೆ.
ಬಿ.ಸಿ. ಪಾಟೀಲ್ ಸೋದರ ಅಶೋಕ್ ಪಾಟೀಲ್ ನಿರ್ದೇಶನದ ಶಾಪ ಇಂದು ತೆರೆ ಕಾಣಲಿದೆ. ಚಿತ್ರದ ಪತ್ರಿಕಾಪ್ರದರ್ಶನದ ನಂತರ ಪಾಟೀಲರ ಹೊಸ ಕಚೇರಿಯಲ್ಲಿ ಸಂತೋಷ ಕೂಟಕ್ಕೂ ವ್ಯವಸ್ಥೆಯಾಗಿದೆ. ಅಲ್ಲಿ ಪಾಟೀಲ್ ತಮ್ಮ ಮುಂದಿನ ಯೋಜನೆಯ ವಿವರಗಳನ್ನು ನೀಡುತ್ತಾರೆ. ಅಂದ ಹಾಗೆ ಪಾಟೀಲ್ ನಾಯಕರಾಗಿ ನಟಿಸಲಿರುವ ಆ ಚಿತ್ರದ ಹೆಸರು ಶಿವಪ್ಪ ನಾಯ್ಕ.
ಮೊನ್ನೆ ಮೊನ್ನೆ ತನಕ ಪೊಲೀಸ್ ಅನ್ನುವ ಹೆಸರಿನ ಚಿತ್ರ ನಿರ್ಮಿಸುವ ಬಗ್ಗೆ ಮಾತಾಡುತ್ತಿದ್ದ ಪಾಟೀಲ್ ಈಗ ಮನಸ್ಸು ಬದಲಾಯಿಸಿದ್ದಾರೆ. ಭೂತಯ್ಯ ಚಿತ್ರವಂತೂ ಅನಿರ್ದಿಷ್ಟ ಕಾಲದ ತನಕ ಮುಂದೆ ಹೋಗಿದೆ. ಪಾಟೀಲ್ ತಂಡದಲ್ಲೂ ಬದಲಾವಣೆಯಾಗಿದೆ. ಮಾಮೂಲಾಗಿ ಅವರ ಚಿತ್ರಗಳಿಗೆ ಕತೆ, ಚಿತ್ರ ಕತೆ, ಸಂಭಾಷಣೆ ಒದಗಿಸುತ್ತಿದ್ದ ಬಿ.ಎ. ಮಧು ಜಾಗದಲ್ಲಿ ಈಗ ರಿಚರ್ಡ್ ಲೂಯಿಸ್ ಪ್ರತ್ಯಕ್ಷರಾಗಿದ್ದಾರೆ. ನಿರ್ಬಂಧ ಚಿತ್ರದ ನಂತರ ಇವರಿಬ್ಬರೂ ಮತ್ತೆ ಒಂದಾಗಿದ್ದಾರೆ.
ವೀರಪ್ಪ ನಾಯ್ಕ ಚಿತ್ರಕ್ಕೂ, ಶಿವಪ್ಪ ನಾಯ್ಕನಿಗೂ ಯಾವ ಸಂಬಂಧಾನೂ ಇಲ್ಲವಂತೆ. ನಾಯಕ ನಾಯ್ಕನಾದರೆ ಅದೃಷ್ಟ ಖುಲಾಯಿಸುತ್ತದೆ ಅನ್ನೋದು ಮೂಢನಂಬಿಕೆಯಂತೂ ಅಲ್ಲ.


Click it and Unblock the Notifications