ಅಂಬರೀಶ್ ಅಭಿಮಾನಿಗಳಲ್ಲಿ ಶಿವಣ್ಣನ ಕೋರಿಕೆ
ನಟ ಅಂಬರೀಶ್ ಎಷ್ಟೊಂದು ಪ್ರೀತಿ ಸಂಪಾದಿಸಿದ್ದಾರೆ ಎನ್ನುವುದಕ್ಕೆ ಇಂದಿನ ಅವರ ಅಂತಿಮ ದರ್ಶನಕ್ಕೆ ಬರುತ್ತಿರುವ ಅಭಿಮಾನಿ ಹಾಗೂ ಚಿತ್ರರಂಗ ಸ್ನೇಹಿತರು ಸಾಕ್ಷಿಯಾಗಿದ್ದಾರೆ.
ಕನ್ನಡದ ಮತ್ತೊಬ್ಬ ಮಹಾನ್ ನಟ ಬಾರದ ಲೋಕಕ್ಕೆ ಹೋಗಿದ್ದಾರೆ. ಅವರ ಅಗಲಿಕೆಗೆ ಇಡೀ ಕನ್ನಡ ಚಿತ್ರರಂಗ ಕಣ್ಣೀರು ಹಾಕಿದೆ. ನಟ ಶಿವರಾಜ್ ಕುಮಾರ್, ಅನಂತ್ ನಾಗ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅಂಬರೀಶ್ ಅವರ ಬಗ್ಗೆ ಮಾತನಾಡಿದ್ದಾರೆ.
ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಶಿವರಾಜ್ ಕುಮಾರ್, ಅಂಬರೀಶ್ ಅವರ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡರು. ಜೊತೆಗೆ ಅಂಬರೀಶ್ ಅವರ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದರು. ಮುಂದೆ ಓದಿ...

ಶಿವರಾಜ್ ಕುಮಾರ್ ಸಂತಾಪ
''ಇಂದು ಕರ್ನಾಟಕ ಮಾತ್ರವಲ್ಲ, ಇಡೀ ದೇಶಕ್ಕೆ ದೊಡ್ಡ ನಷ್ಟವಾಗಿದೆ. ಅಂಬರೀಶ್ ಅಂಕಲ್ ಒಬ್ಬ ಸೂಪರ್ ಸ್ಟಾರ್, ಒಬ್ಬ ರಾಜಕಾರಣಿ, ಎಲ್ಲದಕ್ಕಿಂತ ಹೆಚ್ಚಾಗಿ ಅವರು ಒಬ್ಬ ಒಳ್ಳೆಯ ಮನುಷ್ಯ. ಬೇದ ಭಾವ ಮಾಡದೆ ಒಂದೇ ರೀತಿ ನೋಡುತ್ತಿದ್ದರು. ಅವರನ್ನು ಈ ರೀತಿ ನೋಡಲು ನಮಗೆ ತುಂಬ ನೋವಾಗುತ್ತಿದೆ.'' - ಶಿವರಾಜ್ ಕುಮಾರ್, ನಟ

ಅಭಿಮಾನಿಗಳಲ್ಲಿ ಕೋರಿಕೆ
''ಅಪ್ಪಾಜಿ, ವಿಷ್ಣು ಸರ್ ಇದ್ದ ಹಾಗೆಯೇ, ನಮ್ಮ ಪಾಲಿಗೆ ಅಂಬರೀಶಣ್ಣ. ಅವರು ನಮಗೆ ತಂದೆ ಇದ್ದ ಹಾಗೆ. ಅವರ ಅಭಿಮಾನಿಗಳಲ್ಲಿ ಒಂದು ಕೋರಿಕೆ, ಅವರು ನಮ್ಮ ಜೊತೆಗೆ ಇಲ್ಲ ಎಂದು ಯಾರೂ ಎಂದುಕೊಳ್ಳಬಾರದು. ಅವರ ಒಳ್ಳೆಯ ತನವನ್ನು ನೆನಪು ಮಾಡಿಕೊಳ್ಳಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಮಗ ಅಭಿಷೇಕ್ ಜೊತೆಗೆ ನಾವು ಯಾವಾಗಲೂ ಇರುತ್ತೇವೆ.'' - ಶಿವರಾಜ್ ಕುಮಾರ್, ನಟ

ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು - ಅನಂತ್ ನಾಗ್
ಅಂಬರೀಶ್ ಅವರಿಗೆ ಸಂತಾಪ ಸೂಚಿಸಿದ ಅನಂತ್ ನಾಗ್ ''ಪ್ರೀತಿ ಕೊಡುವುದು ಅಂದರೆ ಏನು ಎನ್ನುವುದನ್ನು ಅವರನ್ನ ನೋಡಿ ಕಲಿಯಬೇಕು. ದೊಡ್ಡ ಸಾಧನೆ ಮಾಡಿರುವ ಅಂಬರೀಶ್ ನನಗಿಂತ ವಯಸ್ಸಿನಲ್ಲಿ ಚಿಕ್ಕವರು. ಸರಿಯಾಗಿ ಊಟ ಮಾಡಿ ಅಂತ ನನ್ನ ಆರೋಗ್ಯದ ಕಾಳಜಿ ವಹಿಸುತ್ತಿದ್ದರು.''- ಅನಂತ್ ನಾಗ್, ಹಿರಿಯ ನಟ

ಅಂಬರೀಶಣ್ಣ ಮತ್ತೆ ಹುಟ್ಟಿದ್ದಾರೆ - ಯೋಗರಾಜ್ ಭಟ್
''ಅಂಬರೀಶಣ್ಣ ಮತ್ತೆ ಹುಟ್ಟಿದ್ದಾರೆ. ತುಂಬ ಜೀವಂತಿಕೆ ಇದ್ದ ಅವರು, ಎಂದಿಗೂ ಕನ್ನಡಿಗರ ಜೊತೆಗೆ ಜೀವಂತವಾಗಿ ಇರುತ್ತಾರೆ. ಅವರ ಜೊತೆಗೆ ಸಿನಿಮಾ ಮಾಡಿದ್ದು ,ನನ್ನ ಪುಣ್ಯ. ತುಂಬ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.'' - ಯೋಗರಾಜ್ ಭಟ್


Click it and Unblock the Notifications











