ರಿಮೇಕ್ ಸಿನಿಮಾ ಬಗ್ಗೆ ಶಿವರಾಜ್ ಕುಮಾರ್ ಮಾತು
ಒಂದೂವರೆ ದಶಕದ ಬಳಿಕ ನಾನು ರಿಮೇಕ್ ಚಿತ್ರದಲ್ಲಿ ನಟಿಸಿದ್ದು, 'ಕವಚ' ಸಿನಿಮಾ ಏಪ್ರಿಲ್ 5 ರಂದು ಬಿಡುಗಡೆಯಾಗಲಿದೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.
ಮೈಸೂರಿನ ಸುದ್ದಿಗೋಷ್ಠಿಯಲ್ಲಿ ನಿನ್ನೆ ಅವರು ಮಾತನಾಡಿ, ಬೇರೆ ಭಾಷೆಗಳಲ್ಲಿ ಒಳ್ಳೆಯ ಸಿನಿಮಾಗಳು ಬಂದರೆ ಕನ್ನಡಕ್ಕೆ ರಿಮೇಕ್ ಮಾಡುತ್ತೇನೆ. ಆದರೆ, ಕೇವಲ ರಿಮೇಕ್ ಚಿತ್ರಗಳಲ್ಲಿ ನಟಿಸಿಸುವುದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿಲ್ಲ. ಮಲಯಾಳಂನ 'ಒಪ್ಪಂ' ಚಿತ್ರದ ರಿಮೇಕ್ 'ಕವಚ'. ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಚಿತ್ರಗಳನ್ನು ರಿಮೇಕ್ ಮಾಡಬಹುದು.'' ಎಂದು ಹೇಳಿದ್ದಾರೆ.
''ಮಲಯಾಳಂನಲ್ಲಿ ಮೋಹನ್ಲಾಲ್ ಅವರು ನಟಿಸಿದ್ದರು. ಚಿತ್ರ ನೋಡಿದಾಗ ಕನ್ನಡದಲ್ಲೂ ಮಾಡಬಹುದು ಅನಿಸಿತು. ಅದಕ್ಕೆ ಈ ನಟಿಸಲು ಒಪ್ಪಿಕೊಂಡೆ'' ಎಂದರು ಶಿವಣ್ಣ.

''ಅಂಧರನ್ನು ಕಡೆಗಣಿಸಬಾರದು ಎಂಬ ಸಂದೇಶವನ್ನು ಈ ಚಿತ್ರ ನೀಡುತ್ತದೆ. ಕಣ್ಣಿಲ್ಲದವರು ಈ ಜಗತ್ತಿನಲ್ಲಿ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎಂಬುದು ಚಿತ್ರದಲ್ಲಿದೆ. ಸಿನಿಮಾದಲ್ಲಿ ನಟಿಸಿದ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ'' ಎಂದು ಮೆಚ್ಚುಗೆ ಶಿವರಾಜ್ ಕುಮಾರ್ ವ್ಯಕ್ತಪಡಿಸಿದರು.
33 ವರ್ಷಗಳನ್ನು ಚಿತ್ರದಲ್ಲಿ ಸವೆಸಿರುವ ಶಿವಣ್ಣ ಕಲಿಯಲು ಸಾಕಷ್ಟಿದೆ, ಈ ಚಿತ್ರದಲ್ಲಿ ಮೀನಾಕ್ಷಿ ಎಂಬ ಬಾಲಕಿ ನಮ್ಮ ಜತೆ ನಟಿಸಿದ್ದು, ಆ ಹುಡುಗಿಯಿಂದ ಕೂಡ ಕೆಲವೊಂದು ವಿಷಯಗಳನ್ನು ಕಲಿತುಕೊಂಡಿದ್ದೇನೆ ಎಂದರು.

ನಟ ವಸಿಷ್ಠ ಸಿಂಹ ಮಾತನಾಡಿ, ''ಸಿನಿಮಾದ ಪಾತ್ರ ನನಗೆ ಬಹಳವಾಗಿ ಕಾಡಿದೆ. ಇದು ರಿಮೇಕ್ ಚಿತ್ರವಾದರೂ, ಮೂಲ ಸ್ಕ್ರಿಪ್ಟ್ನಲ್ಲಿ ಶೇ 40 ರಿಂದ 50 ರಷ್ಟು ಬದಲಾವಣೆ ತಂದು ಸಿನಿಮಾ ನಿರ್ದೇಶಿಸಿದ್ದಾರೆ. ನಿರ್ದೇಶಕರು ಮತ್ತು ಅವರ ತಂಡದವರು ಸಾಕಷ್ಟು ಶ್ರಮ ವಹಿಸಿದ್ದಾರೆ. ಶಿವಣ್ಣ ಅವರ ಜತೆ ನನಗೆ ಇದು ಮೂರನೇ ಸಿನಿಮಾ. ಈ ಹಿಂದೆ 'ಮಫ್ತಿ' ಮತ್ತು 'ಟಗರು' ಸಿನಿಮಾಗಳಲ್ಲಿ ಅವರ ಜತೆ ನಟಿಸಿದ್ದೆ ಎಂದು ಹೇಳಿದರು.
ನಟಿ ಕೃತಿಕಾ ಮಾತನಾಡಿ, 'ಕವಚ' ಸಿನಿಮಾ ತುಂಬಾ ವಿಶೇಷವಾದದು. ಹಲವು ದೃಶ್ಯಗಳು ಭಾವುಕತೆಯನ್ನು ಹೆಚ್ಚಿಸುತ್ತದೆ. ಪ್ರೇಕ್ಷಕನ ಜತೆ ಭಾವನಾತ್ಮಕ ಸಂಬಂಧ ಬೆಳೆಸುವಂತಿದೆ. ಶಿವಣ್ಣ ಜತೆ ಸಿನಿಮಾ ಮಾಡುವುದು ನನಗೆ ಲಭಿಸಿದ ಬಲು ದೊಡ್ಡ ಅವಕಾಶ ಎಂದರು.


Click it and Unblock the Notifications











