Bhairathi Ranagal: ಮಡಚಿಟ್ಟಿದ್ದ ಅಧ್ಯಾಯದ ಪುನಾರಾರಂಭ: ರಾಕ್ಷಸ- ರಕ್ಷಕನ ಅಸಲಿ ಕಥೆಯೇನು?
ನಿರ್ದೇಶಕ ನರ್ತನ್ ಕೊನೆಗೂ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಆದರೆ ಯಶ್19 ಅಪ್ಡೇಟ್ ಅಲ್ಲ. ಬದಲಿಗೆ 'ಭೈರತಿ ರಣಗಲ್' ಅನೌನ್ಸ್ಮೆಂಟ್ ನ್ಯೂಸ್. ಹೌದು , ರಾಕಿಂಗ್ ಸ್ಟಾರ್ ಯಶ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನಲಾಗುತ್ತಿತ್ತು. ಆದರೆ ಸದ್ಯಕ್ಕೆ ಅದನ್ನು ಪಕ್ಕಕ್ಕಿಟ್ಟು 'ಮಫ್ತಿ' ಪ್ರೀಕ್ವೆಲ್ಗೆ ಸಿದ್ಧತೆ ನಡೆಸಿದ್ದಾರೆ.
ಶಿವರಾತ್ರಿ ಹಬ್ಬದ ಸಂಭ್ರಮದಲ್ಲೇ 'ಭೈರತಿ ರಣಗಲ್' ಸಿನಿಮಾ ಘೋಷಣೆ ಆಗಿದೆ. ಗೀತಾ ಪಿಕ್ಚರ್ಸ್ ಬ್ಯಾನರ್ನಲ್ಲಿ ನರ್ತನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. 'ಮಡಚಿಟ್ಟಿದ್ದ ಅಧ್ಯಾಯದ ಪುನಾರಾರಂಭ ಎಂದ ಬರೆದು ಪೋಸ್ಟರ್ ಸಮೇತ ಸಂಸ್ಥೆ ಈ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದೆ. ಈ ಸುದ್ದಿ ಕೇಳಿ ಕನ್ನಡ ಸಿನಿರಸಿಕರು ಖುಷಿಯಾಗಿದ್ದಾರೆ. ಬಹಳ ದಿನಗಳಿಂದ ಕಾಯುತ್ತಿದ್ದ ಸಿನಿಮಾವೊಂದರ ಅಪ್ಡೇಟ್ ಸಿಕ್ತು ಎನ್ನುವ ಖುಷಿ ಕೆಲವರಲ್ಲಿದೆ.

'ಮಫ್ತಿ' ಚಿತ್ರದಲ್ಲಿ ಮಾಫಿಯಾ ಡಾನ್ 'ಭೈರತಿ ರಣಗಲ್' ಪಾತ್ರ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಅದೇ ಕಾರಣಕ್ಕೆ ಈ ಸಿನಿಮಾ ಪ್ರೀಕ್ವೆಲ್ ಅಥವಾ ಸೀಕ್ವೆಲ್ ಬಗ್ಗೆ ಭಾರೀ ಕುತೂಹಲ ಇದೆ. ನರ್ತನ್ ಮೊದಲ ಸಿನಿಮಾದಲ್ಲೇ ಮ್ಯಾಜಿಕ್ ಮಾಡಿದ್ದರು. ನೆಗೆಟಿವ್ ಶೇಡ್ ರೋಲ್ನಲ್ಲಿ ಶಿವಣ್ಣ ಅಬ್ಬರಿಸಿದ್ದರು. ಕಣ್ಣಲ್ಲೇ ಕೊಲ್ಲುವ ಖಡಕ್ ನಟನೆಯಿಂದ ಮೋಡಿ ಮಾಡಿದ್ದರು. 5 ವರ್ಷಗಳ ನಂತರ 'ಭೈರತಿ ರಣಗಲ್' ಯಾರು? ಆತನ ಹಿನ್ನೆಲೆ ಏನು? ಎನ್ನುವ ಕಥೆಯನ್ನು ಹೇಳಲು ನರ್ತನ್ ಬರ್ತಿದ್ದಾರೆ.

'ವೇದ' ಸಿನಿಮಾ ನಿರ್ಮಿಸಿ ಗೆದ್ದಿದ್ದ 'ಗೀತಾ ಪಿಕ್ಚರ್ಸ್' ಸಂಸ್ಥೆ ಈ ಚಿತ್ರದ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದ 'ಭೈರತಿ ರಣಗಲ್' ಸಂಸ್ಥೆಯ ಮೊದಲ ಸಿನಿಮಾ, ಶಿವಣ್ಣ ನಟನೆಯ 125ನೇ ಸಿನಿಮಾ ಆಗಬೇಕಿತ್ತು. 'ಮಫ್ತಿ' ಸಿನಿಮಾ ಹಿಟ್ ಆಗುತ್ತಿದ್ದಂತೆ ಶಿವಣ್ಣ ಈ ಟೈಟಲ್ ಅನ್ನು ರಿಜಿಸ್ಟರ್ ಮಾಡಿಸಿದ್ದರು. 'ಭೈರತಿ ರಣಗಲ್' ಚೇರ್ ಮೇಲೆ ಖಡಕ್ ಲುಕ್ನಲ್ಲಿ ಕೂತಿರುವ ಪೋಸ್ಟರ್ ಸಮೇತ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಇನ್ನೆರಡು ತಿಂಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ.

ರೋಣಪುರಕ್ಕೆ ಅಂಡರ್ ಕವರ್ ಪೊಲೀಸ್ ಆಫೀಸರ್ ಗಣ ಬರುವುದಕ್ಕೂ ಮುನ್ನ ಏನೆಲ್ಲಾ ಆಗಿತ್ತು ಎನ್ನುವ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಕೊರೋನಾ ಲಾಕ್ಡೌನ್ ಸಮಯದಲ್ಲೇ ಈ ಚಿತ್ರಕ್ಕೆ ನರ್ತನ್ ಕಥೆ ಸಿದ್ಧಪಡಿಸಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ಆರಂಭವಾಗುವುದು ತಡವಾಗಿತ್ತು.


Click it and Unblock the Notifications











