ಸದ್ದಿಲ್ಲದೇ ಮತ್ತೊಂದು ಸಿನಿಮಾ ಚಿತ್ರೀಕರಣ ಮುಗಿಸಿದ ಶಿವಣ್ಣ; ಶೀಘ್ರದಲ್ಲೇ ಸಿನಿಮಾ ತೆರೆಗೆ
ಕನ್ನಡ ಚಿತ್ರರಂಗದ ಬ್ಯುಸಿಯೆಸ್ಟ್ ಕಲಾವಿದ ಶಿವರಾಜ್ಕುಮಾರ್. ವರ್ಷಕ್ಕೆ ಎರಡ್ಮೂರು ಸಿನಿಮಾಗಳಲ್ಲಿ ನಟಿಸುವ ಪ್ರಯತ್ನ ಮಾಡುತ್ತಲೇ ಇರ್ತಾರೆ. ಕ್ಯಾನ್ಸರ್ ಚಿಕಿತ್ಸೆ ಕಾರಣಕ್ಕೆ ಶಿವಣ್ಣ ಕೊಂಚ ಬ್ರೇಕ್ ಪಡೆದಿದ್ದರು. 3 ತಿಂಗಳಲ್ಲಿ ಮತ್ತೆ ಸಿನಿಮಾ ಸೆಟ್ಗೆ ಮರಳಿದ್ದರು. ಮತ್ತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ.
'ಪೆದ್ದಿ' ಚಿತ್ರದ ಗೌರ್ನಾಯ್ಡು ಪಾತ್ರದ ಮೂಲಕ ಶಿವಣ್ಣ ಇತ್ತೀಚೆಗೆ ಪ್ರೇಕ್ಷಕರ ಮುಂದೆ ಬಂದಿದ್ದರು. ಇದೀಗ 'ಡ್ಯಾಡ್' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಿತ್ರ ಸೆಟ್ಟೇರಿತ್ತು. ವರ್ಷ ಕಳೆಯುವ ಮುನ್ನ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಮೈರಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹರೀಶ್ ಪೆದ್ದಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅನಿಲ್ ಕನ್ನೆಗಂಟಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

'ಡ್ಯಾಡ್' ಚಿತ್ರದಲ್ಲಿ ಡಾಕ್ಟರ್ ಪಾತ್ರದಲ್ಲಿ ಶಿವರಾಜ್ಕುಮಾರ್ ನಟಿಸಿದ್ದಾರೆ. ದಶಕಗಳ ಹಿಂದೆ 'ಗಡಿಬಿಡಿ ಕೃಷ್ಣ' ಚಿತ್ರದಲ್ಲಿ ಸ್ಟೆತೊಸ್ಕೋಪ್ ಹಿಡಿದಿದ್ದರು. ಮತ್ತೆ ಈ ಚಿತ್ರದಲ್ಲಿ ಅದೇ ಪಾತ್ರ ನಿಭಾಯಿಸಿದ್ದಾರೆ. ಶರ್ಮಿಳಾ ಮಾಂಡ್ರೆ, ಬೇಬಿ ನಕ್ಷತ್ರ, ಬಾಬು, ಮಲಯಾಳಂ ನಟ ಸೂರಜ್ ವೆಂಜರಮೂಡು ಚಿತ್ರದ ತಾರಾಗಣದಲ್ಲಿದ್ದಾರೆ. ಮೈಸೂರು ಸೇರಿದಂತೆ ನಾನಾ ಭಾಗದಲ್ಲಿ ಚಿತ್ರೀಕರಣ ನಡೆದಿತ್ತು. ಅರ್ಜುನ್ ಜನ್ಯ ಸಂಗೀತ, ಬಿ. ರಾಜಶೇಖರ್ ಚಿತ್ರಕ್ಕಿದೆ.
'ಡ್ಯಾಡ್' ಚಿತ್ರೀಕರಣ ಮುಗೀತು.. ಪ್ರತಿಯೊಂದು "ಆಕ್ಷನ್" ಒಂದು ಕನಸನ್ನು ಹೊತ್ತೊಯ್ದಿತು. ಪ್ರತಿ "ಕಟ್" ಒಂದು ಪಾಠವನ್ನು ಹೊತ್ತುಕೊಂಡಿತು. ಚಿತ್ರೀಕರಣ ಮುಗಿದರೂ ಈ ಪ್ರಯಾಣವು ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ. ಅದ್ಭುತ ಪಾತ್ರವರ್ಗ, ಸಿಬ್ಬಂದಿ ಹಾಗೂ ಈ ಚಿತ್ರವನ್ನು ನಂಬಿದ ಎಲ್ಲರಿಗೂ ನನ್ನ ಕೃತಜ್ಞತೆಗಳು. ನಮ್ಮ ಪ್ರೀತಿಯ ಶಿವಣ್ಣ ಅವರನ್ನು ನಿರ್ದೇಶಿಸುವುದು ನನ್ನ ಸೌಭಾಗ್ಯ. ಕ್ಯಾಮರಾ ರೋಲಿಂಗ್ ನಿಂತಿರಬಹುದು. ಆದರೆ 'ಡ್ಯಾಡ್' ಹೃದಯ ಬಡಿತ ಈಗ ಪ್ರಾರಂಭವಾಗಿದೆ" ಎಂದು ನಿರ್ದೇಶಕರು ಬರೆದುಕೊಂಡಿದ್ದಾರೆ.
ತಂದೆ ಹಾಗೂ ಮಗಳ ಭಾವನಾತ್ಮಕ ಕಥೆ 'ಡ್ಯಾಡ್' ಚಿತ್ರದಲ್ಲಿದೆ. ಬಾಲನಟಿ ನಕ್ಷತ್ರ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾಳೆ. ಶಿವಣ್ಣ ಹಾಗೂ ನಕ್ಷತ್ರ ದೃಶ್ಯಗಳೇ ಚಿತ್ರದ ಹೈಲೆಟ್ ಆಗಿರಲಿದೆ. ಸಖತ್ ಸ್ಟೈಲಿಶ್ ಅವತಾರದಲ್ಲಿ ಸೆಂಚುರಿ ಸ್ಟಾರ್ ನಟಿಸಿದ್ದಾರೆ. ಶರ್ಮಿಳಾ ಮಾಂಡ್ರೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಗೆ ಬರಲಿದೆ.
ಎಮೋಷನ್ ಜೊತೆಗೆ ಥ್ರಿಲ್ಲಿಂಗ್ ಅಂಶಗಳು 'ಡ್ಯಾಡ್' ಚಿತ್ರದಲ್ಲಿದೆ. ಇನ್ನೆರಡು ತಿಂಗಳಲ್ಲಿ ಸಿನಿಮಾ ಬಿಡುಗಡೆ ತಯಾರಿ ನಡೀತಿದೆ. ಮತ್ತೊಂದು ಕಡೆ ಪವನ್ ಒಡೆಯರ್ ನಿರ್ದೇಶನದ 'ಬೇಲ್' ಸಿನಿಮಾ ಸಹ ಶಿವಣ್ಣ ಮುಗಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಈ ಸಿನಿಮಾ ಯಾವಾಗ ಶುರುವಾಯ್ತು, ಯಾವಾಗ ಮುಗೀತು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. 'ಜೈಲರ್' ಬಳಿಕ ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ಶಿವಣ್ಣ ನಟಿಸುತ್ತಿದ್ದಾರೆ. 'ಜೈಲರ್- 2' ಚಿತ್ರೀಕರಣ ಸಹ ಮುಗಿಸಿದ್ದಾರೆ.
ಸದ್ಯ ತೆಲುಗಿನಲ್ಲಿ 'ಗುಮ್ಮಡಿ ನರಸಯ್ಯ' ಬಯೋಪಿಕ್ ಚಿತ್ರದಲ್ಲಿ ಶಿವರಾಜ್ಕುಮಾರ್ ಹೀರೊ ಆಗಿ ನಟಿಸುತ್ತಿದ್ದಾರೆ. ಆಂಧ್ರದ ಮಾದರಿ ರಾಜಕಾರಣಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತಮಿಳಿನಲ್ಲಿ ಇನ್ನು ಹೆಸರಿಡದ ಹೊಸ ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಏಜೆಂಟ್ ಪ್ರಕಾಶ್ ಆಗಿ ಶಿವಣ್ಣ ದರ್ಬಾರ್ ನಡೆಸೋಕೆ ಬರ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಲಿದೆ.


Click it and Unblock the Notifications