"ಕ್ಯಾನ್ಸರ್ ತಗುಲಿದ್ದ ಶಿವಣ್ಣನ ಮೂತ್ರಕೋಶ ತೆಗೆದುಹಾಕಲಾಗಿದೆ"; ವೈದ್ಯರಿಂದ ಮಾಹಿತಿ
ಅನಾರೋಗ್ಯದಿಂದ ಬಳಲುತ್ತಿರುವ ನಟ ಶಿವರಾಜ್ಕುಮಾರ್ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅವರು ಈಗ ಸ್ಥಿರ ಪರಿಸ್ಥಿತಿಯಲ್ಲಿ ಇದ್ದು ಚೇತರಿಸಿಕೊಳ್ಳುತ್ತಿದ್ದಾರೆ ವೈದ್ಯರು ಮಾಹಿತಿ ನೀಡಿದ್ದಾರೆ. ವೈದ್ಯರ ಜೊತೆ ಶಿವರಾಜ್ಕುಮಾರ್ ಪತ್ನಿ ಗೀತಾ ಹಾಗೂ ಭಾವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ಅಮೇರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಿವಣ್ಣ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾ. ಮುರುಗೇಶ ಮನೋಹರನ್ ಅವರ ಮಾರ್ಗದರ್ಶನದಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಶೀಘ್ರದಲ್ಲೇ ಶಿವಣ್ಣ ಚೇತರಿಸಿಕೊಂಡು ವೀಡಿಯೋ ಮಾಡಿ ಅಭಿಮಾನಿಗಳ ಜೊತೆ ಮಾತನಾಡಲಿದ್ದಾರೆ.

ಅಭಿಮಾನಿಗಳು, ಆಪ್ತರು ಮತ್ತು ಮಾಧ್ಯಮಗಳಿಗೆ ಈ ಸಂದರ್ಭದಲ್ಲಿ ತೋರಿಸಿದ ನಿರಂತರ ಬೆಂಬಲ, ಪ್ರಾರ್ಥನೆ ಮತ್ತು ಮೆಚ್ಚುಗೆ ಸಂದೇಶಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹವು ಡಾ. ಶಿವರಾಜ್ಕುಮಾರ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಶಕ್ತಿ ಎಂದು ಗೀತಾ ಶಿವರಾಜ್ಕುಮಾರ್ ಹೇಳಿದ್ದಾರೆ.
ವೈದ್ಯರಾದ ಡಾ. ಮುರುಗೇಶ ಮನೋಹರನ್ ಮಾತನಾಡಿ "ಶಿವಣ್ಣ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಕ್ಯಾನ್ಸರ್ ತಗುಲಿದ್ದ ಅವರ ಮೂತ್ರಕೋಶವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ರೋಗವನ್ನು ಸಂಪೂರ್ಣವಾಗಿ ನಿವಾರಿಸಲಾಗಿದೆ. ಸರ್ಜರಿ ಬಳಿಕ ಅವರದ್ದೇ ಕರಳು ಬಳಸಿ ಕೃತಕ ಮೂತ್ರಕೋಶ ಮತ್ತೆ ಅಳವಡಿಸಲಾಗಿದೆ. ಶಿವಣ್ಣ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಹಳ ಧೈರ್ಯವಾಗಿದ್ದಾರೆ. ಸರ್ಜರಿ ವೇಳೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿತ್ತು" ಎಂದು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್ಕುಮಾರ್ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಪತ್ನಿ ಬೆಂಬಲಕ್ಕೆ ಶಿವಣ್ಣ ನಿಂತಿದ್ದರು. ಶಿವಮೊಗ್ಗದ ಹಲವು ಕಡೆಗಳಲ್ಲಿ ಪ್ರಚಾರ ನಡೆಸಿ ಪತ್ನಿ ಪರ ಮತ ಯಾಚಿಸಿದ್ದರು. ಈ ವೇಳೆ ನಿರಂತರ ಪ್ರಯಾಣದ ಸಮಸ್ಯೆಯಲ್ಲಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಳಿಕ ಆರೋಗ್ಯ ತಪಾಸಣೆ ನಡೆಸಿದಾಗ ಸಮಸ್ಯೆ ಏನು ಎನ್ನುವುದು ಗೊತ್ತಾಗಿತ್ತು.
ಸಮಸ್ಯೆ ಬಗ್ಗೆ ಗೊತ್ತಾಗುತ್ತಿದ್ದಂತೆ ಆತಂಕಗೊಳ್ಳದೇ ಚಿಕಿತ್ಸೆ ಬಗ್ಗೆ ಶಿವಣ್ಣ ಆಲೋಚಿಸಿದ್ದರು. ಕುಟುಂಬಸ್ಥರ ಬೆಂಬಲವೂ ಸಿಕ್ಕಿತ್ತು. ವಿವಿಧ ಹಂತಗಳಲ್ಲಿ ಚಿಕಿತ್ಸೆಗೆ ಸಿದ್ಧರಾಗಿದರು. ಕೊನೆಯದಾಗಿ ಶಸ್ತ್ರಚಿಕಿತ್ಸೆ ನಡೆಸಿ ಕ್ಯಾನ್ಸರ್ ತಗುಲಿದ್ದ ಅವರ ಮೂತ್ರಕೋಶವನ್ನು ವೈದ್ಯರು ತೆಗೆದಿದ್ದಾರೆ. ಇತ್ತೀಚೆಹೆ ಕ್ಯಾನ್ಸರ್ ಸಮಸ್ಯೆ ಬಹಳ ವ್ಯಾಪಕವಾಗುತ್ತಿದೆ. ದೇಹದ ವಿವಿಧ ಭಾಗಗಳಿಗೆ ಕ್ಯಾನ್ಸರ್ ತಗಲುತ್ತಿದೆ. ಅದರಲ್ಲೂ ಬ್ಲಾಡರ್ ಕ್ಯಾನ್ಸರ್ಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ.
ಆರಂಭದಲ್ಲೇ ಸಮಸ್ಯೆಯನ್ನು ಗುರ್ತಿಸಿದರೆ ಮೂತ್ರಾಶಯದ ಕ್ಯಾನ್ಸರ್ ಸಮಸ್ಯೆಯಿಂದ ಹೊರಬಹುದು ಎಂದು ವೈದ್ಯರು ಹೇಳುತ್ತಾರೆ. ಸದ್ಯ ಶಿವಣ್ಣ ಚೇತರಿಸಿಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ವೀಡಿಯೋ ಸಂದೇಶ ಕಳುಹಿಸಲಿದ್ದಾರೆ. ಚಿಕಿತ್ಸೆಯ ಅಪ್ಡೇಟ್ ಕೇಳಿ ಕುಟುಂಬ ಸದಸ್ಯರು, ಆಪ್ತರು, ಅಭಿಮಾನಿಗಳು ನಿರಾಳರಾಗಿದ್ದಾರೆ.
ಶಿವಣ್ಣನಿಗೆ ಆಪ್ತರು, ನಿರ್ಮಾಪಕರು ಆದ ಕೆ. ಪಿ ಶ್ರೀಕಾಂತ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಶಿವಣ್ಣನಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿದೆ. ಆದಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಡೇಟ್ ತಿಳಿದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ದೇವರಿಗೆ ಧನ್ಯವಾದ ತಿಳಿಸುತ್ತಿದ್ದಾರೆ.
ಡಿಸೆಂಬರ್ 18ರಂದು ಪತ್ನಿ ಹಾಗೂ ಪುತ್ರಿ ಜೊತೆ ಶಿವಣ್ಣ ಅಮೆರಿಕಾಗೆ ತೆರಳಿಸಿದ್ದರು. ಇತ್ತೀಚೆಗೆ ಮಧು ಬಂಗಾರಪ್ಪ ಅವರನ್ನು ಸೇರಿಕೊಂಡಿದ್ದರು. ಇನ್ನು 30 ದಿನಗಳ ಕಾಲ ಅಲ್ಲೇ ಉಳಿಯಲಿದ್ದಾರೆ. ಜನವರಿ 25ರಂದು ಸೆಂಚುರಿ ಸ್ಟಾರ್ ಮತ್ತೆ ಭಾರತಕ್ಕೆ ವಾಪಸ್ ಬರಲಿದ್ದಾರೆ. ಈಗಾಗಲೇ '45' ಸಿನಿಮಾ ಡಬ್ಬಿಂಗ್ ಸಹ ಶಿವಣ್ಣ ಮುಗಿಸಿದ್ದಾರೆ.
ಇನ್ನು ಮಧ್ಯರಾತ್ರಿಯಿಂದಲೇ 'ಭೈರತಿ ರಣಗಲ್' ಸಿನಿಮಾ ಓಟಿಟಿಗೆ ಬಂದು ಸದ್ದು ಮಾಡ್ತಿದೆ. ಸಾಲು ಸಾಲು ಸಿನಿಮಾಗಳನ್ನು ಶಿವರಾಜ್ಕುಮಾರ್ ಒಪ್ಪಿಕೊಂಡಿದ್ದಾರೆ. ಆದಷ್ಟು ಬೇಗ ಮತ್ತೆ ಸಿನಿಮಾ ಚಿತ್ರೀಕರಣಕ್ಕೆ ಮರಳಲಿದ್ದಾರೆ.


Click it and Unblock the Notifications











