ಅಭಿಮಾನಿಗಳ ಅಪಸ್ವರಕ್ಕೆ ಮಂಗಳ ಹಾಡಿದ ಶಿವಣ್ಣ
ಇತ್ತೀಚಿಗೆ, ಅಂದರೆ 26 ಜುಲೈ 2012ಕ್ಕೆ ಮುಹೂರ್ತ ಆಚರಿಸಿಕೊಂಡ ಶಿವರಾಜ್ ಕುಮಾರ್ ನಾಯತ್ವದ 'ಕಡ್ಡಿಪುಡಿ' ಚಿತ್ರದ ಶೀರ್ಷಿಕೆ ಬಗ್ಗೆ ಶಿವಣ್ಣರ ಅಭಿಮಾನಿಗಳು ಅಪಸ್ವರವೆತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕನಾಗಿರುವ ಚಿತ್ರಕ್ಕೆ ಇಂತಹದೊಂದು ಹೆಸರು ಸರಿಯಲ್ಲ ಎಂಬುದು ಅಭಿಮಾನಿಗಳ ಅಳಲು. ಕಡ್ಡಿಪುಡಿ ಮಾದಕ ದ್ರವ್ಯವೊಂದರ ಹೆಸರು ಎಂಬುದು ಅಭಿಮಾನಿಗಳ ವಿವರಣೆ.
ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬರಲಿರುವ ಶಿವಣ್ಣರ ಹೊಸ ಚಿತ್ರವೇ ಈ ಕಡ್ಡಿಪುಡಿ. ಅಭಿಮಾನಿಗಳ ಕಳವಳ ಸ್ವತಃ ಶಿವಣ್ಣರ ಕಿವಿಗೇ ಬಿದ್ದಿದೆ. ಆದರೆ ಈ ಬಗ್ಗೆ ಶಿವಣ್ಣ ಬೇಸರಿಸಿಕೊಂಡಿಲ್ಲ. ಬದಲಿಗೆ, "ಕಡ್ಡಿಪುಡಿ' ಶೀರ್ಷಿಕೆಯಿದ್ದರೆ ಏನೂ ತೊಂದರೆಯಿಲ್ಲ. ಚಿತ್ರದಲ್ಲಿ ನನ್ನದು 'ಕಡ್ಡಿಪುಡಿ ರಂಗಮ್ಮ' ಹೆಸರಿನವರ ಮೊಮ್ಮಗನ ಪಾತ್ರ. ಪಾತ್ರದ ನಿಜ ನಾಮಧೇಯ ಆನಂದ" ಎಂದಿದ್ದಾರೆ.
"ಚಿತ್ರವು ಭೂಗತ ಲೋಕಕ್ಕೆ ಸಂಬಂಧಿಸಿದ್ದು. ಹೀಗಾಗಿ ಕಡ್ಡಿಪುಡಿ ರಂಗಮ್ಮನ ಮಗನಾದ ನಾನು ಫೀಲ್ಡಲ್ಲಿ 'ಕಡ್ಡಿಪುಡಿ' ಎಂದೇ ಗುರುತಿಸಿಕೊಳ್ಳುತ್ತೇನೆ. ಇದು ಅಜ್ಜಿಯಿಂದ ನನ್ನ ಪಾತ್ರಕ್ಕೆ ಬಂದ ಬಳುವಳಿ. ಶೀರ್ಷಿಕೆಯಲ್ಲಿ ಯಾವದೇ ತಪ್ಪು ನನಗೆ ಕಾಣುತ್ತಿಲ್ಲ. ಇದೇ ಇರಲಿ ಬಿಡಿ. ಇದೊಂಥರಾ ಆಕರ್ಷಕ ಶೀರ್ಷಿಕೆ, ಚೆನ್ನಾಗಿಯೇ ಇದೆ.
ವಿಭಿನ್ನ ಕಥೆ, ಶೀರ್ಷಿಕೆ ಹೊಂದಿರುವ ಈ ಚಿತ್ರದಲ್ಲಿ ಅಭಿನಯಿಸುವ ಮೂಲಕ ಮುಂದಕ್ಕೆ ಹೊಸ ಹೆಜ್ಜೆ ಇಡುತ್ತಿದ್ದೇನೆ, ದಯವಿಟ್ಟು ಹಿಂದಡಿಯಿಡುವಂತೆ ಮಾಡಬೇಡಿ" ಎಂದು ತಮ್ಮ ಅಭಿಮಾನಿಗಳಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ. ಸ್ವಯಂವರ ಚಂದ್ರು ನಿರ್ಮಾಣದ ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತವಿದೆ. ಸೂರಿ ಚಿತ್ರದ ಖಾಯಂ ಕಲಾವಿದ ರಂಗಾಯಣ ರಘು ಇದರಲ್ಲೂ ಇದ್ದಾರೆ.
"ನಾನು ಏಳನೇ ತರಗತಿಯಲ್ಲಿದ್ದಾಗಲೇ ಶಿವಣ್ಣರ ಮೊದಲ ಚಿತ್ರ ಆನಂದ್ ನೋಡಿ ಅವರ ಅಪ್ಪಟ ಅಭಿಮಾನಿಯಾದವನು. ಹೀಗಾಗಿ ಶಿವಣ್ಣರ ಮೊದಲ ಚಿತ್ರದ ಹೆಸರು 'ಆನಂದ್' ಎನ್ನುವುದನ್ನೇ ಈ ಕಡ್ಡಿಪುಡಿ ಚಿತ್ರದಲ್ಲಿ ಅವರ ಪಾತ್ರಕ್ಕೆ ಇಟ್ಟಿದ್ದೇನೆ" ಎಂದು ತಮಗಿರುವ ಶಿವಣ್ಣರ ಮೇಲಿನ ಅಭಿಮಾನವನ್ನು ಮಾತು-ಕೃತಿಯ ಮೂಲಕ ನಿರ್ದೇಶಕ ಸೂರಿ ಹೇಳಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











