ಅಪ್ಪು ಫೋಟೊ ಹಿಡಿದು ಗುಂಪಲ್ಲಿ ನುಗ್ಗಿ ಬಂದ ಅಭಿಮಾನಿ; ಕೆಂಡಾಮಂಡಲವಾಗಿ ಶಿವಣ್ಣ ಆಕ್ರೋಶ!
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹಾಗೂ ಡ್ಯಾನ್ಸ್ ಕಿಂಗ್ ಪ್ರಭುದೇವ ನಟನೆಯ 'ಕರಟಕ ದಮನಕ' ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಯೋಗರಾಜ್ ಭಟ್ ನಿರ್ದೇಶನದ ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಣ ಮಾಡಿದ್ದಾರೆ. ಚಿತ್ರಕ್ಕೆ ನೋಡಿ ಮೆಚ್ಚಿಕೊಳ್ಳುತ್ತಿರುವ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು ಶಿವಣ್ಣ ರಾಜ್ಯಾದ್ಯಂತ ವಿಜಯಯಾತ್ರೆ ಕೈಗೊಂಡಿದ್ದಾರೆ.
ಸೋಮವಾರ(ಮಾರ್ಚ್ 11) ಚಿತ್ರದುರ್ಗ, ದಾವಣಗೆರೆಯಿಂದ ಶುರುವಾದ 'ಕರಟಕ ದಮನಕ' ವಿಜಯಯಾತ್ರೆ ಹೊಸಪೇಟೆ, ಬಳ್ಳಾರಿಯಲ್ಲಿ ಮುಂದುವರೆಯಿತು. ಚಿತ್ರದುರ್ಗದ ಬಸವೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ಶಿವಣ್ಣ ಧನ್ಯವಾದ ತಿಳಿಸಿದರು. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಬಳಿಕ ದಾವಣಗೆರೆ ಕಡೆ, ಬಳ್ಳಾರಿ ಕಡೆ ಶಿವಣ್ಣ ಪಯಣ ಮುಂದುವರೆಯಿತು.

ಸಂಜೆ ವೇಳೆಗೆ 'ಕರಟಕ ದಮನಕ' ಶಿವಣ್ಣನ ವಿಜಯಯಾತ್ರೆ ಬಳ್ಳಾರಿ ತಲುಪಿತು. ಬಳ್ಳಾರಿ ರಾಯಲ್ ಸರ್ಕಲ್ನಲ್ಲಿರುವ ಗಂಗಾ ಚಿತ್ರಮಂದಿರದಲ್ಲಿ ಶಿವಣ್ಣನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ ಕೆಲವೊತ್ತು ಗೊಂದಲದ ವಾತಾರವರಣ ನಿರ್ಮಾಣವಾಗಿತ್ತು. ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಡುವಂತಾಯಿತು.
ಅಭಿಮಾನಿಗಳ ನೂಕುನುಗ್ಗಲು ಹೆಚ್ಚಾದಾಗ ಶಿವರಾಜ್ಕುಮಾರ್ ಕೂಡ ಗರಂ ಆದರು. ಇದೇ ಸಮಯದಲ್ಲಿ ಅಭಿಮಾನಿಯೊಬ್ಬ ಪುನೀತ್ ರಾಜ್ಕುಮಾರ್ ಫೋಟೊ ಹಿಡಿದು ಗುಂಪಿನಲ್ಲಿ ಶಿವಣ್ಣನ ಬಳಿ ನುಗ್ಗಿ ಬರಲು ಯತ್ನಿಸಿದ್ದಾನೆ. ಆಗ ಶಿವಣ್ಣ ತಾಳ್ಮೆ ಕಳೆದುಕೊಂಡರು. ಆತನ ಮೇಲೆ ಆಕ್ರೋಶಗೊಂಡರು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು ಶಿವಣ್ಣನನ್ನು ಅಲ್ಲಿಂದ ಕರೆದೊಯ್ದರು. ಸದ್ಯ ಈ ವಿಡಿಯೀ ವೈರಲ್ ಆಗುತ್ತಿದೆ.
ಬೆಳಗ್ಗೆಯಿಂದ ವಿವಿಧ ಜಿಲ್ಲೆಗಳಲ್ಲಿ ವಿಜಯಯಾತ್ರೆ ನಡೆಸಿ ಶಿವಣ್ಣ ಬಸವಳಿದಿದ್ದರು. ನೂಕುನುಗ್ಗಲು ಉಂಟಾಗಿ ಶಿವಣ್ಣ ತಾಳ್ಮೆ ಕಳೆದುಕೊಂಡಿದ್ದಾರೆ. ಅಂತಹ ಸಮಯದಲ್ಲಿ ಅಭಿಮಾನಿಗಳು ಕೂಡ ಸ್ವಲ್ಪ ತಾಳ್ಮೆಯಿಂದ ವರ್ತಿಸಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಉತ್ತರ ಕರ್ನಾಟಕ ಜನರ ಹಳ್ಳಿ ಜನರ ನೋವು ನಲಿವಿನ ಕಥೆ 'ಕರಟಕ ದಮನಕ' ಚಿತ್ರದಲ್ಲಿದೆ. ಇದೇ ಮೊದಲ ಬಾರಿಗೆ ಶಿವಣ್ಣ- ಪ್ರಭುದೇವ ಒಟ್ಟಿಗೆ ನಟಿಸಿದ್ದಾರೆ.
ಬಹಳ ದಿನಗಳಿಂದ ಯೋಗರಾಜ್ ಭಟ್ರ ನಿರ್ದೇಶನದಲ್ಲಿ ಶಿವರಾಜ್ಕುಮಾರ್ ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿತ್ತು. 'ಕರಟಕ ದಮನಕ' ಚಿತ್ರದಿಂದ ಅದು ನೆರವೇರಿದೆ. ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಆರ್ಮುಗ ರವಿಶಂಕರ್, ರಂಗಾಯಣ ರಘು, ತಣಿಕೇಲ ಭರಣಿ, ಬಿರಾದಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ವಿರೂಪಾಕ್ಷಿ(ಶಿವರಾಜ್ಕುಮಾರ್) ಹಾಗೂ ಬಾಲರಾಜು(ಪ್ರಭುದೇವ) ಎಂಬುವ ಇಬ್ಬರು ಚಾಲಾಕಿ ಕಳ್ಳರು ಜೈಲು ಸೇರಿರುತ್ತಾರೆ. ಅಲ್ಲಿ ಜೈಲರ್ ರುದ್ರೇಶ್ ಇಬ್ಬರಿಗೂ ಒಂದು ಕೆಲಸ ಒಪ್ಪಿಸುವುದರೊಂದಿಗೆ 'ಕರಟಕ ದಮನಕ' ಚಿತ್ರದ ಅಸಲಿ ಕಥೆ ಶುರುವಾಗುತ್ತದೆ. ನಂದಿಕೋಲೂರು ಎನ್ನುವ ಹಳ್ಳಿಗೆ ಇವರಿಬ್ಬರು ಹೋಗುವುದು ಯಾಕೆ? ಆ ಹಳ್ಳಿಯ ಹಿನ್ನೆಲೆ ಏನು? ಇವರಿಬ್ಬರ ಆಗಮನದಿಂದ ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಮುಂದಿನ ಕಥೆ.
ಶಿವಣ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅರ್ಜುನ್ ಜನ್ಯಾ ನಿರ್ದೇಶನದ '45' ಚಿತ್ರದ ಮೂವರು ಹೀರೊಗಳಲ್ಲಿ ಒಬ್ಬರಾಗಿದ್ದಾರೆ. ಇನ್ನು ತಮ್ಮದೇ ಬ್ಯಾನರ್ನಲ್ಲಿ 'ಭೈರತಿ ರಣಗಲ್' ಆಗಿ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. 'ಮಫ್ತಿ' ಪ್ರೀಕ್ವೆಲ್ ಇದು. ನರ್ತನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ತಮಿಳು, ತೆಲುಗು ಸಿನಿಮಾಗಳಲ್ಲಿ ಕೂಡ ಸೆಂಚುರಿ ಸ್ಟಾರ್ ನಟಿಸಲು ಮನಸ್ಸು ಮಾಡಿದ್ದಾರೆ.


Click it and Unblock the Notifications











