ಶಿವರಾಜ್ಕುಮಾರ್ ಹಾಗೂ ದರ್ಶನ್ ಪುತ್ರ ವಿನೀಶ್ ಭೇಟಿ; ವೀಡಿಯೋ ವೈರಲ್
ನಟ ಶಿವರಾಜ್ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆಯ ಡಿಕೆಡಿ ಶೋ ಮೂಲಕ ಮತ್ತೆ ಮನೆ ಮನೆಗೆ ಬರ್ತಿದ್ದಾರೆ. ಶಿವಣ್ಣ ನಟನೆಯ '45' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. 'ಡ್ಯಾಡ್' ಚಿತ್ರದ ಚಿತ್ರೀಕರಣ ನಡೀತಿದೆ. ಇತ್ತೀಚೆಗೆ ಸೆಟ್ನಲ್ಲಿ ದರ್ಶನ್ ಪುತ್ರ ವಿನೀಶ್ ಭೇಟಿ ಆಗಿದ್ದಾರೆ.
ಕುಂಬಳಗೋಡಿನ ಬಿಜಿಎಸ್ ಕ್ರಿಕೆಟ್ ಗ್ರೌಂಡ್ನಲ್ಲಿ 'ಡ್ಯಾಡ್' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅದೇ ಶಾಲೆಯಲ್ಲಿ ವಿನೀಶ್ 10ನೇ ತರಗತಿ ಓದಿ ಮುಗಿಸಿದ್ದಾರೆ. ದಿಢೀರನೆ ಸೆಟ್ನಲ್ಲಿ ವಿನೀಶ್ ನೋಡಿ ಶಿವಣ್ಣ ಕುಶಲೋಪರಿ ವಿಚಾರಿಸಿದ್ದಾರೆ. ವಿನೀಶ್ ಕೈ ಕುಲುಕಿ, ಬೆನ್ನು ತಟ್ಟಿ ಶಿವಣ್ಣ ಮಾತನಾಡಿಸಿದ್ದಾರೆ. ಆ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

"ಇಲ್ಲಾ ಓದಿದ್ದು" ಎಂದು ಶಿವಣ್ಣ ಕೇಳಿದ್ದು. ಅದಕ್ಕೆ ವಿನೀಶ್ ಪ್ರತಿಕ್ರಿಯಿಸಿ "ಹೌದು ಇಲ್ಲೇ ಓದಿದ್ದು. 10ನೇ ತರಗತಿ ಮುಗೀತು. ಪಿಯುಸಿ ಓದುತ್ತಿದ್ದೇನೆ" ಎಂದಿದ್ದಾನೆ. ಅಮ್ಮ ಚೆನ್ನಾಗಿದ್ದಾರಾ ಎಂದು ಕೇಳಿದ್ದಕ್ಕೆ "ಅವ್ರು ಚೆನ್ನಾಗಿದ್ದಾರೆ" ಎಂದು ದರ್ಶನ್ ಪುತ್ರ ವಿನೀಶ್ ಹೇಳಿರುವುದನ್ನು ನೋಡಬಹುದು.
ಮಗನನ್ನು ಕೂಡ ಚಿತ್ರರಂಗಕ್ಕೆ ಪರಿಚಯಿಸುವುದಾಗಿ ದರ್ಶನ್ ಹೇಳಿದ್ದರು. ಈಗಾಗಲೇ 'ಐರಾವತ' ಹಾಗೂ 'ಯಜಮಾನ' ಚಿತ್ರಗಳ ಸಣ್ಣ ಸಣ್ಣ ಝಲಕ್ನಲ್ಲಿ ವಿನೀಶ್ ತೆರೆಮೇಲೆ ಕಾಣಿಸಿಕೊಂಡಿದ್ದಾನೆ. ಅಪ್ಪನ ರೀತಿ ಕುದುರೆ ಸವಾರಿ ಕೂಡ ಕಲಿಯುತ್ತಿದ್ದಾನೆ. ವಿನೀಶ್ ಕುದುರೆ ಸವಾರಿ ವೀಡಿಯೋ ಪದೇ ಪದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ 3 ತಿಂಗಳು ಕಳೆದಿದೆ. ಸದ್ಯಕ್ಕೆ ಜಾಮೀನು ಸಿಗುವುದು ಕಷ್ಟ ಎನ್ನುವಂತಾಗಿದೆ. ಹಾಗಾಗಿ ಮುಂದೇನಾಗುತ್ತೋ ಕಾದು ನೋಡೋಣ ಎಂದು ದರ್ಶನ್ ಪತ್ನಿ ಕೂಡ ದೇವರ ಮೇಲೆ ಭಾರ ಹಾಕಿದ್ದಾರೆ. ಶೀಘ್ರದಲ್ಲೇ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.
ಪ್ರಕರಣ ಸಂಬಂಧ ಕಳೆದ ವರ್ಷ ದರ್ಶನ್ ಬಂಧನವಾಗಿತ್ತು. ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿದ್ದ ದರ್ಶನ್ 4 ತಿಂಗಳು ಜೈಲಿನಲ್ಲಿ ಇದ್ದರು. ಬಳಿಕ ಜಮೀನು ಪಡೆದು ಹೊರಬಂದಿದ್ದರು. ಆದರೆ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದಾಗಿ ಮತ್ತೆ ಜೈಲು ಸೇರುವಂತಾಗಿದೆ. ಇತ್ತೀಚೆಗೆ ಆರೋಪಿಗಳ ಮೇಲೆ ದೋಷಾರೋಪ ಹೊರಿಸಲಾಗಿತ್ತು. ನಮ್ಮ ಮೇಲಿನ ಆರೋಪಗಳೆಲ್ಲಾ ಸುಳ್ಳು ಎಂದು ಆರೋಪಿಗಳು ಹೇಳಿರುವುದರಿಂದ ಮುಂದೆ ಸಾಕ್ಷಿಗಳ ವಿಚಾರಣೆ ನಡೆಯಲಿದೆ.
ದರ್ಶನ್ ಜೈಲಿನಲ್ಲಿ ಇದ್ದರೂ 'ಡೆವಿಲ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜಾಮೀನು ಪಡೆದು ಹೊರಬಂದಿದ್ದ ದರ್ಶನ್ ದೇಶ ವಿದೇಶ ಸುತ್ತಿ ಸಿನಿಮಾ ಚಿತ್ರೀಕರಣ ಮುಗಿಸಿದ್ದರು. ಆದರೆ ಬಿಡುಗಡೆ ಹೊತ್ತಿಗೆ ಜೈಲು ಸೇರುವಂತಾಗಿತ್ತು. ಉದಯ್ಪುರ್ ಹಾಗೂ ಬ್ಯಾಂಕಾಕ್ನಲ್ಲಿ ನಡೆದ 'ಡೆವಿಲ್' ಸಿನಿಮಾ ಚಿತ್ರೀಕರಣಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಕೂಡ ಹೋಗಿದ್ದರು.


Click it and Unblock the Notifications











