ಬನಶಂಕರಿ ಸನ್ನಿಧಿಯಲ್ಲಿ ಶಿವಣ್ಣರ 'ಕಡ್ಡಿಪುಡಿ' ಶುರು
ದುನಿಯಾ ಸೂರಿ ನಿರ್ದೇಶನ ಹಾಗೂ ಶಿವರಾಜ್ ಕುಮಾರ್ ನಾಯಕತ್ವದ 'ಕಡ್ಡಿಪುಡಿ'ಗೆ ಇಂದು (ಜುಲೈ 26, 2012) ಮುಹೂರ್ತ ನಡೆಯಿತು. ಸ್ವಯಂವರ ಚಂದ್ರು ನಿರ್ಮಾಣದ ಈ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಹ್ಯಾಟ್ರಿಕ್ ಹೀರೋಯಿನ್ ರಾಧಿಕಾ ಪಂಡಿತ್ ನಟಿಸಲಿದ್ದಾರೆ. ಬನಶಂಕರಿ ದೇವಸ್ಥಾನದಲ್ಲಿ ಇಂದು ಕಡ್ಡಿಪುಡಿಗೆ ಭರ್ಜರಿ ಮುಹೂರ್ತ ನೆರವೇರಿತು.
ಗೀತಾ ಶಿವಾರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಘವೇಂದ್ರ ರಾಜ್, ಕ್ರೇಜಿಸ್ಟಾರ್ ರವಿಚಂದ್ರನ್, ದುನಿಯಾ ವಿಜಯ್, ವಿಜಯ್ ರಾಘವೇಂದ್ರ, ಶ್ರೀನಗರ ಕಿಟ್ಟಿ, ಪಯಣ ರವಿಶಂಕರ್, ತಾರಾ, ಕೆ ಮಂಜು, ಗುರುಪ್ರಸಾದ್, ಜಯಂತ್ ಕಾಯ್ಕಿಣಿ ಮುಂತಾದವರು ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಿರ್ದೇಶಕ ದುನಿಯಾ ಸೂರಿ ಕಳೆದ ಭಾನುವಾರ ಭಾರೀ ಜನದಟ್ಟಣೆಯ 'ಗಾಂಧಿ ಬಜಾರ್'ನಲ್ಲಿ ಈ ಚಿತ್ರದ ಫೋಟೋ ಶೂಟ್ ಮಾಡಿದ್ದರು. ಆಗಲೇ ಈ ಚಿತ್ರದ ಕಥೆಯ ಬಗ್ಗೆ ಊಹಾಪೋಹ ಹಬ್ಬಿಬಿಟ್ಟಿತ್ತು. ಇಂದಿನ ಪ್ರೆಸ್ ಮೀಟ್ ನಲ್ಲಿ ನಿರ್ದೇಶಕ ಸೂರಿಯವರು ಮಾತನಾಡಿದ ಮೇಲೆ ಚಿತ್ರದ ನಿಜವಾದ ಕಥೆ ಹಾಗೂ ಮಾಹಿತಿ ದೊರೆತಿದೆ.
"ಕಡ್ಡಿಪುಡಿ ಚಿತ್ರದ ಕಥೆ ರೌಡಿಸಂ ಸಬ್ಜೆಕ್ಟ್ ಹೊಂದಿದೆ. ಆದರೆ ಇದು ಹತ್ತರಲ್ಲಿ ಹನ್ನೊಂದು ಎಂಬಂತಹ ರೌಡಿಸಂ ಚಿತ್ರವಲ್ಲ. ಇಲ್ಲಿ 'ಹೊಡಿ-ಬಡಿ' ಎನ್ನುವುದಕ್ಕಿಂತ ಹೆಚ್ಚಾಗಿ ಕೌಟುಂಬಿಕ ಸಂಬಂಧದ ಬಗ್ಗೆ ಒತ್ತುನೀಡಲಾಗಿದೆ. ಇದೊಂದು ಪಕ್ಕಾ ಮಾಸ್ ಕಥೆ ಹೊಂದಿರುವ ಚಿತ್ರ. ರೌಡಿಸಂ ಹಾಗೂ ಕೌಟುಂಬಿಕ ಸಂಬಂಧಗಳ ಮಿಶ್ರಣ ಈ ಚಿತ್ರ" ಎನ್ನಬಹುದು ಎಂದಿದ್ದಾರೆ ಸೂರಿ.
ಇನ್ನು ಚಿತ್ರದ ನಾಯಕ ಶಿವರಾಜ್ ಕುಮಾರ್ "ಕಡ್ಡಿಪುಡಿ ಚಿತ್ರ ರೌಡಿಸಂ ಕಥೆ ಹೊಂದಿದ್ದರೂ ಬೇರೆಯದೇ ರೀತಿಯ ಚಿತ್ರಕಥೆ ಹೊಂದಿದೆ. ಇದೊಂದು ಪಕ್ಕಾ ಕೌಟುಂಬಿಕ ಮೌಲ್ಯವನ್ನು ಎತ್ತಿ ಹಿಡಿಯುವ ಚಿತ್ರವಾಗಲಿದೆ. ಕಡ್ಡಿಪುಡಿ ಎಂದರೇನು, ಕಥೆ ಏನು ಎಂಬುದನ್ನೆಲ್ಲಾ ನಿರ್ದೇಶಕ ಸೂರಿಯವರೇ ನನಗಿಂತ ಚೆನ್ನಾಗಿ ಹೇಳುತ್ತಾರೆ. ನನಗೆ ಸೂರಿ ಚಿತ್ರದ ಮೇಕಿಂಗ್ ಬಗ್ಗೆ ಸಂಪೂರ್ಣ ಭರವಸೆಯಿದೆ" ಎಂದಿದ್ದಾರೆ.
ಚಿತ್ರ ಖಂಡಿತವಾಗಿಯೂ ಚೆನ್ನಾಗಿ ಮೂಡಿಬರಲಿದೆ ಎಂದು ಭರವಸೆ ಕೊಟ್ಟರು ನಿರ್ದೇಶಕ ಸೂರಿ. ನಾಯಕಿ ರಾಧಿಕಾ ಪಂಡಿತ್, "ಮೊದಲ ಬಾರಿಗೆ ಹಿರಿಯ ನಟ ಶಿವಣ್ಣನ ಜೊತೆ ನಟಿಸುತ್ತಿರುವುದಕ್ಕೆ ಬಹಳ ಖುಷಿಯಾಗಿದೆ" ಎಂದರು. ವಿ ಹರಿಕೃಷ್ಣ ಈ ಚಿತ್ರಕ್ಕೆ ವಿಭಿನ್ನ ಹಾಡುಗಳನ್ನು ನೀಡುವುದಾಗಿ ಹೇಳಿದರು. ಚಿತ್ರದಲ್ಲಿ ಪಾತ್ರ ಮಾಡುತ್ತಿರುವ ರಂಗಾಯಣ ರಘು ಹಾಗೂ ಅವಿನಾಶ್ ತಮ್ಮ ಪಾತ್ರದ ಬಗ್ಗೆ ಖುಷಿ ಜೊತೆಗೆ ಚಿತ್ರದ ಬಗ್ಗೆ ಭರವಸೆ ವ್ಯಕ್ತಪಡಿಸಿದರು. (ಒನ್ ಇಂಡಿಯಾ ಕನ್ನಡ)


Click it and Unblock the Notifications











