ಹ್ಯಾಟ್ರಿಕ್ ಜೋಡಿ, ಸೂರಿ 'ಕಡ್ಡಿಪುಡಿ' ಮುಹೂರ್ತ
ಸ್ವಯಂವರ ಚಂದ್ರು ನಿರ್ಮಾಣ ಹಾಗೂ ಶಿವರಾಜ್ ಕುಮಾರ್, ದುನಿಯಾ ಸೂರಿ ನಿರ್ದೇಶನದ 'ಕಡ್ಡಿಪುಡಿ' ಶೀರ್ಷಿಕೆಯ ಚಿತ್ರ ನಾಳೆ, ಅಂದರೆ ಜುಲೈ 26, 2012 ರಂದು ಬನಶಂಕರಿ ದೇವಸ್ಥಾನದಲ್ಲಿ ನೆರವೇರಲಿದೆ. ಭಾರೀ ಜನದಟ್ಟಣೆಯ 'ಗಾಂಧಿ ಬಜಾರ್'ನಲ್ಲಿ ಕಳೆದ ಭಾನುವಾರ ನಿರ್ದೇಶಕ ದುನಿಯಾ ಸೂರಿ ಈ ಚಿತ್ರದ ಫೋಟೋ ಶೂಟ್ ಮಾಡಿರುವುದು ವಿಶೇಷವಾಗಿತ್ತು.
ಕಡ್ಡಿಪುಡಿ ಚಿತ್ರದ ಕಥೆ ರೌಡಿಸಂ ಬೇಸ್ಡ್ ಎನ್ನಲಾಗಿದೆ. ದೊರೆತ ಮಾಹಿತಿ ಪ್ರಕಾರ, ಈ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಪಾತ್ರದ ಹೆಸರು ಆನಂದ, ಆದರೆ ಕರೆಯುವುದು 'ಕಡ್ಡಿಪುಡಿ'. ಇನ್ನು ರಾಧಿಕಾ ಪಂಡಿತ್ ಪಾತ್ರದ ಹೆಸರು ಉಮಾ, ಪಕ್ಕಾ ಲೋಕಲ್ ಹೆಂಗಸಿನ ಪಾತ್ರ. ಸೂರಿ ಮತ್ತೆ ರೌಡಿಸಂ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಆದರೆ ಶಿವಣ್ಣರಿಗೆ ಹೊಸ ಇಮೇಜ್ ಸೃಷ್ಟಿಯಾಗಲಿದೆ ಎನ್ನಲಾಗುತ್ತಿದೆ.
ಫೋಟೋ ಶೂಟ್ ಗಾಗಿ ಕಳೆದ ಭಾನುವಾರ ಸಂಜೆ ವೇಳೆಗೆ ಗಾಂಧಿ ಬಜಾರ್ ಪ್ರತ್ಯಕ್ಷವಾಗಿದ್ದರು ಶಿವಣ್ಣ ಮತ್ತು ರಾಧಿಕಾ ಪಂಡಿತ್ ಜೋಡಿ. ಸಿಕ್ಕಾಪಟ್ಟೆ ತರಕಾರಿ ಖರೀದಿಸುತ್ತಿದ್ದ ರಾಧಿಕಾ ಸೀರೆಯುಟ್ಟಿದ್ದರು, ಮಲ್ಲಿಗೆ ಮುಡಿದಿದ್ದರು. ನಂತರ, ಪಕ್ಕದಲ್ಲೇ ಇದ್ದ ವಿದ್ಯಾರ್ಥಿ ಭವನದ ಮಸಾಲೆ ದೋಸೆಯನ್ನು ಈ ಇಬ್ಬರೂ ತಿಂದರು. ಅಷ್ಟರಲ್ಲೇ ಇಬ್ಬರ ಕೈಗೂ ಕೋಳ ಹಾಕಲಾಯಿತು.
ಜೋಗಯ್ಯ ಚಿತ್ರದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಯಾವ ಚಿತ್ರವೂ ಪ್ರೇಕ್ಷಕರ ಮುಂದೆ ಬಂದಿಲ್ಲ. ಜೋಗಯ್ಯ ನಿರೀಕ್ಷಿಸಿದ ಯಶಸ್ಸು ಕೊಡಲು ವಿಫಲವಾದ ಹಿನ್ನೆಲೆಯಲ್ಲಿ ಈಗ ಬಿಡುಗಡೆಗೆ ಕಾದಿರುವ ಓಂ ಪ್ರಕಾಶ್ ರಾವ್ ನಿರ್ದೇಶನದ 'ಶಿವ' ಚಿತ್ರದ ಮೇಲೆ ಭಾರೀ ನಿರೀಕ್ಷೆ ಮೂಡಿದೆ. ಆ ಚಿತ್ರ ಬಿಡುಗಡೆಗೂ ಮುನ್ನವೇ ಶಿವಣ್ಣರ ಇನ್ನೊಂದು ಚಿತ್ರ 'ಕಡ್ಡಿಪುಡಿ' ಮುಹೂರ್ತ ನಡೆಯುತ್ತಿದೆ.
ಈ ಚಿತ್ರದಲ್ಲಿ ಮೊದಲು ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಹ್ಯಾಟ್ರಿಕ್ ಹಿರೋಯಿನ್ ರಾಧಿಕಾ ಪಂಡಿತ್ ಒಟ್ಟಾಗಿ ಅಭಿನಯಿಸಲಿದ್ದಾರೆ. ಇತ್ತೀಚಿಗಷ್ಟೇ ಯೋಗರಾಜ್ ಭಟ್ಟರ ಡ್ರಾಮಾ ಮುಗಿಸಿ ಕಡ್ಡಿಪುಡಿಗೆ ಸಿದ್ಧವಾಗಿರುವ ರಾಧಿಕಾರ 'ಅದ್ದೂರಿ', ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಂದಹಾಗೆ, ನಾಳೆ ಮುಹೂರ್ತ ಕಾಣಲಿರುವ ಕಡ್ಡಿಪುಡಿ ಶೂಟಿಂಗ್ ಆಗಸ್ಟ್ 15, 2012ರ ನಂತರ ಪ್ರಾರಂಭ. (ಒನ್ ಇಂಡಿಯಾ ಕನ್ನಡ)


Click it and Unblock the Notifications











