"ಅಣ್ಣಾವ್ರು ತೆರೆಮೇಲೆ ಸಿಗರೇಟ್, ಮದ್ಯ ಸೇವಿಸುತ್ತಿರಲಿಲ್ಲ.. ನೀವು ಆ ನಿಯಮ ಮೀರಿದ್ದು ಯಾಕೆ?": ಶಿವಣ್ಣನ ಉತ್ತರ ಕೇಳಿ
ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬಾಕ್ಸಾಫೀಸ್ನಲ್ಲಿ 3ನೇ ವಾರವೂ ಸದ್ದು ಮಾಡ್ತಿದೆ. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿ ಶಿವಣ್ಣ ಕಮಾಲ್ ಮಾಡಿದ್ದಾರೆ. 'ನರಸಿಂಹ'ನ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ. ಕೆಲವೇ ನಿಮಿಷಗಳು ಶಿವಣ್ಣ ತೆರೆಮೇಲೆ ಕಾಣಿಸಿಕೊಂಡು ಮೋಡಿ ಮಾಡಿದ್ದಾರೆ. ಹ್ಯಾಟ್ರಿಕ್ ಹೀರೋಗೆ ನಿಧಾನವಾಗಿ ಪರಭಾಷೆಗಳಿಂದ ಅವಕಾಶಗಳು ಬರಲು ಆರಂಭವಾಗಿದೆ.
'ಜೈಲರ್' ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ರಜನಿಕಾಂತ್, ಶಿವಣ್ಣ, ಮೋಹನ್ ಲಾಲ್ ಸಿಗರೇಟ್ ಸೇದುವ ಸೀನ್ ಸಖತ್ ಹೈಲೆಟ್ ಆಗಿದೆ. ಆ ಸನ್ನಿವೇಶಕ್ಕೆ ಮೂವರು ಸ್ಟೈಲ್ ಆಗಿ ಧಮ್ ಹೊಡೆಯುವ ರೀತಿ, ಅದಕ್ಕೆ ಅನಿರುದ್ಧ್ ರವಿಚಂದರ್ ಬಿಜಿಎಂ ಎಲ್ಲಾ ಸೇರಿ ತೆರೆಮೇಲೆ ಮ್ಯಾಜಿಕ್ ಕ್ರಿಯೇಟ್ ಆಗಿದೆ. ಅದರಲ್ಲೂ ಶಿವಣ್ಣನ ಎಂಟ್ರಿ, ಆ ಎಲಿವೇಷನ್, ಸಿಗರೇಟ್ ಸೇದುವ ಸ್ವ್ಯಾಗ್ ಪರಭಾಷಿಕರಿಗೂ ಇಷ್ಟವಾಗಿದೆ. ಆ ಸನ್ನಿವೇಶದಲ್ಲಿ ಸೆಂಚುರಿ ಸ್ಟಾರ್ ನಿಜಕ್ಕೂ ತಲೈವಾನ ನಿವಾಳಿಸಿ ಬಿಸಾಕಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.

ಡಾ. ರಾಜ್ಕುಮಾರ್ ತಮ್ಮ ಸಿನಿಮಾಗಳಲ್ಲಿ ಸಿಗರೇಟ್, ಮದ್ಯ ಸೇವಿಸುವ ಸನ್ನಿವೇಶಗಳನ್ನು ಒಪ್ಪುತ್ತಿರಲಿಲ್ಲ. ಸಮಾಜಕ್ಕೆ ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಈ ನಿಯಮ ರೂಢಿಸಿಕೊಂಡಿದ್ದರು. 'ಆಕಸ್ಮಿಕ', 'ಶಬ್ಧವೇದಿ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಅಣ್ಣಾವ್ರು ಇಂತಹ ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು.
ತಮಿಳು ಬಿಬಿಸಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟ ಶಿವರಾಜ್ಕುಮಾರ್ಗೆ ಇದೇ ವಿಚಾರದ ಬಗ್ಗೆ ಪ್ರಶ್ನೆ ಎದುರಾಗಿದೆ. ಡಾ. ರಾಜ್ಕುಮಾರ್ ತಮ್ಮ ಇಮೇಜ್ ಬಗ್ಗೆ ಬಹಳ ಜಾಗ್ರತೆ ವಹಿಸಿದ್ದರು. ತೆರೆಮೇಲೆ ಸಿಗರೇಟ್ ಸೇದಬಾರದು, ಮದ್ಯ ಸೇವಿಸಬಾರದು ಎನ್ನುವ ನಿಮಯಗಳನ್ನು ಹಾಕಿಕೊಂಡಿದ್ದರು. ಆದರೆ ನೀವು ತೆರೆಮೇಲೆ ಅದನ್ನು ಮೀರಿದ್ದೀರಾ, ಅಲ್ಲವೇ? ತಂದೆ ಅದಕ್ಕೆ ಏನು ಹೇಳಲಿಲ್ಲವೇ? ಎನ್ನುವ ಪ್ರಶ್ನೆಗೆ ಶಿವಣ್ಣ ಉತ್ತರಿಸಿದ್ದಾರೆ. "ಓಂ ಸಿನಿಮಾದಲ್ಲೇ ಇದು ಮೊದಲು ಶುರುವಾಯಿತು. ಅಪ್ಪ ಈ ಕಾಲಕ್ಕೆ ಬದಲಾಗಬೇಕು, ಕಥೆಗೆ ತಕ್ಕಂತೆ ಎಂದು ಹೇಳಿದ್ದರು.

"ಅಪ್ಪ ಹೇಳುತ್ತಿದ್ದರು. ಎಲ್ಲಾ ನನ್ನ ತರಹವೇ ಇರಬೇಕು ಅಂತೇನು ಇಲ್ಲ. ಮಕ್ಕಳು ಅವರದ್ದೇ ಶೈಲಿ ರೂಢಿಸಿಕೊಳ್ಳಬೇಕು. ಅವರು ಎಂದೂ ಇದು ಮಾಡಬೇಡ, ಅದು ಮಾಡಬೇಡ ಎಂದು ಹೇಳಲಿಲ್ಲ. ನಿಜ ಜೀವನದಲ್ಲೂ ಅಷ್ಟೇ, ಸಿನಿಜೀವನದಲ್ಲೂ ಕೂಡ ಅಷ್ಟೇ. ಯಾವುದೇ ನಿರ್ಬಂಧ ಹೇರಲಿಲ್ಲ. ನಾವು ಎಲ್ಲಿ ಹೋಗುತ್ತೇವೆ ಏನು ಮಾಡುತ್ತೇವೆ ಎಂದು ಯಾವತ್ತೂ ಚೆಕ್ ಮಾಡುತ್ತಿರಲಿಲ್ಲ." ಎಂದಿದ್ದಾರೆ.
'ಜೈಲರ್' ಚಿತ್ರದಲ್ಲಿ ನಿಮ್ಮ ಪಾತ್ರ ಕೊಂಚ ಡಾರ್ಕ್ ಶೇಡ್ ಇದೆ, ನಿಮ್ಮ ಸಂಡಿಗನನ್ನು ಫ್ಯಾನ್ಗೆ ನೇತಾಕುವ ಸನ್ನಿವೇಶ ನೋಡಿದರೆ ಹಾಗನಿಸುತ್ತದೆ. ಇದು ನಿಮ್ಮ ಇಮೇಜ್ಗೆ ಧಕ್ಕೆ ತರುವಂತಿದೆ ಎನ್ನಿಸಲಿಲ್ಲವೇ? ಎನ್ನುವ ಪ್ರಶ್ನೆಗೆ "ನರಸಿಂಹ ಪಾತ್ರ ಆ ರೀತಿ ಇರುತ್ತದೆ. ಆ ಸನ್ನಿವೇಶದಲ್ಲಿ ಎದುರುಗಿರುವ ಪಾತ್ರ ಯಾವುದು ಅನ್ನೋದು ಮುಖ್ಯ. ಅವರು ಕೆಟ್ಟವರೇ ಇರಬಹುದು, ಒಳ್ಳೆಯವರೇ ಇರಬಹುದು. ಮಾತನಾಡುವಾಗ ಎಚ್ಚರಿಕೆ ಇರಬೇಕು."
"ಯಜಮಾನನ ಬಳಿ ಭೇಷ್ ಎನಿಸಿಕೊಳ್ಳಬೇಕು ಅಂತ ಬಕೆಟ್ ಹಿಡಿಯುವ ಕೆಲಸ ಮಾಡಬಾರದು. ಬಂದವರು ಯಾರು? ಏನು? ಎಂದು ವಿಚಾರಿಸಬೇಕು. ಬಂದ ಕೂಡಲೇ ಕತ್ತೆ ತೆಗಿ ಅನ್ನೋದು ತಪ್ಪು. ನರಸಿಂಹನಿಗೆ 'ಜೈಲರ್' ಒಳ್ಳೆ ಅನುಬಂಧ ಇರುತ್ತದೆ. ಅದನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ವರ್ತಿಸಬೇಕು. ಹಾಗಾಗಿ ಅಂತಹ ಪಾತ್ರ ಮಾಡಿದ್ದಕ್ಕೆ ಬೇಸರ ಏನು ಇಲ್ಲ" ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಶಿವಣ್ಣ ನಟನೆಯ 'ಘೋಸ್ಟ್' ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. 'ಭೈರತಿ ರಣಗಲ್', 'ಕರದಕ ದಮನಕ', '45' ಸಿನಿಮಾಗಳ ಚಿತ್ರೀಕರಣ ನಡೀತಿದೆ. ಮತ್ತೊಂದಷ್ಟು ಕಥೆಗಳ ಬಗ್ಗೆ ಚರ್ಚೆ ನಡೀತಿದೆ. ಇನ್ನು ಶಿವಣ್ಣ ಮಲಯಾಳಂ ಸಿನಿಮಾದಲ್ಲೂ ನಟಿಸುವ ಬಗ್ಗೆ ಗುಸುಗುಸು ಕೇಳಿಬರುತ್ತಿದೆ. ಶಿವಣ್ಣ ಕೂಡ ನಟಿಸೋ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.


Click it and Unblock the Notifications











